ಬಹುತೇಕ ಯಶಸ್ವೀ ವ್ಯಕ್ತಿಗಳ ಗುಣ ಇದು

 ಬಹುತೇಕ ಯಶಸ್ವೀ ವ್ಯಕ್ತಿಗಳ ಗುಣ ಇದು
ಮೊದಲು ಪಾಠ ನಂತರ ಆಟ !
*******************
ಅದು 1960ನೇ ಇಸವಿ. ಸ್ಟ್ಯಾನ್‌ಫೋರ್ಡ್ ವಿವಿಯ ಪ್ರೊಫೆಸರ್ ಆಗಿದ್ದ  ವಾಲ್ಟರ್ ಮೈಕೆಲ್ ಎಂಬವರು  ಮನಶ್ಯಾಸ್ತ್ರ  ಸಂಬಂ ಕೆಲವು ಮಹತ್ವದ ಅಧ್ಯಯನ ಆರಂಭಿಸುತ್ತಾರೆ.
ಅವುಗಳ ಪೈಕಿ 4 ರಿಂದ 6 ವಯೋಮಾನದ ನೂರು ವಿದ್ಯಾರ್ಥಿಗಳ ಮೇಲೆ ಕೈಗೊಂಡ ಪ್ರಯೋಗವೂ ಒಂದು. ವಾಲ್ಟರ್ ಮತ್ತು ಅವರ ತಂಡ ಅಂದು ಹೊರ ಹಾಕಿದ ಸತ್ಯವು ವ್ಯಕ್ತಿಯೊಬ್ಬನ ಆಹಾರ ಸೇವನೆ, ಕಾರ್ಯಕ್ಷಮತೆ ಮತ್ತು ಆತನ ಜೀವನದ ಯಶಸ್ಸಿನ ನಡುವೆ ಇರುವ ಅಂತರ್ ಸಂಬಂಧವನ್ನು ಅತ್ಯಂತ ಸಮರ್ಥವಾಗಿ ವಿವರಿಸುತ್ತದೆ. ಹಾಗಾದರೆ ಅಂದು ನಡೆದ ಸಂಶೋಧನೆ ಏನು, ಮಿಗಿಲಾಗಿ ಅದರಿಂದ ನಮಗೇನು ಪ್ರಯೋಜನ ಎಂಬ ಬಗ್ಗೆ ಹೊರಳೋಣ.
ಮಾರ್ಷ್ಮಾಲೋ ಮಿಠಾಯಿ ಪ್ರಯೋಗ :
ಮಕ್ಕಳನ್ನೆಲ್ಲ ಒಂದು ಕೊಠಡಿಗೆ ಕರೆಸಿ, ಅವರ ಡೆಸ್ಕ್ ಎದುರು ಒಂದು ಮಾರ್ಷ್ಮಾಲೋ ಮಿಠಾಯಿ ಇಡುವ ವಾಲ್ಟರ್ ಮಕ್ಕಳೆದುರು ಒಂದು ಸವಾಲನ್ನು ಇಟ್ಟಿದ್ದ.
'' ನೋಡಿ ಮಕ್ಕಳೆ.. ಪ್ರತಿಯೊಬ್ಬರ  ಎದುರೂ ಒಂದು ಮಾರ್ಷ್ಮಾಲೋ ಮಿಠಾಯಿ ಇಟ್ಟಿದ್ದೇನೆ ಅಲ್ವಾ..? ನಿಮಗೆಲ್ಲ ಬಾಯಿಯಲ್ಲಿ ನೀರೂರಿಬಹದು ತಾನೆ. ನಾನು ಕೆಲವು ಕಾಲ ನಿಮ್ಮನ್ನಷ್ಟೇ ಬಿಟ್ಟು ಆಚೆ ಹೋಗಿರುತ್ತೇನೆ. ಮಿಠಾಯಿಯನ್ನು ನೀವು ತಿನ್ನಬಹುದು. ತಿನ್ನದೆಯೂ ಇರಬಹದು. ನಿಮ್ಮಲ್ಲಿ ಯಾರು ಮಾರ್ಷ್ಮಾಲೋ ಮಿಠಾಯಿ ತಿನ್ನದೇ ಹಾಗೇ ಉಳಿಸಿಕೊಂಡಿರುತ್ತೀರಲ್ಲ.. ಅವರಿಗೆ ಮಾತ್ರ ಮತ್ತೆ ಬಂದಾಗ ಮತ್ತೊಂದನ್ನು ಬಹುಮಾನವಾಗಿ ಕೊಡುತ್ತೇನೆ. ಯಾರು ಮಿಠಾಯಿ ತಿಂದು ಹಾಕುತ್ತೀರಲ್ಲ. ಅವರಿಗೆ ಇನ್ನೊಂದು ಮಿಠಾಯಿ ಇಲ್ಲ  ನೆನಪಿರಲಿ.'' ಎಂದು ಹೇಳಿ ಆಚೆ ಹೋಗಿರುತ್ತಾನೆ.
ಇಲ್ಲಿದ್ದ  ಸವಾಲು ಸರಳವಾಗಿತ್ತು. ತಕ್ಷಣ ತಿಂದವರಿಗೆ ಒಂದೇ ಮಿಠಾಯಿ..ತಿನ್ನದೇ ಉಳಿಸಿಕೊಳ್ಳುವ ಸಹನೆ ಪರೀಕ್ಷೆಯಲ್ಲಿ  ಗೆದ್ದವರಿಗೆ ಎರಡು !
ಹದಿನೈದು ನಿಮಿಷ ಮಕ್ಕಳನ್ನು ರೂಮ್ ನಲ್ಲಿಯೇ ಬಿಟ್ಟು ಆಚೆ ಹೋಗಿರುತ್ತಾನೆ ವಾಲ್ಟರ್.
ಕೊಠಡಿಯಲ್ಲಿ ಮಾರ್ಷ್ಮಾಲೋ ಮಿಠಾಯಿ ಎದುರು ಕುಳಿತ ಮಕ್ಕಳ ಆ ಹದಿನೈದು ನಿಮಿಷದ ಸಿಸಿಟಿವಿ ಫೂಟೇಜ್ ಏನಾದರೂ ಇದ್ದರೆ, ಹೇಗಿದ್ದೀತು ಊಹಿಸಿಕೊಳ್ಳಿ. ಖಂಡಿತವಾಗಿಯೂ ನಗು ಬರಿಸುವ, ಚಿಕ್ಕ ಮನರಂಜನೆಯ ಸರಕು ಅದಾಗಿರುತ್ತದೆ. ಮಕ್ಕಳೆದುರು ಅವರಿಷ್ಟದ ಚಾಕೋಲೇಟ್ ಇಟ್ಟು ತಿನ್ನಬಾರದು ಎಂದು ಹೇಳಿ ಆಚೆ ಬಂದರೆ ಅವರ ಮುಖದ ಹಲ್ ಚಲ್‌ಗಳು ಹೇಗಿದ್ದೀತು ಮತ್ತೆ ? ವಾಲ್ಟರ್ ಹೋಗಿದ್ದೇ ತಡ ಕೆಲವರು ಗಬಕ್ ಎಂದು ಮಿಠಾಯಿಯನ್ನು ನುಂಗಿ ಹಾಕಿದರು. ಕೆಲವರು ಕಷ್ಟಪಟ್ಟು ಒಂದೆರಡು ನಿಮಿಷ ಬಾಯಿ ಚಪಲ ನಿಯಂತ್ರಿಸಿಕೊಂಡರೂ, ಐದು ನಿಮಿಷದ ನಂತರ ಮಿಠಾಯಿ ಎತ್ತಿ ಬಾಯಿಯಲ್ಲಿ  ಇಟ್ಟುಕೊಂಡರು. ಬಹುತೇಕ ಮಕ್ಕಳು ಮಿಠಾಯಿಗೆ ಶರಣಾದರೂ, ಅವರಲ್ಲಿ  ನಾಲ್ಕಾರು ಮಕ್ಕಳು ಮಾತ್ರ ಗಟ್ಟಿ ಮನಸ್ಸು ಮಾಡಿ ಹದಿನೈದು ನಿಮಿಷದ ತನಕ ಹಾಗೆಯೇ ಉಳಿಸಿಕೊಂಡು ಇನ್ನೊಂದನ್ನು ಬಹುಮಾನವಾಗಿ ಪಡೆದರು.
ಪ್ರಯೋಗದ ಆಧಾರದಲ್ಲಿ 1972ರಲ್ಲಿ ವಾಲ್ಟರ್ ಪ್ರಕಟಿಸಿದ ಇದು ಮಾರ್ಷ್ಮಾಲೋ ಮಿಠಾಯಿ ಪ್ರಯೋಗ ಎಂದು ವಿಶ್ವ ವಿಖ್ಯಾತವಾಗಿದೆ. ಪ್ರಯೋಗದ ಮತ್ತಷ್ಟು ಕುತೂಹಲದ ಅಂಶಗಳು ಕೆಲವು ವರ್ಷದ ನಂತರ ಕಾಣತೊಡಗಿದವು.
ವರ್ಷಗಳು ಉರುಳಿದಂತೆ ಮಿಠಾಯಿ ಪ್ರಯೋಗ ಎದುರಿಸಿದ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ಪ್ರತಿಯೊಬ್ಬರ ಚಲನ ವಲನವನ್ನೂ, ಸಾಧನೆಯನ್ನೂ ವಾಲ್ಟರ್ ದಾಖಲಿಸಿ, ವರೆಗೆ ಹಚ್ಚಿದಾಗ ಅಚ್ಚರಿಯ ಸಂಗತಿಗಳು ಕಂಡುಬರುತ್ತವೆ.
15 ನಿಮಿಷ ಮಿಠಾಯಿಯನ್ನು  ತಿನ್ನದೆ ಗಟ್ಟಿತನ ತೋರಿ ಎರಡನೆ ಮಿಠಾಯಿ ಗೆದ್ದ  ಮಕ್ಕಳ ಶೈಕ್ಷಣಿಕ ಸಾಧನೆ ಅತ್ಯುತ್ತಮವಾಗಿರುತ್ತದೆ. ಮಾದಕ ವಸ್ತುಗಳತ್ತ ಆಕರ್ಷಣೆ, ದಡೂತಿ ಸಮಸ್ಯೆ ಇವರಲ್ಲಿ ಅಷ್ಟಾಗಿ ಕಾಣುವುದಿಲ್ಲ, ಹೊರತಾಗಿ ಒತ್ತಡ ಎದುರಿಸುವ ಕಾರ್ಯಕ್ಷಮತೆ, ಸಾಮಾಜಿಕ ಹೊಂದಾಣಿಕೆ ಗುಣ ತೋರುತ್ತಾರೆ. ಒಟ್ಟಾರೆ ಹೇಳುವುದಾದರೆ, ಅವರು ಜೀವನದಲ್ಲಿ ಮುಂದೆ ಬಂದಿರುತ್ತಾರೆ.
ನಂತರದ ನಲವತ್ತು ವರ್ಷಗಳ ಅವಗೆ ಇವರ ಕೆರಿಯರ್ ಗ್ರಾಫ್ ದಾಖಲಿಸಿದಾಗಲೂ, ಕಂಡು ಬರುವ ಅಂಕಿ ಅಂಶಗಳು, ಅಂದು ಮಿಠಾಯಿ ತಿನ್ನುವಲ್ಲಿ ಸಂಯಮ ಪ್ರದರ್ಶಿಸಿ ಇನ್ನೊಂದನ್ನು ಗೆದ್ದವರು ಎಲ್ಲಿ ಹೋದರೂ ಏನೋ ಒಂದು ಸಾಧನೆಯನ್ನು ತೋರಿದ್ದು ವಿಶೇಷ. ಅಂದರೆ, ಖುಷಿ, ಮೋಜಿನ ವಿಚಾರದಲ್ಲಿ ಮಾನಸಿಕ ಸಂಯಮ ಜೀವನದಲ್ಲಿ ಯಶಸ್ಸಿಗೆ ಅತ್ಯಂತ ನಿರ್ಣಾಯಕ ಎಂಬುದು ಪ್ರಯೋಗ ಹೊರಹಾಕಿದ  ಒಂದು ವಾಕ್ಯದ ಸಂದೇಶ. ಇನ್ನೊಂದೆಡೆ ಮಿಠಾಯಿ ಸಿಗುತ್ತಲೇ ಬರಗೆಟ್ಟು ತಿಂದವರ ಕತೆಯೂ ಕುತೂಹಲಕರವಾಗಿತ್ತು. ಇವರಲ್ಲಿ ಹಲವರು ಕುಡುಕರು, ಮಾದಕ ವಸ್ತುಸೇವನೆ, ದಿವಾಳಿಕೋರತನ, ದಡೂತಿ ಸಮಸ್ಯೆಯಿಂದ ಜೀವನದ ಹದ ತಪ್ಪಿರುವುದಕ್ಕೆ ನಿದರ್ಶನರಾಗುತ್ತಾರೆ.
ನಮ್ಮ ಸುತ್ತ ಗಮನಿಸಿದಾಗಲೂ ಇದಕ್ಕೆ ಹತ್ತಾರು ನಿದರ್ಶನ ಸಿಗುತ್ತದೆ. ಸಣ್ಣ ಉದಾಹರಣೆಯನ್ನೇ ಕೊಡುವುದಾದರೆ, ನೀವು ಈ ಕ್ಷಣ ಟೀವಿ ನೋಡುವುದನ್ನು ಬಿಟ್ಟು , ಹೋಮ್ ವರ್ಕ್ ಕೈಗೆತ್ತುಕೊಂಡರೆ ನಿಮ್ಮ ಒಂದು ಕೆಲಸ/ಕಲಿಕೆ ಮುಗಿದಿರುತ್ತದೆ. ನಿಮ್ಮ ಕಲಿಕೆ ಅಷ್ಟರ ಮಟ್ಟಿಗೆ ಸುಧಾರಿಸುತ್ತದೆ.
ಬಾಯಿ ಚಪಲಕ್ಕೆ ಬಿದ್ದು, ಬೀದಿಯಲ್ಲಿ  ಸಿಗುವ ಎಣ್ಣೆ ಕರಕಲುಗಳನ್ನು ಗಳಪುವುದಕ್ಕಿಂತ ಮನೆಗೆ ಹೋಗುವ ತನಕ ಕಾಯುವ ಸಹನೆ ಇದ್ದರೆ, ಹೆಚ್ಚು ಆರೋಗ್ಯಕರ ತಿಂಡಿ ತಿನಿಸು ತಿಂದು ನಿಮ್ಮ ಆರೋಗ್ಯವನ್ನು ನಿಮ್ಮ ಕೈ ಯಲ್ಲಿ  ಟ್ಟುಕೊಳ್ಳಬಹದು.
ಬೆಳಗ್ಗೆ ಎದ್ದು, ದಿನವೂ ಹತ್ತು ಸೂರ್ಯ ನಮಸ್ಕಾರ ಹೆಚ್ಚಾಗಿ ಮಾಡುವ ಸಹನೆ ರೂಢಿಸಿಕೊಂಡರೆ, ನಿಮ್ಮ  ಆರೋಗ್ಯ ನಿಮ್ಮ ಕೈಯಲ್ಲಿ  ಇರುತ್ತದೆ. ಹೆಚ್ಚು ಲವಲವಿಕೆಯಲ್ಲಿ ಇರುತ್ತೀರಿ.
ಹೀಗೆ .. ಇದಕ್ಕೆ ಸಾಕಷ್ಟು ನಿದರ್ಶನ ಹೇಳುತ್ತಲೇ ಹೋಗಬಹುದು.
ತಾತ್ಕಾಲಿಕ ಪ್ರಲೋಬನೆಗಳಿಗೆ ಬಲಿಯಾಗುವ ಬದಲು, ಶಿಸ್ತಿನ ಸಾಧನೆಯ ಮಾರ್ಗ ಅನುಸರಿಸಿದವನು ಜೀವನದಲ್ಲಿ ಯಶಸ್ಸು ತಾನಾಗಿಯೇ ಬರುತ್ತದೆ. ‘ಯಶಸ್ವೀ ಮಾರ್ಗದಲ್ಲಿ ಮೋಜು ಮಸ್ತಿಗೆ ಅವಸರ ಇಲ್ಲ ’ ಎಂಬ ಮಾತಿನ ಅರ್ಥವೇ ಇದು. ಇದನ್ನೇ ಇಂಗ್ಲೀಷಿನಲ್ಲಿ ಡಿಲೇಡ್ ಗ್ರೇಟಿಫಿಕೇಶನ್ ಅನ್ನುತ್ತಾರೆ. ಇಲ್ಲೊಂದು ಅಚ್ಚರಿಯ ವಿಚಾರ ನಮ್ಮ ಮನಸ್ಸಿಗೆ ಬರುತ್ತದೆ. ಕೆಲವು ಮಕ್ಕಳು ಹುಟ್ಟಾ  ಸಹನಶೀಲರಾಗಿದ್ದವರು ಮಾತ್ರ, ಕೈಗೆತ್ತಕೊಂಡ ಕೆಲಸದಲ್ಲಿ ಯಶಸ್ಸು ಸಾಸುವುದು ಸಾಧ್ಯವೇ ? ಅಥವಾ ಈ ಮಹತ್ವದ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದಕ್ಕೇನಾದರೂ ಅವಕಾಶ ಇದೆಯೇ ?
' ಮೊದಲು ಸಜ, ಆ ನಂತರ ಮಜ' ಎಂಬುದಾಗಿ ಮನಸ್ಸು ಗಟ್ಟಿಗೊಳಿಸುವ ನಮ್ಮ  ಅಂತಃಶಕ್ತಿ ಸಾಧ್ಯವಾಗುವುದು ಹೇಗೆ ?
ಇದನ್ನು ಕಂಡುಕೊಳ್ಳಲು ರೊಚೆಸ್ಟರ್ ವಿವಿ ಸಂಶೋಧಕರು ಮಾಷ್ಮ್ಮೆರ್ಲ್ಲೋ ಮಿಠಾಯಿ ಪ್ರಯೋಗದಲ್ಲಿ   ತುಸು ಬದಲಾವಣೆ ಮಾಡಿಕೊಂಡು ಮತ್ತೆ ಕೈಗೆತ್ತಿಕೊಳ್ಳುತ್ತಾರೆ. ಈ ಬಾರಿ ಮಾರ್ಷ್ಮಾಲೋ ಮಿಠಾಯಿ ಇಡುವ ಮೊದಲಿಗೆ ಮಕ್ಕಳಲ್ಲಿ ಎರಡು ಗುಂಪನ್ನು ಮಾಡುತ್ತಾರೆ. ಅವರಲ್ಲಿ ಮೊದಲ ಗುಂಪಿನ ಮಕ್ಕಳಿಗೆ ಮಿಠಾಯಿ ಜನತೆಗೆ ಕ್ರೆಯಾನ್ ಪೆಟ್ಟಿಗೆಯನ್ನು ಇಟ್ಟು, ತಿನ್ನದೇ ಇಟ್ಟುಕೊಂಡರೆ  ದೊಡ್ಡ ಕ್ರೆಯಾನ್ ಕೊಡುವುದಾಗಿ ಹೇಳುತ್ತಾರೆ. ಆದರೆ ಗೆದ್ದವರಿಗೆ ತಕ್ಷಣ ಹೇಳಿದಂತೆ ಬಹುಮಾನ ಕೊಡುವುದೇ ಇಲ್ಲ.  ಅದೇ ರೀತಿ ಇನ್ನೊಮ್ಮೆ ಇದೇ ಮಕ್ಕಳಿಗೆ ಮಿಠಾಯಿ ಜತೆಗೆ ಸ್ಟಿಕರ್ ಇಟ್ಟು  ತಿನ್ನದೇ ಇಟ್ಟುಕೊಂಡವರಿಗೆ ದೊಡ್ಡ ಸ್ಟಿಕ್ಕರ್ ಕೊಡುವುದಾಗಿ ಹೇಳಿದರೂ, ಅದನ್ನೂ  ಈಡೇರಿಸದೆ, ಸಣ್ಣದನ್ನೇನನ್ನೊ ಕೊಟ್ಟು  ಮಾತಿಗೆ ತಪ್ಪುತ್ತಾರೆ. ಒಟ್ಟಾರೆ  ತುಸು ಅಪನಂಬಿಕೆಯ ವಾತಾವರಣ ಉಂಟು ಮಾಡುತ್ತಾರೆ.
ಇನ್ನೊಂದು ಗುಂಪಿಗೂ ಹೀಗೇ ಪ್ರಯೋಗವನ್ನು ಮಾಡಿದರೂ, ಗೆದ್ದವರಿಗೆ ಇಟ್ಟ  ಬಹುಮಾನದಲ್ಲಿ  ಮೊದಲು  ಹೇಳಿದ್ದಕ್ಕಿಂತ ಒಳ್ಳೆಯ ಬಹುಮಾನ ಕೊಟ್ಟು ಹುರಿದುಂಬಿಸಲಾಗುತ್ತದೆ. ಉದಾಹರಣೆಗೆ ಒಂದು ಕ್ರೆಯಾನ್ ಪೆಟ್ಟಿಗೆ ಬಹುಮಾನ ಘೋಷಿಸಿದರೂ ಗೆದ್ದವರಿಗೆ ಎರಡು ಕ್ರೆಯಾನ್ ಪೆಟ್ಟಿಗೆ ಕೊಡುವುದು.. ಹೀಗೆ.
ಇದರ ಪರಿಣಾಮ ಏನಿರಬಹದು ಎಂದು ನೀವೇ ಊಹಿಸಬಹದು. ಅಪನಂಬಿಕೆ ಪ್ರಯೋಗದ ಗುಂಪಿನ ಮಕ್ಕಳಿಗೆ ಸಂಶೋಧಕರ ಮಾತನ್ನು ಗೌರವಿಸುವುದಕ್ಕೆ ಕಾರಣವೇ ಇರಲಿಲ್ಲ. ಅದಕ್ಕಾಗಿ ಎರಡನೆ ಬಾರಿ ತಮಗೇನೋ ಸಿಕ್ಕೀತು ಎಂಬ ಭರವಸೆ ಇಲ್ಲದೆ ಕಾರಣ, ಮಕ್ಕಳೂ ಸಿಕ್ಕ ಮಿಠಾಯಿ ತಿನ್ನುವುದನ್ನೂ ಬಿಟ್ಟು  ತಮ್ಮ ಸಹನೆ ಪರೀಕ್ಷೆಯ ಸವಾಲನ್ನೇ ಸ್ವೀಕರಿಸುವುದಿಲ್ಲ..
ಆದರೆ ಎರಡನೆ ಗುಂಪಿನಲ್ಲಿ ಮಕ್ಕಳಲ್ಲಿ ಸಂಶೋಧಕರ ಬಗ್ಗೆ ಸಕಾರಾತ್ಮಕ ಧೋರಣೆ ಉಂಟಾಗಿರುತ್ತದೆ. ಪ್ರತಿ ಬಾರಿಯೂ ಕೊಟ್ಟ ಭರವಸೆಯನ್ನು ಈಡೇರಿಸಿದ್ದ ಕಾರಣ ಇವರ ತುಡಿತ ಬೇರೆಯೇ ಇತ್ತು. 1) ಬಹುಮಾನಕ್ಕಾಗಿ ಕಾಯುವುದು ಅರ್ಥಪೂರ್ಣ ಎನ್ನಿಸಿತ್ತು 2) ನಾನೂ ಸಹನೆಯಿಂದ ಕಾಯ್ದು  ಗೆಲುವನ್ನು ಸಾಸಬಲ್ಲೆ ಎಂಬ ಆತ್ಮ ವಿಶ್ವಾಸವೂ ಇತ್ತು.  ಪರಿಣಾಮವಾಗಿ ಎರಡನೆ ಗುಂಪಿನ ಸಹನಾಶಕ್ತಿ ಮೊದಲಿನ ಗುಂಪಿಗಿಂತ ನಾಲ್ಕು ಪಟ್ಟು ಹೆಚ್ಚಾಗಿತ್ತು.
ಅಂದರೆ ಮಗುವೊಂದರ ಸಹನ ಶಕ್ತಿ ಎಂಬುದು ಹುಟ್ಟಿದಾಕ್ಷಣ ಬರುವಂಥದ್ದಲ್ಲ, ಹೊರತಾಗಿ ವ್ಯವಸ್ಥಿತ ವಾತಾವರಣದಲ್ಲಿ ಇದನ್ನು ಮಕ್ಕಳಲ್ಲಿ ರೂಢಿಸುವುದು ಸಾಧ್ಯ ಎಂದಾಯಿತಲ್ಲವೇ. ನಿಜ. ಮಗುವಿನಲ್ಲಿ ಆತ್ಮ ವಿಶ್ವಾಸ ಬಿತ್ತುವಲ್ಲಿ ಆತನಿಗೆ ನೀಡುವ ಶೈಕ್ಷಣಿಕ ವಾತಾವರಣ ಅತ್ಯಂತ ಮುಖ್ಯವಾಗುತ್ತದೆ. ಕೆಲವೇ ನಿಮಿಷದ ಪ್ರಯೋಗವು ಮಕ್ಕಳಲ್ಲಿನ ನಂಬಿಕೆ ಅಥವಾ ಅಪನಂಬಿಕೆಯ ವಾತಾವರಣ ಅವರ ಚಟುವಟಿಕೆಯ ದಿಕ್ಕನ್ನೇ ಬದಲಿಸಿತಲ್ಲವೇ.
ಮೇಲಿನ ಪ್ರಯೋಗದಿಂದ ನಾವಾಗಲಿ, ನೀವಾಗಲಿ ಕಲಿಯಬಹುದಾದ ಪಾಠ ಏನು ?
'ಮೊದಲು ಪಾಠ ಆಮೇಲೆ ಆಟ' ಎಂಬ ತತ್ವದಲ್ಲಿ ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುವುದಾದರೂ ಹೇಗೆ ?
ಇದಕ್ಕೂ ಮೊದಲು ನಾವು ಒಂದು ವಿಷಯವನ್ನು ಇಲ್ಲಿ ಸ್ಪಷ್ಟ ಪಡಿಸಬೇಕಾಗುತ್ತದೆ.ಒಂದಿಲ್ಲೊಂದು ಕಾರಣಕ್ಕೆ ಮಾರ್ಷ್ಮಾಲೋ ಮಿಠಾಯಿ ಪ್ರಯೋಗವು ಇದೀಗ ಜಗತ್ಪ್ರಸಿದ್ಧವಾಗಿದೆ. ಎಲ್ಲೆಡೆ ಇದರ ಮಾಹಿತಿಗಳು ಸಿಗುತ್ತವೆ. ಹಾಗೆ ನೋಡಿದರೆ, ಇದೊಂದು ಸರಳ ಅಧ್ಯಯನ.
ನಮಗೆಲ್ಲ ಗೊತ್ತು ಮಾನವನ ಬದುಕು ಮಾತ್ರ ಅತ್ಯಂತ ಸಂಕೀರ್ಣವಾದುದು ತಾನೆ. ಹಾಗೇ ಮನುಷ್ಯನ ವರ್ತನೆ ಒಬ್ಬರಿಂದ ಒಬ್ಬರಿಗೆ ತೀರಾ ಭಿನ್ನವಾಗಿದ್ದು, ಅವರ ಅನುಭವ, ಸಂವೇದನೆಗಳೇ ಭಿನ್ನವಾಗಿರುತ್ತವೆ. ಐದು ವರ್ಷದ ಹುಡುಗ ಮಾಷ್ಮ್ಮೆರ್ಲ್ಲೋ ಮಿಠಾಯಿ ಪ್ರಯೋಗದಲ್ಲಿ ಗೆದ್ದವನೇ ಇಡೀ ಜೀವನವನ್ನೇ ಗೆದ್ದುಬಿಡುತ್ತಾನೆ ಎಂಬುದು ಸತ್ಯದ ಸತ್ಯಂತ ಸರಳ ಪರಿಭಾಷೆಯಾದೀತು. ಯಾರೊಬ್ಬರ ಜೀವನವೂ ಆ ರೀತಿಯಲ್ಲಿ ಸರಳ ಸಾಧನಾ ಪಥ ಆಗಿರುವುದೇ ಇಲ್ಲ.
ಆದರೆ..
ಮೇಲಿನ ಅಧ್ಯಯವು ಕೆಲವು ಕನಿಷ್ಠ ಸತ್ಯವನ್ನು ನಮ್ಮ ಮುಂದೆ ಪ್ರಸ್ತುತಪಡಿಸಿದೆ. ಜೀವನದ ಯಾವುದೇ ಹಂತದಲ್ಲಿ, ಸಣ್ಣ ಪುಟ್ಟ ಕೆಲಸದಲ್ಲೂ ನಿಮಗೆ ಯಶಸ್ಸು ಬೇಕು ಎಂದಾದರೆ, ಮನಸ್ಸನ್ನು ಆಚೆ ಈಚೆ ಹರಿಬಿಡದೆ ಅಥವಾ ಸುಲಭದ ದಾರಿಗೆ ಹೊರಳದೆ ಹಿಡಿದ ಕೆಲಸವನ್ನು ಮುಗಿಸುವ ಹಟದಲ್ಲಿ ಶ್ರಮಿಸಬೇಕು ಎಂಬುದಂತೂ ಸತ್ಯ. ಅಲ್ಲೂ  ಕೈ ಕೆಸರಾದ ನಂತರ, ಬಾಯಿ ಮೊಸರು ಎಂಬ ನಾಣ್ನುಡಿ ಅನುಷ್ಠಾನ ಆಗಬೇಕು.
ಈ ತನಕದ ನಿಮ್ಮ ಸಾಧನೆ ಗಮನಿಸಿದಾಗ ನೀವೊಬ್ಬ  ಛಲಗಾರನಲ್ಲ ಎಂದು ಅನ್ನಿಸುತ್ತಿದ್ದರೂ, ಈ ಕ್ಷಣದಲ್ಲೂ  ನಿರ್ಧರಿಸುದರೂ ನಿಮ್ಮನ್ನು ನೀವು ತರಬೇತುಗೊಳಿಸುವುದಕ್ಕೆ ಅವಕಾಶ ಇದ್ದೇ ಇದೆ. ವಿಷಯ ಇಷ್ಟೇ, ನೀವು ನಿಮ್ಮಲ್ಲಿ ಸಣ್ಣ ಸಣ್ಣ ಬದಲಾವಣೆ ಹೆಜ್ಜೆಯನ್ನು ಅಳವಡಿಸಿಕೊಂಡು ಮುನ್ನುಗ್ಗಬೇಕು. ಮಕ್ಕಳ ಶಿಕ್ಷಣದ ವಿಚಾರದಲ್ಲೂ ಹಾಗೇಯೇ, ನಂಬುಗೆಯ ವಾತಾವರಣ ನಿರ್ಮಿಸಿದರೆ ಮಕ್ಕಳ  ಸಾಧನೆಯಲ್ಲಿ ಸುಧಾರಣೆ ಕಾಣುವುದು ಸಾಧ್ಯವಾಗುತ್ತದೆ.
ಅಂದರೆ ಜಿಮ್‌ಗೆ ಹೋಗಿ ಯಾವುದೇ ವಯಸ್ಸಿನಲ್ಲೂ ತ್ರಿ ಪ್ಯಾಕ್, ಸಿಕ್ಸ್ ಪ್ಯಾಕ್ ಮಾಂಸ ಖಂಡವನ್ನು ಬೆಳೆಸಿಕೊಳ್ಳುವಂತೆ, ನಮ್ಮ ಮನಸ್ಸಿಗೂ ಒಂದು ತರಬೇತಿಯಿಂದ ಮತ್ತೆ  ಕೆಲಸದಲ್ಲಿ ಸಂಯಮ, ಪರಿಶ್ರಮದಲ್ಲಿ ನಂಬಿಕೆಯನ್ನು  ಹುಟ್ಟಿಸಿಕೊಳ್ಳುವುದು ಸಾಧ್ಯವಿದೆ. ಅಷ್ಟೇ ಸಣ್ಣ ಸಣ್ಣ ಗುರಿಯನ್ನು ನಿಗದಿ ಮಾಡಿ, ಸಾಸಿ ಖುಷಿ ಕಾಣುವಂತೆ ತರಬೇತಿ ರೂಪಿಸಿಕೊಳ್ಳಬೇಕಾಗುತ್ತದೆ. 1) ಉತ್ತಮ ಫಲಿತಾಂಶಕ್ಕಾಗಿ ತುಸು ಕಾಯೋಣ 2) ನನಗೂ ಸಾಧನೆಯ ಸಾಮರ್ಥ್ಯ ಇದ್ದೇ ಇದೆ ಎಂಬ ಮನಸ್ಥಿತಿಯನ್ನು ತಂದುಕೊಳ್ಳುವುದು ಸಾಧ್ಯವಿದೆ. ಅದಕ್ಕೆ ಕೆಳಗಿನ ನಾಲ್ಕು ಹೆಜ್ಜೆಯನ್ನು ರೂಢಿಸಿಕೊಳ್ಳಬೇಕು.
1) ಅತ್ಯಂತ ಸಣ್ಣ ರೀತಿಯಲ್ಲಿ  ಆರಂಭಿಸಬೇಕು.
2) ಹೊಸ ಕೆಲಸವು ಅತ್ಯಂತ ಸುಲಭವಾಗಿದ್ದಲ್ಲಿ, ನೀವು ಉದಾಸೀನ ಮಾಡುವ ಪ್ರಶ್ನೆ  ಏಳುವುದಿಲ್ಲ.
3)ದಿನವೂ ಶೇಕಡಾ ಒಂದರಷ್ಟು ಸುಧಾರಣೆ ಕಂಡುಕೊಳ್ಳಬೇಕು.
4) ಮಾರನೇ ದಿನ ಮತ್ತೆ ಪ್ರಯತ್ನ ಮಾಡಬೇಕು.
5) ನಿರಂತರತೆಯನ್ನು ಇಟ್ಟುಕೊಳ್ಳಲು ಕೆಲವು ತಂತ್ರಗಳಿವೆ. ಅವನ್ನು ರೂಢಿಸಿಕೊಳ್ಳಬೇಕು.
6) ಯಾವುದೇ ಕೆಲಸವನ್ನು ವಿಳಂಬ ಮಾಡದೆ, 2 ನಿಮಿಷದಲ್ಲಿ ಆರಂಭಿಸುವ ಮಾರ್ಗ ಕಂಡುಕೊಳ್ಳಿ.


-ಮೂಲ : ಜೇಮ್ಸ್ ಕ್ಲಿಯರ್, ವರ್ತನಾ ತರಬೇತುದಾರ.
ಅನುವಾದ : ಸದಾನಂದ ಹೆಗಡೆ


Read More

ಮಳೆ ಮಾರುಕಟ್ಟೆಯಲ್ಲಿ ಅಂಕಿ ಸಂಕಿಗಳ ಸುಳಿವಿಲ್ಲ

ಮಳೆ ಮಾರುಕಟ್ಟೆಯಲ್ಲಿ  ಅಂಕಿ ಸಂಕಿಗಳ ಸುಳಿವಿಲ್ಲ
 ಕಳೆದ ವರ್ಷ ಅದ್ಯಾವ ಪರಿ ಬರಗಾಲ ಬಂದಿತ್ತು ಎಂಬುದು ಇತ್ತೀಚಿನ ಬಿರುಮಳೆಯಲ್ಲಿ  ನಮಗೆ ನೆನಪೇ ಆಗುತ್ತಿಲ್ಲ. ಅದಕ್ಕೂ ಹಿಂದಿನ ಎರಡು ವರ್ಷಗಳೂ ತೃಪ್ತಿಕರ ಮಳೆಯೇನೂ ಆಗಿರಲಿಲ್ಲ.  ರಾಜ್ಯದ ಒಣ ಬೇಸಾಯದ ಜಿಲ್ಲೆಯಲ್ಲಿ ಒಂದಾದ ನಂತರ ಒಂದರಂತೆ ನಿರಂತರವಾಗಿ ಮೂರು ನಾಲ್ಕು ವರ್ಷ ಬರಗಾಲವೇ ಆಗಿ, ಅಂತೂ ಈ ವರ್ಷ ತುಸು ಮಳೆ ಬೀಳುತ್ತಿದೆ.
ಮಳೆ ಹೊಯ್ಯದ ವರ್ಷ ಅಂತರ್ ಜಲ ಕುಸಿದು ಬೋರ್ ವೆಲ್‌ಗಳೂ ಬರಿದಾಗುತ್ತವೆ. ಟ್ಯಾಂಕರ್‌ಗಳಲ್ಲಿ  ನೀರು ಸರಬರಾಜು ಸಮಸ್ಯೆ, ಕನಿಷ್ಠ  ನೀರು ಬಳಸುವ ನಿಟ್ಟಿನಲ್ಲಿ ಜಾಗೃತಿ, ಜನ ಜಾನುವಾರುಗಳ ಬವಣೆ, ಕನಿಷ್ಠ ನೀರಿನ ಕೃಷಿ ಪ್ರಯೋಗದ ಕತೆಗಳು, ಭೂಮಿಯ ತಾಪಮಾನ ಏರುತ್ತಿರುವ ಅಪಾಯವೂ ಚರ್ಚೆಗೆ ಬಂದವು. ಮಳೆಗಾಗಿ ದೇವಸ್ಥಾನಗಳಲ್ಲಿ  ಪೂಜೆ, ಕೊನೆಗೆ ಕತ್ತೆಗಳ ಮೆರವಣಿಗೆಯೂ ನಡೆದವು. ಜಪ್ಪಯ್ಯ ಅಂದರೂ ಮಳೆ ಬರಲಿಲ್ಲ. ಕಾಡು ಕಡಿದ ಕಾರಣವೇ ಬರಗಾಲ ಬರುತ್ತಿದೆ ಎಂದು ಎಲ್ಲೆಡೆ ವನಮಹೋತ್ಸವ ಆಚರಿಸಿ ಭಾಷಣ, ಚಿಂತನ ಮಂಥನವೂ ನಡೆಯಿತು..
ಅಂತೂ ಈ ವರ್ಷ ಮಳೆ ಬಂದಿದೆ. ವನಮಹೋತ್ಸವಗಳು ಹೆಚ್ಚು ಸದ್ದು ಮಾಡುತ್ತಿಲ್ಲ. ನೀರು ಇಂಗಿಸುವ ಕುರಿತು ಜಾಗೃತಿಯ ಮಾತೇ  ಇಲ್ಲ. ಮಳೆಯ ರಭಸಕ್ಕೆ ಜನರೆಲ್ಲ ತಮ್ಮಷ್ಟಕ್ಕೆ  ಮುಸುಕೆಳೆದು ಒಳಕ್ಕೆ ಸೇರಿಕೊಂಡುಬಿಟ್ಟಿದ್ದಾರೆ.
ಬರ ವೈರಾಗ್ಯವು ನಮಗೇನು ಹೊಸದಲ್ಲ. ಬರಗಾಲ ಎದುರಿಸಿದ ಇತ್ತೀಚಿನ ದಶಕದ ರಾಜ್ಯ ಸರಕಾರಗಳು, ಅವುಗಳ ಯೋಜನೆಗಳು ನಮ್ಮ ನೆನಪಿನಿಂದ ಮಾಸಿಲ್ಲ.  ಬಯಲು ಸೀಮೆಯ  ಇತಿಹಾಸ ಗಮನಿಸಿದರೆ ನೂರು ವರ್ಷದಲ್ಲಿ 70 ವರ್ಷ ಸರಿಯಾಗಿ ಮಳೆಯಾಗದ ಬಗ್ಗೆಯೇ  ಸರಕಾರಿ ದಾಖಲೆಯಲ್ಲಿ  ಉಲ್ಲೇಖ ಇದೆ. ಅದಕ್ಕಾಗಿಯೇ ದೊಡ್ಡ ದೊಡ್ಡ ಕೆರೆ ಕಟ್ಟಿಸಿದ ಸಂತರೂ ಇಲ್ಲಿದ್ದಾರೆ.

ರಾಜ್ಯದಲ್ಲೇ ಅತ್ಯಂತ ಕಡಿಮೆ ಮಳೆ ಎಂಬ ಖ್ಯಾತಿಯ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಎರಡು ಬೃಹತ್ ಕೆರೆಗಳಿಂದ ಹೆಸರಾಗಿದೆ. ತಿಪ್ಪೆ ರುದ್ರಸ್ವಾಮಿ ಎಂಬ ಅನುಭಾವಿಗಳು ನಾಲ್ಕಾರು ಶತಮಾನಗಳ ಹಿಂದೆ ಕಟ್ಟಿಸಿದ ಕೆರೆ ಇದಾಗಿದ್ದು, ಅಲ್ಲಿನ ದೊಡ್ಡ ಕೆರೆ ಇತ್ತೀಚಿನ ಇತಿಹಾಸದಲ್ಲೇ  ಸರಿಯಾಗಿ ನೀರು ಕಂಡಿಲ್ಲ. ಇನ್ನೊಂದು ವಿಶೇಷ ಎಂದರೆ ನಾಯಕನಹಟ್ಟಿ ಕೆರೆಯಲ್ಲಿಯೇ ಅದೆಷ್ಟೋ ಬೋರ್ ವೆಲ್‌ಗಳನ್ನು ಕೊರೆದರೂ ಕಳೆದ ವರ್ಷ ನೀರು ಕಾಣಿಸುವುದು ಸಾಧ್ಯವಾಗಿರಲಿಲ್ಲ !
ಮೈಸೂರು ಒಡೆಯರ ಕಾಲದಲ್ಲಿ  ನಿರ್ಮಿಸಲಾದ ಅತ್ಯಂತ ಸುಂದರ ತಾಣ, ಮಾರಿ ಕಣಿವೆಯ ವಿವಿ ಸಾಗರ ಆಣೆಕಟ್ಟಿಗೆ ಹತ್ತಾರು ವರ್ಷಕ್ಕೊಮ್ಮೆ ನೀರು ಹರಿದು ತುಂಬಿಕೊಳ್ಳುವುದು ಬಿಟ್ಟರೆ, ಲಿಂಗನಮಕ್ಕಿ , ಕೃಷ್ಣರಾಜ ಸಾಗರದಂತೆ  ಪ್ರತಿ ವರ್ಷವೂ ನೀರು ತುಂಬುವ ಪ್ರಶ್ನೆಯೇ ಇಲ್ಲ .
ಪುರಾಣ ಕತೆಯನ್ನು ಆಧರಿಸಿದ ಗಿರೀಶ್ ಕಾರ್ನಾಡರು ರಚಿಸಿದ ‘ಅಗ್ನಿ ಮತ್ತು ಮಳೆ’ ನಾಟಕದಲ್ಲಿ ಬೇರೆ ನೆಲೆಯಲ್ಲಿ ಇದೇ ಬವಣೆಯನ್ನು ಚಿತ್ರಿಸಲಾಗಿದೆ. ಹತ್ತು ವರ್ಷಗಳ ನಂತರ ಮಳೆ ಸುರಿದು ಇಳೆ ತಂಪಾಗುವ ದೃಶ್ಯದೊಂದಿಗೆ ನಾಟಕ ರೋಮಾಂಚನ ರೀತಿಯಲ್ಲಿ  ಮುಕ್ತಾಯ ಆಗುತ್ತದೆ.
ಹೀಗೆ ಮಳೆ ಬಂದು ಬರ ಸುಖಾಂತ್ಯವಾಗುತ್ತಲೇ  ಎಲ್ಲ ಸಂಕಷ್ಟವನ್ನೂ ಜನರು ಮರೆತು ಬೇಸಾಯ, ಮದುವೆ ಸಮಾರಂಭದಲ್ಲಿ  ಬಿಸಿ ಆಗಿಬಿಡುತ್ತಾರೆ. ಮತ್ತೆ ಬರಗಾಲ ಬಂದಾಗಲೇ ಅವರು ಎಚ್ಚೆತ್ತುಕೊಳ್ಳುವುದು. ಕೃಷಿಯಲ್ಲಿ ತೊಡಗಿದ ಹಳ್ಳಿಗಳ ಜನ ಸಾಮಾನ್ಯರ ವಿಚಾರ ಹೀಗೆಯೇ ಇರುತ್ತದೆ. ಆದರೆ ಪಂಡಿತರು ಹತ್ತೈವತ್ತು ವರ್ಷಗಳ ಅಂಕಿ ಸಂಕಿಗಳನ್ನು ಇಟ್ಟುಕೊಂಡು ಒಂದಿಷ್ಟು ಸಾರ್ವಕಾಲಿಕ ಸತ್ಯವನ್ನು ಗೃಹಿಸಿ, ಆ ನಿಟ್ಟಿನಲ್ಲಿ  ತಮ್ಮ  ಬದುಕಿನ ಬವಣೆಗೆ ಸಾಂತ್ವನ ರೂಪಿಸಿಕೊಳ್ಳುವ, ಹಸನು ಮಾಡಿಕೊಳ್ಳುವ ಪದ್ದತಿ ನಮ್ಮೆದುರಿಗೇ ಇದೆ.
ಉದಾಹರಣೆಗೆ ಶೇರು ಮಾರುಕಟ್ಟೆ  ಹಾಗೂ ರಿಯಲ್ ಎಸ್ಟೇಟ್ ವಿಚಾರವನ್ನೇ ತೆಗೆದುಕೊಳ್ಳಿ. ಶೇರು ಮಾರುಕಟ್ಟೆ  ಏರಿಳಿತವು ಒಂದು ಕಟು ವಾಸ್ತವ. ಹಾಗೆ ನೋಡಿದರೆ ಇದೊಂದು ವ್ಯವಸ್ಥಿತ ಜೂಜು ಇದ್ದಂತೆ.  ಇದನ್ನು ಒಪ್ಪಿಕೊಂಡು, ರಿಸ್ಕ್ ತೆಗೆದುಕೊಂಡವನೇ ಜಾಣ ಎಂದು ಮಾರುಕಟ್ಟೆ ಪಂಡಿತರು ಹೇಳುತ್ತಾರೆ. ಮಾರುಕಟ್ಟೆ ಪ್ರತೀ ಏಳೂವರೆ ವರ್ಷಕ್ಕೊಮ್ಮೆ  ಒಂದು ಏರಿಳಿತದ ಚಕ್ರವನ್ನು ಪೂರೈಸುತ್ತದೆ. ಈ ಚಕ್ರದ ಏರಿಳಿತದ ಕ್ರಮದಲ್ಲಿ ನಾವು ಹಣಕಾಸಿನ ಆಟ ಆಡುವುದನ್ನು ಕಲಿತುಕೊಳ್ಳಬೇಕು. ರಿಸ್ಕ್ ಎಲ್ಲಿರುತ್ತದೊ ಅದಕ್ಕೆ  ಪರಿಹರವೂ ಇರುತ್ತದೆ. ಶೇರು ಪೇಟೆಯ ಈ ಏರಿಳಿತದ ಪ್ರವಾಹದೊಂದಿಗೆ, ಹುಷಾರಿನೊಂದಿಗೆ ಯಾರು ಹಣವನ್ನು ಹೂಡುತ್ತಾರೊ ಅವರು ಇಲ್ಲಿ ಈಜಿ ಜಯಿಸಬಹದು, ಹಣ ಗಳಿಸಬಹದು ಎಂದು ಹೇಳಲಾಗುತ್ತದೆ.

ಬಹುತೇಕ ನಗರದಲ್ಲಿ ನಡೆಯುವ ಶೇರುಪೇಟೆ ಹಾಗೂ ಮ್ಯೂಚುವಲ್ ಫಂಡ್ ಹೂಡಿಕೆಯ ಕಾರ್ಯಾಗಾರದಲ್ಲಿ  ಐವತ್ತು ವರ್ಷದ ಶೇರು ವಹಿವಾಟಿನ ಏರಿಳಿತದ ಮಾಹಿತಿ ಕೊಡಲಾಗುತ್ತದೆ. ನಿದರ್ಶನ ಸಹಿತ ಪವರ್ ಪಾಯಿಂಟ್ ಪ್ರೊಗ್ರಾಮ್‌ಗಳನ್ನು ಸಿದ್ಧಪಡಿಸಿ  ಶೇರು ಕೃಷಿ ಹಾಗೂ ನಮ್ಮ ಹೂಡಿಕೆ ಅವಕಾಶದ ಬಗ್ಗೆ  ಪ್ರೇರಣಾ ಶಿಬಿರವನ್ನು ನಡೆಸಲಾಗುತ್ತದೆ. ರಿಯಲ್ ಎಸ್ಟೇಟ್ ವಿಚಾರದಲ್ಲೂ  ಅದರ ಏರಿಳಿಕೆಯ ಚಕ್ರವು ಉದ್ದಿಮೆ ವಲಯದಲ್ಲಿ  ತಿಳಿದಿದೆ.
ಶೇರು ಅಥವಾ ರಿಯಲ್ ಎಸ್ಟೇಟ್ ಎರಡನ್ನೂ ಸೇರಿಸಿ ಅಂದಾಜು ಅವಲಂಬಿತರ ಪಟ್ಟಿ ಮಾಡಿದರೂ ಭಾರತದ ಜನಸಂಖ್ಯೆಯ ಶೇಕಡಾ ಐದಕ್ಕಿಂತ ಹೆಚ್ಚು ಜನರ ಜೀವನಾಧಾರ ಅಲ್ಲಿ  ಇರುವುದಿಲ್ಲ. ಆದರೆ, ಶೇರುಪೇಟೆಯ ಚಲನವಲನ, ಏರು ಪೇರು ಹೇಳುವ ಅಂಖಿಸಂಖಿಗಳ ಅಭೂತಪೂರ್ವ ಕಣಜವೇ ಕಳೆದ ಐವತ್ತು ವರ್ಷದಿಂದ ಸಂಚಯ ಮಾಡಲಾಗಿದೆ. ಕೇವಲ ಐವತ್ತು ಎಪ್ಪತ್ತು ವರ್ಷದ ಶೇರು ಪೇಟೆ ಇತಿಹಾಸದ  ಬಗ್ಗೆ  ಸಾವಿರಾರು ಪಾಂಡಿತ್ಯ ಪೂರ್ಣ ಚಿಂತನೆ ಇದೆ.
ಆದರೆ ದೇಶದ ಶೇಕಡಾ 60ಕ್ಕೂ ಹೆಚ್ಚು ಜನರು ಆಶ್ರಯಿಸಿರುವ ಕೃಷಿಯ ಬಗ್ಗೆ , ನೂರಕ್ಕೆ ನೂರು ಜನರೂ ಅವಲಂಬಿಸಿರುವ ಕುಡಿಯುವ ನೀರಿನ ವಿಚಾರದಲ್ಲೂ ಸಾಕಷ್ಟು ಸಂಶೋಧನೆಗಳು, ಅಂಕಿಸಂಖಿಗಳು ಸಿಗುವುದಿಲ್ಲ. ಆಯಾ ಭಾಷೆಯ  ಶತಮಾನದ ಸಾಹಿತ್ಯ ನೋಟ ಎಂದು ಪ್ರಚಲಿತ ಇರುವಂತೆ, ಶತಮಾನದ ಮಳೆಯ ನೋಟ ಎಂಬ ಒಂದು ಶೀರ್ಷಿಕೆ ಗ್ರಾಂಥಾಲಯದಲ್ಲಿ ಹುಡುಕುವುದು ಕಷ್ಟ.

ಮಾರುಕಟ್ಟೆ  ವಲಯದಲ್ಲಿ ನಡೆದ ಸಂಶೋಧನೆ ಪ್ರಾಕೃತಿಕ  ಅಸಮತೋಲನ, ಕೃಷಿ ಅದರಲ್ಲೂ  ವಿಶೇಷವಾಗಿ ಅತಿವೃಷ್ಠಿ , ಅನಾವೃಷ್ಟಿಯ ಚಕ್ರದ ಬಗ್ಗೆ  ಮಾಹಿತಿಗಳೇ ವಿರಳ. ಸಂಶೋಧನೆಗಳು ಆಗಿದ್ದರೂ ವಿವಿ ಮಟ್ಟದಲ್ಲಿ ಉಳಿದಿವೆಯೇ ಹೊರತೂ ಜನ ಸಾಮಾನ್ಯರ, ಸರಕಾರ ಅಥವಾ ಶಾಸಕಾಂಗದ ತನಕವಂತೂ ಬಂದಿಲ್ಲ. ಬಹುತೇಕ ಕೃಷಿಕರು ಈ ಬಗ್ಗೆ ಕುತೂಹಲಿಗಳೂ ಅಲ್ಲ. ಮಾನ್ಸೂನ್ ಮಾರುತಕ್ಕೂ, ಮುಂಗಾರಿಗೂ ಸಂಬಂಧ ಏನು, ಮಳೆ ಭವಿಷ್ಯಗಳು ವೈಜ್ಞಾನಿಕವಾಗಿದ್ದರೂ, ಯಾಕೆ ಕರಾರುವಾಕ್ಕಾಗಿರುವುದಿಲ್ಲ  ಎಂಬ ಹಲವಾರು ಉತ್ತರಿಸಲಾಗದ ಪ್ರಶ್ನೆಯೇ ಇದೆ. ಭಾರತೀಯ ಶೇರು ಪೇಟೆಯ ಮೇಲೆ ಜಾಗತಿಕ ಮಾರುಕಟ್ಟೆ ಪರಿಣಾಮದ ಚಿಂತನೆ ನಡೆಯುವಂತೆ ಜಾಗತಿಕ ಮಳೆ ವಾಡಿಕೆಯು ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಇಂದಿಗಂತೂ ಅತ್ಯಂತ ತುರ್ತಿನ ವಿಚಾರವೇ ಆಗಿದೆ. ಇದರ ಬದಲು, ನಾವು ಶತಮಾನದ ಹಿಂದಿನ ಅಳತೆ ಅಂದಾಜಿನಲ್ಲೇ ಬದುಕಿ ಕೃಷಿಯನ್ನು ಮಾಡುತ್ತಿದ್ದೇವೆ. ಈಗಲೂ ಯುಗಾದಿ ದಿನ ಪಂಚಾಂಗ ಓದುವವರು  ಹೇಳುವ ಆ ವರ್ಷದ ಮಳೆ ಭವಿಷ್ಯ, ಜಾತ್ರೆಯ  ಕಾರಣಿಕ ನುಡಿಯಲ್ಲಿ  ಅತಿವೃಷ್ಟಿ  ಹಾಗೂ ಅನಾವೃಷ್ಟಿ ಕುರಿತಾದ ಅಡ್ಡಗೋಡೆಯ ದೀಪಗಳೇ ನಮ್ಮ ರೈತರನ್ನು ಮುನ್ನಡೆಸುತ್ತಿವೆ. ಐದು, ಹತ್ತು ಅಥವಾ ಹದಿನೈದು ವರ್ಷದ ಅವಧಿಯಲ್ಲಿ  ಮಳೆಯ ಗತಿಯನ್ನು ಅಂದಾಜು ಹೇಳುವ ಅಂಕಿ ಸಂಖಿಯ ಮಾಹಿತಿ ಕಣಜ ಅಥವಾ ಥಿಯರಿಗಳು ಪ್ರಚಲಿತ ಆಗಬೇಕು. ಹಾಗಾದರೆ  ರೈತರ ಬಿತ್ತನೆ ಹಾಗೂ ಬೆಳೆಯ ಆಯ್ಕೆ ಜತೆಗೆ  ಕುಡಿವ ನೀರಿನ ಕುರಿತ ಮುನ್ನೆಚ್ಚರಿಕೆಗೆ ಅನುಕೂಲ ಆಗಬಹುದು.
-ಸದಾನಂದ ಹೆಗಡೆ


Read More

ಲಿಂಬು ಹಣ್ಣಿನ ಬದಲು ಲಿಂಬೂ ಫ್ಲೇವರ್ ಬಳಸಿದರೆ ಹೇಗೆ

ಲಿಂಬು ಹಣ್ಣಿನ ಬದಲು ಲಿಂಬೂ ಫ್ಲೇವರ್ ಬಳಸಿದರೆ ಹೇಗೆ
ಮೌಡ್ಯ ನಿಷೇಧ ಕಾಯಿದೆ ತರಲು ಪ್ರಯತ್ನಿಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ತಮ್ಮ ಅವಧಿಯ ಕೊನೆ ಹಂತದಲ್ಲಿ  ಮಂತ್ರಿಸಿದ ನಿಂಬೆಹಣ್ಣು  ಹಿಡಿದು ಓಡಾಡತೊಡಗಿದ್ದರು. ಹೀಗಿರುವಾಗ ಹುಟ್ಟಾ ದೈವ ಬೀರುಗಳಾದ ಹಾಲಿ ಸಚಿವ ಎಚ್.ಡಿ. ರೇವಣ್ಣ , ಮಾಜಿ ಪ್ರಧಾನಿ ದೇವೇಗೌಡರ ಟೀಕಿಸಿ ಫಲವೇನು ?
ಅಧಿಕಾರದಲ್ಲಿ ಉಳಿಯಲು ಮೌಢ್ಯಾರಾಧ ಮಾಡುತ್ತಾರೆ ಎಂದು ಸುಲಭವಾಗಿ ರಾಜಕಾರಣಿಗಳನ್ನು ಟೀಕಿಸುವುದಕ್ಕಿಂತ, ಇದಕ್ಕೆಲ್ಲ ಬೇರಾವುದಾದರೂ ಪರಿಹಾರ ಇದೆಯೇ ಎಂಬ ಆಲೋಚನೆಯನ್ನು ಮಾಡಬಹುದಲ್ಲ. ಅಂಥ ಪ್ರಯತ್ನದಲ್ಲಿ ನನಗೆ ಕೆಲವು ವಿಚಾರ ಹೊಳೆಯುತ್ತಿದೆ.
ಮನೆಯಿಂದ ಹೊರ ಬರುವಾಗ ಹಿಡಿದುಕೊಳ್ಳಲು ಕಷ್ಟವಾಗುವ ಲಿಂಬು ಬದಲು, ಲಿಂಬುವಿನ ಫ್ಲೇವರ್ ಇರುವ ಸುಗಂಧ ಯಾಕೆ ಬೇಡ. ಮಂತ್ರವಾದಿಗಳೂ ಕೂಡ ಲಿಂಬೆಹಣ್ಣು ಮಂತ್ರಿಸಿಕೊಡುವ ಬದಲು, ಲಿಂಬೂ ಫ್ಲೇವರ್ ಇರುವ ಸುಗಂಧ ದೃವ್ಯದ ಬಾಟಲಿಗೇ ಪೂಜೆ ಮಾಡಿ ಕೊಟ್ಟರೆ ಸಾಧ್ಯ ಇಲ್ಲವೇ ? ಜತೆಗೆ ಲಿಂಬೂ ಪರಿಮಳ ಇರುವ ಸೋಪಿನಿಂದ ಸ್ನಾನ ಮಾಡಿ ಬಂದು ಸುತ್ತಲೂ ಸುಳಿಯುವ ಆಪ್ತರಿಗೆ ಹಾಗೂ ಗೊತ್ತಾಗದಂತೆ ಸುಳಿಯುವ ದುಷ್ಟ ಶಕ್ತಿಗಳಿಗೂ ಪರಿಮಳದ ರಕ್ಷಣಾ ಕವಚ ನಿರ್ಮಿಸಿಕೊಂಡರೆ ತಪ್ಪೇನು. ಅಥವಾ ಮಂತ್ರಿಸಿದ ಲಿಂಬೂ ಪರಿಮಳದ ಕೇಶ ತೈಲ ಬಳಸಿ, ಮಂತ್ರ ಲಿಂಬೂ ಕೊಡಬಹುದಾದ ಶತ್ರುನಾಶ, ಕೀಳು ನಿವಾರಣೆ, ಶಕ್ತಿ ಸಂಚಯ ಸಾಧ್ಯ ಇಲ್ಲವೇ ?
ಒಂದು ವೇಳೆ ಇದು ಸಾಧ್ಯವಾದರೆ  ಕೆಲವು ಸಾರ್ವಜನಿಕ ನಾಯಕರ ಮೈ ಹಾಗೂ ಬಾಯಿ, ಬಟ್ಟೆ ಬರೆ ವಾಸನೆ ನಿವಾರಣೆಯ ಅನುಕೂಲತೆ ಸಾರ್ವಜನಿಕರಿಗೆ ಲಭಿಸುತ್ತದೆ. ಕೆಲವರು ಸರಿಯಾಗಿ ಸ್ನಾನ ಮಾಡದೆ ಅಥವಾ ಬಾಯಿಯಿಂದ ಬರುವ ದುರ್ವಾಸನೆಯಿಂದ ಅಕ್ಕ ಪಕ್ಕದವರನ್ನು ಹೈರಾಣು ಮಾಡುತ್ತಾರೆ.
ಸ್ಪರ್ಧಾತ್ಮಕ ರಾಜಕಾರಣದಲ್ಲಿ ಹಿತ ಶತ್ರು, ಬಹಿರಂಗ ಶತ್ರುಗಳನ್ನು ಸಾಧ್ಯವಾದ ಎಲ್ಲ ರೀತಿಯಲ್ಲೂ ಎದುರಿಸುವುದು ಅನಿವಾರ್ಯ ನಿಜ. ಅದಕ್ಕೆ ಸುಗಂಧಾಸ್ತ್ರವಾಗಿ ಅತ್ಯಂತ ಪುರಾತನವಾದ ಲಿಂಬುವಿನ ಪರಿಷ್ಕೃತ ರೂಪವಾದ ಲಿಂಬೂ ಸುಗಂಧವನ್ನು ಪುರೋಹಿತರಿಂದ ಮಂತ್ರಸಿಕೊಂಟ್ಟರೆ  ಜನಪ್ರಿಯ ವ್ಯಕ್ತಿಗಳು ನಗೆಪಟಲಿಗೀಡಾಗುವ ಪ್ರಸಂಗ ತಪ್ಪು ತ್ತದೆ.
ದೇವರ ಮನೆಯಲ್ಲಿ ಸುಗಂಧ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಭಸ್ಮದ ನಿಜ ರೂಪಕ್ಕಿಂತ ಸುಗಂಧ ಒಳಗೊಂಡ ವಿಬೂತಿ ಉಂಡೆಯನ್ನು ಪೂಜಾರಿಗಳೆ ರೆಕಮೆಂಡ್ ಮಾಡುತ್ತಾರೆ. ಹಾಗೆಯೇ ಕುಂಕುಮ/ಅರಿಷಿಣ ಕರ್ಪೂರ ಎಲ್ಲವೂ ತನ್ನ ಪರಿಮಳದ ಕಾರಣಕ್ಕೂ ದೈವಾಂಶ ಹೊಂದಿದೆ.
ಇನ್ನು ಸುಗಂಧಗಳು ನಮ್ಮ ಮನಸ್ಸಿನ ಮೇಲೆ ಬೀರುವ ಪರಿಣಾಮ ಅಥವಾ ಮೂಡು ತರಿಸುವ ಶಕ್ತಿ ಬಗ್ಗೆ ಸಾಕಷ್ಟು ಸಂಶೋಧನೆ ಹಾಗೂ ಸಾಹಿತ್ಯವೂ ಬಂದಿದೆ.  ಇದೆಲ್ಲ ವನ್ನು ಲಕ್ಷದಲ್ಲಿಟ್ಟುಕೊಂಡು,  ರಾಜಕಾರಣಿಗಳು ತಮ್ಮ ಲಿಂಬೂಹಣ್ಣು ಹಿಡಿದುಕೊಳ್ಳುವ ಪರಂಪರೆಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಅವಕಾಶ ಇದೆ.
ಎಷ್ಟು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದರೂ ಕೈಯಲ್ಲಿ ನಿಲ್ಲದೆ ಜಾರಿ ಹೋಗುವ ಲಿಂಬು ಬದಲು, ಮೈಗೆ ಲೇಪಿಸುವ ಲಿಂಬೂ ಸುಗಂಧವು  ಕೈ ಎತ್ತಿ ಮಾತಾಡುವಾಗ ಇತರ ರ ಕಣ್ಣಿಗೆ ಬಿದ್ದು  ಅಥವಾ ಕಾರು ಏರುವಾಗ ಕೈ ತಪ್ಪಿ ಚೆಂಡಿನಂತೆ ಟಣ್ ಎಂದು ಉರುಳಿ ಟೀವಿ ಕ್ಯಾಮೆರಾಗಳಿಗೆ ಆಹಾರಾವಾಗುವುದು ತಪ್ಪುತ್ತದೆ. ಜತೆಗೆ ನಗರದ ಸ್ಲಂಗಳು, ಹಳ್ಳಿಗಾಡಿನ ಕಪ್ಪು ಕಡವಾರಗಳನ್ನು ದಾಟುತ್ತ, ಮಾನಸಿಕವಾಗಿ ಚಿತ್ರ ವಿಚಿತ್ರ ಸಂಕಟ ಅನುಭವಿಸುವ ಜನ ನಾಯಕರಿಗೆ ಲಿಂಬೂ ಫ್ಲೇವರ್ ಖಂಡಿತಕ್ಕೂ ಚೇತೋಹಾರಿ.
ದೇಹ ನೈರ್ಮಲ್ಯ ದ ಜತೆ ನಮ್ಮ ಸುತ್ತಲಿನ ಪರಿಸರದ ದುಷ್ಟರು, ಕೊಳಕರು, ಹಿತ ಶತ್ರುಗಳು, ಮಾನಸಿಕ ಸಮ್ಮೋಹಿನಿಗೂ ಮಾನಸಿಕ ರಕ್ಷಣಾ ಅಸ್ತ್ರವಾಗಿ ಲಿಂಬೂ ಬಳಸುವುದು ಬಾರತದಲ್ಲಿ ಮಾತ್ರ ಅಲ್ಲ. ಗಜತ್ತಿನ ಎಲ್ಲೆಡೆ ಇದ್ದು,  ಇದು ರಾಜಕಾರಣಿಗಷ್ಟೇ ಸೀಮಿತವೂ ಅಲ್ಲ.  ಮನೋಮಯವಾದ ದುಷ್ಟ ಶಕ್ತ, ಶತ್ರು ನಾಶಕ್ಕಾಗಿ ಲಿಂಬು ಬಳಕೆ ವ್ಯಾಪಕವಾಗಿದೆ. ಅಮವಾಸ್ಯೆ ದಿನ ಲಿಂಬುವನದನು ಕತ್ತರಿಸಿ ಮನೆ ಬಾಗಿಲಿನಲ್ಲಿ ಇಡುವುದು. ವಾಹನ ಪೂಜೆ ಸಂದರ್ಭದಲ್ಲಿ ಲಿಂಬು ಮೇಲೆ ಟಯರ್ ಹರಿಸಿ ಒಡೆಯುವುದು...ಇತ್ಯಾದಿಗಳನ್ನು  ಲೆಕ್ಕಕ್ಕೆ ತೆಗೆದುಕೊಂಡರೆ ನಮಗೆ ಇದೆಲ್ಲದರ ಹೊಸ ನಿರ್ವಚನ ಸಿಗುತ್ತದೆ. ಹೀಗಿರುವಾಗ ರಾಜಕಾರಣಿಗಳು, ಹಾಗೂ ಅವರ ಲಿಂಬೂ ಮಂತ್ರವಾದಿಗಳು ಹೂವಿನ ಬದಲು ಅದರ ಪರಿಮಳ ಸೇವಿಸುವ ದೇವರಂತೆ, ಲಿಂಬೂ ಬದಲು ಅದರ ಪರಿಮಳವನ್ನು ದುಷ್ಟ ಶಕ್ತಿಗಳ ಅಸ್ತ್ರವಾಗಿ ಬಳಸಿದರೆ, ಓಡಾಟದ ಜೀವನದಲ್ಲಿ ಹೆಚ್ಚು ಪ್ರಾಯೋಗಿಕ ಎಂದು ನನ್ನ  ಅನ್ನಿಸಿಕೆ.
-ಸದಾನಂದ ಹೆಗಡೆ -9343402497,@hargi33@gmail.com
Read More

ಇವರು ತಮ್ಮ ಭಾನುವಾರಗಳನ್ನು ಬೀದಿ ಗುಡಿಸುವಲ್ಲಿ ಕಳೆಯುತ್ತಾರೆ.. !

ಇವರು ತಮ್ಮ  ಭಾನುವಾರಗಳನ್ನು ಬೀದಿ ಗುಡಿಸುವಲ್ಲಿ ಕಳೆಯುತ್ತಾರೆ.. !
ರಾಮಕೃಷ್ಠ ಮಠದ ಕಾವಿಧಾರಿಗಳ -ಸ್ವಚ್ಛ ಮಂಗಳೂರು- ಕಾರ್ಯ
ನಾಲ್ಕು ವರ್ಷ ಹಿಂದೆ ಮೊಟ್ಟ ಮೊದಲ ಬಾರಿಗೆ ‘ಸ್ವಚ್ಛ ಭಾರತ್ ಆಂದೋಲನ’ ಆರಂಭವಾದಾಗ, ಆಗ ನಗರಾಭಿವೃದ್ಧಿ ಸಚಿವರಾಗಿದ್ದ  ವೆಂಕಯ್ಯ ನಾಯ್ಡು ದೇಶದ ಎಲ್ಲ ಸಂಘ ಸಂಸ್ಥೆಗಳಿಗೆ ತಲುಪಿಸಿದಂತೆ ಮಂಗಳೂರು ರಾಮಕೃಷ್ಣ ಮಠಕ್ಕೂ ಒಂದು ಪತ್ರ ಬರೆದು ಆಂದೋಲನದಲ್ಲಿ  ಕೈ ಜೋಡಿಸುವಂತೆ ಮನವಿ ಮಾಡಿದರು. ಈ ವಿಚಾರವನ್ನು ದೇಶದ ಯಾವ ಸಂಸ್ಥೆಗಳು ಹೇಗೆ ಸ್ವೀಕರಿಸಿವೆಯೋ ಗೊತ್ತಿಲ್ಲ, ಆದರೆ ಅಂದಿನಿಂದ ಇಂದಿನವರೆಗೂ ಇದೊಂದು ತನ್ನ  ಸ್ವಂತ ಜವಾಬ್ದಾರಿ ಎಂಬ ರೀತಿಯಲ್ಲಿ  ಮಠವು ಮಾತ್ರ ಶಿರಸಾ ವಹಿಸಿ ದುಡಿಯುತ್ತಿದೆ. ಮಳೆ ಇರಲಿ, ಸೆಕೆ ಇರಲಿ ಭಾನುವಾರ ಬೆಳಗ್ಗೆ ಏಳು ಗಂಟೆಗೆ ರಾಮಕೃಷ್ಠ ಮಠದ ಕಾವಿಧಾರಿಗಳು ಒಂದಿಷ್ಟು ಯುವಕ ಯುವತಿಯರೊಂದಿಗೆ ಬೀದಿಗಳನ್ನು ಹಸನು ಮಾಡುವ ‘ಸ್ವಚ್ಛ ಮಂಗಳೂರು’ ಕಾರ್ಯಕ್ಕೆ  ಸಜ್ಜಾಗಿರುತ್ತಾರೆ.
Swami Ekagamyananda cleanig street in Magalore

ನಾಲ್ಕು ದಿನ ಮೊದಲು ನಿರ್ದಿಷ್ಟ ವಠಾರದ ಶಾಲೆ ಅಥವಾ ಸಂಘ ಸಂಸ್ಥೆಗಳಿಗೆ ತೆರಳಿ ಮಠದ ವತಿಯಿಂದ ಮಾಹಿತಿ ಕೊಡಲಾಗುತ್ತದೆ. ಆಮಂತ್ರಣ ಹಾಗೂ ದೂರವಾಣಿ ಕರೆಗಳ ಮೂಲಕ ಜನರನ್ನು ಸೇರಿಸಿ, ಭಾನುವಾರ ಬೆಳಗ್ಗೆ  7.15ಕ್ಕೆ ಮಠದ ವಾಹನ ಆ ಜಾಗಕ್ಕೆ ಬಂದಿರುತ್ತದೆ. ಕಸಬರಿಗೆ ಬುಟ್ಟಿ ಗಳೊಂದಿಗೆ ಸನ್ಯಾಸಿಗಳು ಮಠದ ಒಂದಿಷ್ಟು  ಒಡನಾಡಿಗಳು ಇಳಿಯುತ್ತಾರೆ. ಅಂದಿನ ಸ್ವಚ್ಛತಾ ರೂಪುರೇಶೆಯ ಬಗ್ಗೆ ಚಿಕ್ಕದೊಂದು ಮಾತುಕತೆ ನಡೆಸಿದ ನಂತರ ಟೀ ಶರ್ಟ್, ಗ್ಲೌಸ್ ಧರಿಸಿ ಕಸ ಗುಡಿಸುವ ಕಾಯಕ ಶುರು.
ಯಾರು ಬರಲಿ, ಬಿಡಿಲಿ ರಸ್ತೆಯ ಕಸ ಗುಡಿಸುವ ಕಾರ್ಯದಲ್ಲಿ  ಮಠದ ಒಬ್ಬರು ಸ್ವಾಮೀಜಿ ಮಾತ್ರ ಇದ್ದೇ ಇರುತ್ತಾರೆ.
 ನಾಲ್ಕಾರು ಗಲ್ಲಿಯ ಕಸವನ್ನು , ಕೊಳಚೆಯನ್ನು ಒಂದಿಷ್ಟು  ದೂರು, ದುಮ್ಮಾನದ ಮಾತು ಅಥವಾ ಭಾವನೆ ಇಲ್ಲದೆ ಎತ್ತಿ ವಾಹನಕ್ಕೆ ತುಂಬುತ್ತಾರಲ್ಲದೆ, ಪೇಂಟ್ ಬ್ರೆಶ್‌ನಲ್ಲಿ  ಅಲ್ಲಿನ ಬಸ್ ಶೆಡ್ಡು, ಮಾರ್ಗಸೂಚಿಗಳಿಗೆಲ್ಲ ಬಣ್ಣ  ಬಳಿದು, ಹತ್ತು ಗಂಟೆಯ ತನಕ ಬಂದರು ನಗರಿಯಲ್ಲಿ  ನೂರಾರು ಸ್ವಚ್ಛತಾ ಕಾರ್ಯಕರ್ತರು ಬೀದಿಯಲ್ಲಿ  ಬೆವರಿಳಿಸುತ್ತಾರೆ. ಇವರ ಸ್ವಚ್ಛತಾ ಕಾರ್ಯವನ್ನು ನೋಡುದೇ ಒಂದು ಜೀವನೋತ್ಸಾಹದ ಪುಳಕ. ಸಮಯ ಮುಗಿಯಿತೆಂದರೆ ಒಂದು ನಿಮಿಷವೂ ಅಲ್ಲಿ ನಿಲ್ಲದೆ, ಕಸವನ್ನು  ತಾವು ತಂದ ಪರಿಕರಗಳನ್ನು ವಾಹನಕ್ಕೆ ತುಂಬಿಕೊಂಡು ಅಲ್ಲಿಂದ ಎದ್ದು ಹೊರಟುಬಿಡುತ್ತಾರೆ. ಸೋಮಾರಿಗಳು ರಜಾ ದಿನದಲ್ಲಿ  ಹೆಚ್ಚು ಹೊತ್ತು ಮಲಗಿ ಕಾಲ ಹರಣ ಮಾಡಿದರೆ, ತರಹೇವಾರಿ ಸುಖಕ್ಕಾಗಿ ಪ್ಲಾನ್ ಮಾಡಿದರೆ, ಇವರು ತಮ್ಮ ಭಾನುವಾರಗಳನ್ನು  ಬೀದಿ ಗುಡಿಸುವಲ್ಲಿ  ಕಳೆಯುತ್ತಾರೆ.

 ಇಂಥ ಸ್ವಚ್ಛತಾ ಆಂದೋಲನದ ಮೂರು ವರ್ಷದ ಭಾನುವಾರಗಳು ಆಗಲೇ ಯಶಸ್ವೀಯಾಗಿ ಮುಕ್ತಾಯವಾಗಿ, ಜನರಲ್ಲಿ ಒಂದಿಷ್ಟು ಜಾಗೃತಿಯಲ್ಲಿ ಯಶಸ್ವೀ ಆಗಿದ್ದು, ಇದೀಗ ನಾಲ್ಕನೆ ವರ್ಷದ 35ನೇ ಭಾನುವಾರಕ್ಕೆ ಜೂನ್ 10 ರಂದು ಕಂಕನಾಡಿಯ ... ಸಜ್ಜಾಗಿದೆ.
ಸ್ವಚ್ಛತೆಯ ರೂವಾರಿ :
ಕಳೆದ ಎರಡು ದಶಕದಿಂದ ರಾಮಕೃಷ್ಣ ಮಠದಲ್ಲಿ  ಸನ್ಯಾಸಿ ಆಗಿರುವ ಏಕಗಮ್ಯಾನಂದ ಸ್ವಾಮೀಜಿ ಮಠದ ಸ್ವಚ್ಛತಾ ಕಾರ್ಯಕ್ರಮದ ಸಂಪೂರ್ಣ ರೂವಾರಿ. ಹಾಗೆಂದು ಅವರು ಎಲ್ಲಿಯೂ ಹೇಳುವುದಿಲ್ಲ. ತಮ್ಮೆಲ್ಲ ಕಾರ್ಯಕ್ಕೂ ಮಠದ ಅಧ್ಯಕ್ಷರಾದ ಜಿತ ಕಾಮಾನಂದ ಜೀ ಅವರಿಂದಲೇ ಪ್ರೇರಣೆ ಪಡೆದು ಕಾರ್ಯಶೀಲರಾಗುವ ಇವರೆಲ್ಲರ ದೇಹದ ಕಣ ಕಣದಲ್ಲೂ ‘ಧೀರ ಸನ್ಯಾಸಿ’ ವಿವೇಕಾನಂದರ ಪ್ರೇರಣೆ ದ್ದು ಕಾಣುತ್ತದೆ. ಆ ಮೊದಲು ಮಠದ ಕೇಡರ್‌ನಲ್ಲಿ  ಬ್ರಹ್ಮಚಾರಿಯಾಗಿ ಆತ್ಮ ರೂಪ ಚೈತನ್ಯರೆಂದು ಗುರುತಿಸಿಕೊಂಡಿದ್ದ ಅವರು, ನಾಲ್ಕು ವರ್ಷ ಹಿಂದೆ ಸನ್ಯಾಸ ದೀಕ್ಷೆ ಪಡೆದು ಏಕಗಮ್ಯಾನಂದ ರೆಂದು ಹೆಸರು ಪಡೆಯುವ ಹೊತ್ತಿಗೆ ಇವರು ಸ್ವಚ್ಛತಾ ದೀಕ್ಷೆಯನ್ನೂ ಪಡೆದಿರುವಂತೆ ತೋರುತ್ತದೆ. ಈ ತನಕ ನಡೆದ ಸುಮಾರು 150ಕ್ಕೂ ಹೆಚ್ಚು ‘ಸ್ವಚ್ಛ ಮಂಗಳೂರು’ ಕಾರ್ಯಕ್ರಮದ ಸಂಘಟನೆಯ ಎ ಟು ಝಡ್ ಎಲ್ಲವೂ ಇವರ ಹೊಣೆಗಾರಿಕೆಯಲ್ಲೇ ನಡೆದಿದೆ. ಎಲ್ಲರ ಜತೆಗೆ ಮತ್ತು ಯಾರೂ ಇಲ್ಲದ ಸಂದರ್ಭ ರಸ್ತೆಯಲ್ಲಿ  ಏಕಾಂಗಿಯಾಗಿಯೂ ಕಸ ಗುಡಿಸುವುದರಿಂದ ಹಿಡಿದು, ಜನರನ್ನು  ಸಂಘಟಿಸುವುದು, ಆರ್ಥಿಕ ಸಂಪನ್ಮೂಲ ಹೊಂದಾಣಿಕೆ, ಯುವಕರಲ್ಲಿ  ಸ್ವಚ್ಛತೆಯ ಪ್ರೇರಣೆಯ ನುಡಿ, ಜತೆಗೆ ಸ್ಥಳೀಯ  ಉದ್ಯಮಿಗಳು, ಶಾಸಕರು, ಸಂಸದರನ್ನೆಲ್ಲ ಒಳಗೊಂಡು ಕಾರ್ಯಕ್ರಮ ಸಂಘಟಿಸಿದ್ದಾರೆ. ದಣಿವಿಲ್ಲದೆ ‘ಸ್ವಚ್ಛ ಮಂಗಳೂರಿಗಾಗಿ’ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಟ್ರಾಲ್ ಆದ ವೀಡಿಯೋ
ಇವರ ಸ್ವಚ್ಛ ಮಂಗಳೂರು ಎಲ್ಲೆಡೆ ತಿಳಿದಿದ್ದು, ಮಂಗಳೂರಿನಲ್ಲಿ ವಿಕ ಸೇರಿದಂತೆ ಬಹುತೇಕ ಮಾಧ್ಯಮಗಳು ಪ್ರಚಾರ ನೀಡಿವೆ. ಆರು ತಿಂಗಳ ಹಿಂದೆ ತಾಯಿಯೊಬ್ಬಳು ತನ್ನ ಎಳೆಯ ಶಿಶುವನ್ನು ಕಟ್ಟಿಕೊಂಡು ಸ್ವಚ್ಛತಾ ಕೆಲಸದಲ್ಲಿ  ಭಾಗವಹಿಸಿದ್ದ  ವೀಡಿಯೋ  ಜಾಲತಾಣದಲ್ಲಿ ವೈರಲ್ ಆಗಿ, ದೇಶ ವುದೇಶದ ಲಕ್ಷಾಂತರ ವ್ಯಕ್ತಿಗಳು ಇದರಿಂದ ಪ್ರೇರಣೆ ಪಡೆದಿದ್ದರು. ಒಬ್ಬರಿಂದ ಒಬ್ಬರಿಗೆ ಶೇರ್ ಆಗಿ.. ಹೀಗೆ ಇದನ್ನು ಟ್ವಟ್ಟರ್‌ನಲ್ಲಿ  ಶೇರ್ ಮಾಡಿದವರಲ್ಲಿ  ಕೇಂದ್ರದ ಸಚಿವರುಗಳು, ದೇಶ ವಿದೇಶದ ಉದ್ಯಮಿಗಳು ಸ್ವಚ್ಛತೆಯ ಸ್ಪರಿಟ್‌ನ್ನು ಕೊಂಡಾಡಿದ್ದರು.
ಸ್ವಚ್ಛತೆ ವಿಚಾರದಲ್ಲಿ ಯಾವ ಆಲೋಚನೆಯನ್ನೂ , ಸಲಹೆಯನ್ನು  ಏಕಗಮ್ಯಾನಂದಜೀ ವೇಸ್ಟ್ ಮಾಡುವುದಿಲ್ಲ ಎಂಬುದಕ್ಕೆ, ಒಂದು ವರ್ಷದ ಹಿಂದೆ ದಾವಣಗೆರೆಯಲ್ಲಿ  ವಿಜಯ ಕರ್ನಾಟಕ ಹಮ್ಮಿಕೊಂಡಿದ್ದ  ಸ್ವಚ್ಛ ಭಾರತ್ ಆಂದೋಲನವೂ ಒಂದು ಸಾಕ್ಷಿ. ಕೋರಿಕೆಯ ಮೇರೆಗೆ ಮಂಗಳೂರಿನಿಂದ ದಾವಣಗೆರೆಗೂ ಬಂದು ಇಲ್ಲಿನ ಸೋಮೇಶ್ವರ ವಿದ್ಯಾಲಯದಲ್ಲಿ  ವಿಕ ‘ಸ್ವಚ್ಛ ಭಾರತ್ ಆಂದೋಲ’ನದಲ್ಲಿ  ಭಾಗವಹಿಸಿ ಇಲ್ಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ತಮ್ಮ  ಕಾರ್ಯಾಚರಣೆಯ ಬಗ್ಗೆ  ಡೆಮೋವನ್ನೂ ಕೊಟ್ಟು , ಇನ್ನೂ ಏನಾದರೂ ಇದ್ದರೆ ಕರೆಯಿರಿ ಎಂದು ಹೇಳಿ ಹೋಗಿದ್ದಾರೆ.
ಸ್ವಚ್ಛ ಮಂಗಳೂರು ಎಂಬುದು ಒಂದು ಭಾಷಣ ಕೇಂದ್ರಿತ ಕಾರ್ಯಕ್ರಮ ಅಲ್ಲ.  ಯಾರಾದರೂ ನಮ್ಮ ಮನೆಯ ಅಂಗಳ, ರಸ್ತೆಯನ್ನು ಫಲಾಪೇಕ್ಷೆ ಇಲ್ಲದೆ ಗುಡುಸಿ ಸ್ವಚ್ಛ ಮಾಡಿ ಹೋದರೆ ನಮಗೆ ಏನನ್ನಿಸುತ್ತದೆ. ಕಸ ಹಾಕಿದ್ದಕ್ಕಾಗಿ ನಮಗೇ ನಾವು ಮುಜುಗರ ಪಟ್ಟುಕೊಳ್ಳುತ್ತವೆ ಅಲ್ಲವೇ ? ಮನೆಯೊಳಗಿನ ಕಸವನ್ನು ತೆಗೆಯಲು ಸಮಯ ಇಲ್ಲದೆ ಉದಾಸೀನ ಮಾಡುವವರಿಗೆ, ಇವರೆಲ್ಲ ಊರೊಳಗಿನ ಕಸ ತೆಗೆಯಲು ಸಮಯ ಹೊಂದಿಸಿಕೊಳ್ಳುವುದಾದರೂ ಹೇಗೆ ಎಂಬ ಅಚ್ಚರಿಯನ್ನೂ ಮೂಡಿಸುತ್ತದೆ. ನಮ್ಮ ಮನೆಯ ಎದುರಿನ ಕಸ ತೆಗೆಯುವ ಮೂಲಕ ‘ಆಂದೋಲನದ’ ಹೆಸರಿನಲ್ಲಿ  ನಮ್ಮ ಸ್ವಾಭಿಮಾನ ಕೆಣಕಿದರು ಎಂದೂ ಕೆಲವರಿಗೆ ಸಿಟ್ಟೂ ಬರುತ್ತದೆ. ಇದೆಲ್ಲ ಸಾಧ್ಯತೆಯ ಮೂಲಕ ಪ್ರತಿಯೊಬ್ಬರೂ ‘ನಾವು ನಮ್ಮ  ಮನೆಯನ್ನು, ಹಾಗೆಯೇ ವಠಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ಇದು ನಮ್ಮ ಕರ್ತವ್ಯ’ ಎಂಬ ಚ್ಚರಿಕೆಯನ್ನೂ  ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
  -ಸದಾನಂದ ಹೆಗಡೆ

***

Read More

ಇವ ನಮ್ಮವ ಇವ ನಮ್ಮವ ಎನ್ನುವ ಹಗ್ಗ ಜಗ್ಗಾಟ

ಇವ ನಮ್ಮವ ಇವ ನಮ್ಮವ ಎನ್ನುವ ಹಗ್ಗ ಜಗ್ಗಾಟ
ಇತಿಹಾಸ ಮತ್ತು ವರ್ತಮಾನದ ಕಲಬೆರಕೆಯಲ್ಲಿ ರಾಜಕೀಯ ಪಕ್ಷಗಳು ನಿರ್ಮಿಸುತ್ತಿರುವ ಹೊಸ ಐಕಾನ್‌ಗಳು
-ಸದಾನಂದ ಹೆಗಡೆ
ರಾಜಕೀಯ ಪಕ್ಷಗಳು ಬಿತ್ತುವ ಕಲ್ಯಾಣ ರಾಜ್ಯದ ಕಲ್ಪನೆಗಳು ’47ರ ಸ್ವಾತಂತ್ರದಿಂದ ದೂರ ಸರಿಯುತ್ತಿರುವುದು ನಮ್ಮೆದುರು  ಢಾಳಾಗಿ ಕಾಣುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ  ನಮಗೆ ಸ್ವಾತಂತ್ರ್ಯ, ಜನತಂತ್ರ ತಂದುಕೊಟ್ಟ ಯಾವ ಮಾದರಿಯೂ ಕಾಣುತ್ತಿಲ್ಲ. ಅಷ್ಟೇ ಅಲ್ಲ, 70ರ ದಶಕದಲ್ಲಿ  ನಡೆದ  ಎರಡನೆ ಹಂತದ ಚಳುವಳಿಯ ನಾಯಕತ್ವ ಕೂಡ ನಮಗೆ ಆದರ್ಶವಾಗಿಲ್ಲ. 70ರ ದಶಕದ ರಾಜಕೀಯ ಪಲ್ಲಟದಲ್ಲಿ  ನಾಯಕತ್ವ ವಹಿಸಿದ್ದವರು, ಅಂದರೆ ಹಿಂದುಳಿದ ನೇತಾರರಾದ ದೇವರಾಜ ಅರಸು ಅಥವಾ ಜೆಪಿ ಅವರ ಸಂಪೂರ್ಣ ಕ್ರಾಂತಿಯ ಪರಿಕಲ್ಪನೆಯ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಹೊರತಾಗಿ ಐತಿಹಾಸಿಕ ಹಾಗೂ ಪುರಾಣ ಪುರುಷರು ಇಂದಿನ ಚುನಾವಣೆಯಲ್ಲಿ  ಹೊಸ ಐಕಾನ್ ಆಗಿ ಕಾಣುತ್ತಿದ್ದಾರೆ. ಓಟಿನ ಲೆಕ್ಕಾಚಾರದಲ್ಲಿ  ಈಗಷ್ಟೆ ಮುಗಿದ ರಾಜಕೀಯ ಪಕ್ಷಗಳ ಟಿಕಟ್ ಬಟವಾಡೆಯು ಜಾತಿ, ಧರ್ಮದ ನೆಲೆಯಲ್ಲಿ  ಕಲ್ಯಾಣ ರಾಜ್ಯದ ಹೊಸ ಆದರ್ಶವನ್ನು  ಜನರ ಮುಂದೆ ಇಡುತ್ತಿವೆ. ನಮ್ಮೆದುರು ರಾಜಕೀಯ ಪಕ್ಷಗಳು ಇಡುವ ಹೊಸ ರಾಜಕೀಯ ಆದರ್ಶಗಳಲ್ಲಿ  ಕನ್ನಡ ಆಸ್ಮಿತೆಯನ್ನು ಮೆಚ್ಚಿಕೊಳ್ಳಬಹುದಾದರೂ ಅದರೊಂದಿಗೆ ಜೋಡಿಸುವ ಪಾಳೆಯಗಾರರನ್ನಲ್ಲ.
ವರುಣಾದಲ್ಲಿ  ವಾತಾವರಣ ಸರಿಯಾಗಿಲ್ಲ  ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರ ಕರ್ನಾಟಕದ ಬಾದಾಮಿಯಲ್ಲೂ ನಾಮಪತ್ರ ಸಲ್ಲಿಸಿದ್ದನ್ನೇ ತೆಗೆದುಕೊಂಡರೂ ಮೇಲಿನ ವಿಚಾರ ಸ್ಪಷ್ಟವಾಗಿ ಕಾಣುತ್ತದೆ. ಮುಖ್ಯಮಂತ್ರಿಗಳು ಎರಡನೆ ಕ್ಷೇತ್ರವಾಗಿ ಬಾದಾಮಿಯನ್ನು ಆಯ್ದುಕೊಳ್ಳುವ ಹಿಂದೆ , ಕ್ಷೇತ್ರದ ಜಾತಿ ಸಮೀಕರಣ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕನ್ನಡದ ಸರ್ವಕಾಲಿಕ ಆಸ್ಮಿತೆಯಾದ ಇಮ್ಮಡಿ ಪುಲಿಕೇಶಿಯ ಕತೆಯನ್ನು  ಸಿದ್ಧರಾಮಯ್ಯ ಮರು ಆಯ್ಕೆಗೆ ಲಿಂಕ್ ಮಾಡಲಾಗುತ್ತಿದೆ. ಐದನೇ ಶತಮಾನದಲ್ಲಿ  ಕರ್ನಾಟಕ ಸೇರಿದಂತೆ ದಕ್ಷಿಣ ಭಾರತವನ್ನು ಆಳಿದ ರಾಜರಲ್ಲಿ  ಇಮ್ಮಡಿ ಪುಲಿಕೇಶಿ ಕನ್ನಡದ ಹೆಮ್ಮೆಯ ಪ್ರತೀಕ. ಬಾದಾಮಿ, ಬನವಾಸಿ, ಹಂಪಿ, ಹಳೆಬೀಡುಗಳೆಂಬ ನಾಡಿನ ಶಿಲ್ಪ ಸಂಸ್ಕೃತಿಯ ಸಾಲಿನಲ್ಲಿ  ಮೊದಲ ಹೆಸರು ಕೂಡ.
ಇಮ್ಮಡಿ ಪುಲಿಕೇಶಿ ಉತ್ತರದ ದೊರೆ ಹರ್ಷವರ್ಧನನೊಂದಿಗೆ ಸೆಣಸಿ, ಅವನ ದಂಡಯಾತ್ರೆಯನ್ನು  ತಡೆಯುತ್ತಾನೆ. ಅಂದಿನ ಹರ್ಷವರ್ಧನನ ರೂಪದಲ್ಲಿರುವ ಬಿಜೆಪಿ ನರೇಂದ್ರ ಮೋದಿಯವರ ರಾಜ್ಯ ವಿಸ್ತಾರ, ಕಾಂಗ್ರೆಸ್ ಮುಕ್ತ ಭಾರತದ ಅಭಿಯಾನವನ್ನು ಸಿದ್ಧರಾಮಯ್ಯ ಮುಂಬರುವ ಚುನಾವಣೆಯಲ್ಲಿ  ತಡೆದು ನಿಲ್ಲಿಸುತ್ತಾರೆ ಎಂದು  ಕಾಂಗ್ರೆಸ್ಸಿಗರು ಪೂರಕವಾಗಿ ಇತಿಹಾಸದ ಕತೆಯನ್ನು  ಮರು ಸೃಷ್ಟಿ ಸಿದ್ದಾರೆ. ಇಮ್ಮಡಿ ಪುಲಿಕೇಶಿ ಹಾಗೂ ಹರ್ಷವರ್ಧನರ ಜತೆ ಯುದ್ಧವಾಗಿ ನರ್ಮದಾ ನದಿಯೇ ನಮ್ಮ ರಾಜ್ಯಗಳ ಸೀಮಾರೇಖೆ ಎಂದು ಒಪ್ಪಂದ ಮಾಡಿಕೊಳ್ಳುವುದನ್ನು ನಾವೆಲ್ಲ ಇತಿಹಾಸ ಪಠ್ಯದಲ್ಲಿ ಓದಿದ್ದೇವೆ. ವಿಶೇಷ ಎಂದರೆ ಹರ್ಷವರ್ಧನನ ಕುರಿತೂ ಕೂಡ ಕನ್ನಡಿಗರಿಗೆ ಒಳ್ಳೆಯ ಅಭಿಪ್ರಾಯವೇ ಇದೆ.
ಇದು ಒಂದು ಕಾಂಗ್ರೆಸ್‌ನವರ ಕತೆಯಾದರೆ ಸಂಸದ ಶ್ರೀ ರಾಮುಲು ಅವರನ್ನು ಮೊಳಕಾಲ್ಮುರು ಹಾಗೂ ಬಾದಾಮಿ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕೆ ಇಳಿಸಿರುವ ಹಿಂದೆ ಕೂಡ ಇಂಥದ್ದೇ ಕತೆ ಹಬ್ಬಿದೆ. ರಾಜ್ಯದಲ್ಲಿ  70ಕ್ಕೂ ಹೆಚ್ಚು  ಕ್ಷೇತ್ರಗಳಲ್ಲಿ ವಿಸ್ತರಿಸಿರುವ ವಾಲ್ಮಿಕಿ, ಬೇಡ ಅಥವಾ ನಾಯಕ ಸಮುದಾಯದ ಓಟ್ ಗುರಿಯಾಗಿಟ್ಟು ಶ್ರೀರಾಮುಲು ಅವರನ್ನು ಮುನ್ನೆಲೆಗೆ ತರಲಾಗಿದೆ. ಬಿಜೆಪಿಯಲ್ಲಿ  ಯಡಿಯೂರಪ್ಪ ಅವರ ನಂತರದ ನಾಯಕ ಎಂದು ಪ್ರಸಕ್ತ ಚುನಾವಣೆಯಲ್ಲಿ  ಶ್ರೀ ರಾಮುಲು ಅವರನ್ನು ಬಿಂಬಿಭಿಸಲಾಗಿದೆ. ಪುರಾಣ ಪುರುಷ ಶ್ರೀ ರಾಮಚಂದ್ರನನ್ನು  ತನ್ನ  ಖಾಯಂ ಆಸ್ಮಿತೆಯಾಗಿ ಗುರುತಿಸಿಕೊಂಡ ಭಾರತೀಯ ಜನತಾಪಕ್ಷ, ಕರ್ನಾಟಕದಲ್ಲಿ  ರಾಮುಲು ಅವರಲ್ಲಿ  ಇಂಥದ್ದೊಂದು ಸಾಧ್ಯತೆ ಗುರುತಿಸಿದೆ. ರಾಮಾಯಣ ಬರೆದ ವಾಲ್ಮೀಕಿಯ ಮನಸ್ಸಿನಲ್ಲಿ  ಸಹಜವಾಗಿ ರಾಮ ಇದ್ದಾನೆ. ಕರ್ನಾಟಕದ ಜಾತಿ ಸಮೀಕರಣಕ್ಕೆ ಅನುಗುಣವಾಗಿಯೂ ರಾಮನ ಆದರ್ಶ  ತಮ್ಮ ಆಯ್ಕೆಯಲ್ಲಿದೆ  ಎಂದು ಜಾಲತಾಣದಲ್ಲಿ  ಬಿಜೆಪಿ ಬೆಂಬಲಿಗರು ಪ್ರಚಾರ ಮಾಡಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ  ಸೇರುವ ಕನ್ನಡದ ದೊರೆ ಮದಕರಿ ನಾಯಕ ಹಾಗೂ ಆತನನ್ನು  ಸೋಲಿಸುವ ಟಿಪ್ಪು  ಸುಲ್ತಾನರ ನಡುವೆ ಯಾರನ್ನು  ಗೌರವಿಸಬೇಕು ಎಂಬ ವಿಚಾರದಲ್ಲೂ ರಾಜಕೀಯ ಪಕ್ಷಗಳ ಜಗಳವು ತಿಳಿದೇ ಇದೆ.  ಟಿಪ್ಪು ಸುಲ್ತಾನ್ ಕನ್ನಡ ವಿರೋಧಿ  ಎಂದು ಹೇಳುವವರು, ಸ್ವಾತಂತ್ರ ಹೋರಾಟಗಾರ ಎಂದು ಬಣ್ಣಿಸುವುದು ಮುಗಿಯದ ಚರ್ಚೆಯಾಗಿದ್ದು, ಬಿಜೆಪಿ ಅಧ್ಯಕ್ಷರು ಇತ್ತೀಚೆಗೆ ಚಿತ್ರದುರ್ಗಕ್ಕೆ ಬಂದಾಗ ಮತ್ತದೆ ವಿಚಾರವನ್ನು  ನೆನಪಿಸಿ ಹೋಗಿದ್ದಾರೆ.
ಇದೆಲ್ಲಕ್ಕಿಂತ ಮಹತ್ವದ ಚರ್ಚೆ ಎಂದರೆ ಚುನಾವಣೆ ಆರು ತಿಂಗಳ ಹಿಂದೆ ಭುಗಿಲೆದ್ದ  ಲಿಂಗಾಯ ಪ್ರತ್ಯೇಕ ಧರ್ಮದ ವಿಚಾರ. 12ನೇ ಶತಮಾನದಲ್ಲಿ  ಆಗಿಹೋದ ಧರ್ಮ ಸುಧಾರಕ, ಅನುಭಾವಿ ಇತ್ತೀಚಿನ ದಿನಗಳಲ್ಲಿ  ಒಮ್ಮೆಲೆ ರಾಜಕೀಯ ಪಕ್ಷಗಳು ಆಸ್ಮಿತೆಯಾಗಿ ಗಮನ ಸೆಳೆಯುತ್ತಿದ್ದಾರೆ. ಹಾಗೆನ್ನುವುದಕ್ಕಿಂತ ಬಸವಣ್ಣನವರನ್ನು ರಾಜಕೀಯ ಪಕ್ಷಗಳು ‘ಇವ ನಮ್ಮವ.. ಇವ ನಮ್ಮವ ..’ ಎಂದು ಎಳೆದಾಟದಲ್ಲಿ ತೊಡಗಿದ್ದಾರೆ. ಜತೆಗೆ  ರಾಜ್ಯದ ಎಲ್ಲ  ಸರಕಾರಿ ಕಚೇರಿಗಳಲ್ಲಿ  ಸಿದ್ಧರಾಮಯ್ಯ ಸರಕಾರ  ಬಸವೇಶ್ವರ ಭಾವಚಿತ್ರವನ್ನು  ಅಂಬೇಡ್ಕರ್, ಗಾಂ ಹಾಗೂ ನೆಹರೂ ಪಕ್ಕದಲ್ಲಿ  ಇರಿಸಿತು. ಜನತಂತ್ರ ಪ್ರತಿಪಾದಿಸಿದ ನಾಯಕರೊಂದಿಗೆ ಐತಿಹಾಸಿಕ ವ್ಯಕ್ತಿತ್ವಗಳನ್ನು ಜೋಡಿಸುವ ರಾಜಕೀಯ ಸ್ಥಿತ್ಯಂತರದ ಅಪರೂಪದ ನಿದರ್ಶನ ಇದು. ಇಲ್ಲಿ  ಯಾವ ರಾಜಕಾರಣಿಯೂ ಅನುಭಾವಿ ಅಥವಾ ಸಮಾಜ ಸುಧಾರಕ ಬಸವಣ್ಣರ ಆದರ್ಶ ಪಾಲಿಸುತ್ತಿಲ್ಲ. ಹೊರತಾಗಿ ಲಿಂಗಾಯತ ಅಥವಾ ಬಸವಣ್ಣನವರ ಹೆಸರಿನ ಹಿಂದೆ ಇರುವ ಬಹುದೊಡ್ಡ  ಓಟ್ ಬ್ಯಾಂಕ್ ಕೇಂದ್ರಿತ ನಡೆಗಳು ಅಷ್ಟೆ. ಕಾಂಗ್ರೆಸ್ ಈ ಚರ್ಚೆ ಆರಂಭಿಸಲು ವಿಶೇಷವಾಗಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ  ಅವರಿಂದ ಮತ ಕಸಿದುಕೊಳ್ಳುವ ಪ್ರಯತ್ನ  ಇದೆ ಎಂಬುದು ವಾಸ್ತವ ಸಂಗತಿ. ಲಿಂಗಾಯತ ಪ್ರತ್ಯೇಕತೆ ವಿಚಾರವು ಹಾಲಿ ಚುನಾವಣೆಯ ತೆರೆಮರೆಯಲ್ಲಿ  ಹೇಗೆ ಕೆಲಸ ಮಾಡಬಹದು ಎಂಬ ಕುತೂಹಲ ಇದ್ದೇ ಇದೆ.
ಹಿಂದಿನ ಚುನಾವಣೆಯು ‘ಅಹಿಂದ’ ಒಗ್ಗಟ್ಟಿನ ಫಲಶ್ರುತಿಯಾಗಿ ಮೇಲ್ನೋಟಕ್ಕೆ ಕಂಡರೂ ಆಳದಲ್ಲಿ  ಜಾತಿ ಕೇಂದ್ರಿತವಾಗಿ ದೊರೆಗಳನ್ನು ಗುರುತಿಸುವ ಪ್ರಯತ್ನ ಕಂಡಿತು. ಆ ಚುನಾವಣೆಯಲ್ಲಿ  ರಾಮುಲು ಗಿಂತ ಅವರ  ಹಿಂದಿರುವ ರೆಡ್ಡಿ ಗಳನ್ನು ಗುರಿಯಾಗಿಟ್ಟು ಸಿದ್ಧರಾಮಯ್ಯ ಚುನಾವಣೆ  ಎದುರಿಸಿದ್ದರು. ಆರು ವರ್ಷ ಹಿಂದೆ ಗಣಿಗಾರಿಕೆ ವಿರುದ್ಧ ನಡೆದ ಪಾದಯಾತ್ರೆ ಸಂದರ್ಭ 13ನೇ ಶತಮಾನದಲ್ಲಿ  ಹಕ್ಕ-ಬುಕ್ಕರು ಸ್ಥಾಪಿಸಿದ ವಿಜಯ ನಗರ ಸಾಮ್ರಾಜ್ಯವೂ ಪ್ರಸ್ತಾಪಕ್ಕೆ ಬಂದಿತ್ತು. ಹಕ್ಕ ಬುಕ್ಕರು ನಮ್ಮವರು ಹಾಗೇ ಸಿದ್ದರಾಮಯ್ಯ ಕೂಡ ಎಂದು ಗುರುತಿಸಲಾಯಿತು. ಇದೀಗ ಅದೇ ಕತೆ ಹಾಗೂ ಕಥಾ ನಾಯಕರು  ಕಾಂಗ್ರೆಸ್‌ಗೆ ಸಾಲುತ್ತಿಲ್ಲ. 
ಇನ್ನೊಂದೆಡೆ ದಕ್ಷಿಣ ಕರ್ನಾಟಕದಲ್ಲಿ  ಒಕ್ಕಲಿಗರ ಮತವನ್ನು ಹೆಚ್ಚಾಗಿ ಗಮನದಲ್ಲಿಟ್ಟ  ಬೆಂಗಳೂರನ್ನು ಕಟ್ಟಿದ ಕೆಂಪೆಗೌಡನನ್ನು ಐಕಾನ್ ಆಗಿ ಪರಿಗಣಿಸುವುದು ತಿಳಿದೇ ಇದೆ. ಹಾಗೆ ನೋಡಿದರೆ ಜೆಡಿಎಸ್ ಪಕ್ಷವು ಇತಿಹಾಸ ಹಾಗೂ ಪುರಾಣಕ್ಕಿಂತ ಮಣ್ಣಿನ ಆಸ್ಮಿತೆಯನ್ನು ಹೆಚ್ಚಾಗಿ ಇಟ್ಟುಕೊಂಡಿದ್ದು, ಅಲ್ಲಿಯೂ ಜನತಂತ್ರದ ಗಟ್ಟಿ ಮಾದರಿಗಳು ಅಷ್ಟಾಗಿ ಕಾಣುವುದಿಲ್ಲ.
ಮತ್ತೆ ಆರಂಭಿಕ ವಿಚಾರಕ್ಕೆ ಬರುವುದಾದರೆ ನಮಗೆ ಜನತಂತ್ರದ ಮಾದರಿಯನ್ನು ಮೇಲಿನ ಯಾವುದೇ ರಾಜರು ಪರಿಪೂರ್ಣವಾಗಿ ಕೊಟ್ಟಿಲ್ಲ.  ಮೇಲಿನ ಬಹುತೇಕ ಮಾದರಿಗಳು ನಮ್ಮ ಹೆಮ್ಮೆ  ಎಂಬುದು ನಿಜ. ಆಯಾ ಕಾಲದ ರಾಜ್ಯಾಡಳಿತದ ಕಲ್ಪನೆಯಲ್ಲಿ ಅವರು ಉತ್ತಮ ಆಡಳಿತ ನಡೆಸಿದ್ದಾರೆ ವಿನಃ, ಈಗಿರುವ ಜನತಂತ್ರದ ಮಾದರಿಗಳು ಅದಾವುದೂ ಆಗಿರಲಿಲ್ಲ.   ಈಗಿನಂತೆ ಲಿಖಿತ ಸಂವಿಧಾನ ಹಾಗೂ ಚುನಾವಣೆ ವ್ಯವಸ್ಥೆಗಳು ಆಗ ಇರಲೂ ಇಲ್ಲ.  ಹಾಗಾಗಿ ಜಾತಿ ಕೇಂದ್ರಿತ, ಧರ್ಮ ಕೇಂದ್ರಿತ ಐಕಾನ್‌ಗಳ ನಡುವೆ ’47ರ ಸ್ವಾತಂತ್ರದ ಆಶಯದ ವಾಸ್ತವ ನೆಲೆಗಟ್ಟಿನಲ್ಲಿಯೂ ಒಂದಿಷ್ಟು  ಚರ್ಚೆ, ಕತೆಗಳು ಹುಟ್ಟಿಕೊಳ್ಳಬೇಕಾದ ಅಗತ್ಯ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳು ಹರಿಬಿಡುತ್ತಿರುವ ಐತಿಹಾಸಿಕ ಹಾಗೂ ಪೌರಾಣಿಕ ಆದರರ್ಶಗಳ ಸುಳ್ಳುಗಳ ನಿಜವನ್ನು  ಜನ ಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಾಗಿದೆ. 
****
Article published in Vijaykarnataka Editorial page-3-6-2018

Read More

ನೃತ್ಯ, ಸಂಗೀತದ ಕಲಿಕೆಯು ವ್ಯಕ್ತಿತ್ವ ವಿಕಸನದ ಭಾಗ - ರಾಜಗೋಪಾಲ್ ಭಾಗವತ್

ನೃತ್ಯ, ಸಂಗೀತದ ಕಲಿಕೆಯು ವ್ಯಕ್ತಿತ್ವ ವಿಕಸನದ ಭಾಗ - ರಾಜಗೋಪಾಲ್ ಭಾಗವತ್

ಶಾರದಾ ಸಂಗೀತ ಮತ್ತು ನೃತ್ಯ ಕಲಾ ಶಾಲೆ ಕಳೆದ ಎರಡುವರೆ ದಶಕದಿಂದ ಸಂಗೀತ, ನೃತ್ಯ ಶಾಲೆ ನಡೆಸಿಕೊಂಡು ಬರುತ್ತಿರುವ ವಿದ್ವಾನ್ ರಾಜಗೋಪಾಲ ಭಾಗ್ವತ್  ಸಾವಿರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ವಿಕ ಸಂದರ್ಶನದಲ್ಲಿ  ನೃತ್ಯ, ಸಂಗೀತ ಶಿಕ್ಷಣದ ಸೌಂದರ್ಯ ಹಾಗೂ ಸವಾಲಿನ ಬಗ್ಗೆ  ವಿವರಣೆ ನೀಡಿದ್ದಾರೆ. ಇವರ ಪತ್ನಿ ನೃತ್ಯ ವಿದುಷಿ ಪೂರ್ಣಿಮಾ ಭಾಗವತರೊಂದಿಗೆ ಸಾತ್ ನೀಡಿದ್ದಾರೆ.


* ನಿಮಗೆ ಸಂಗೀತದ ಒಡನಾಟ ಎಲ್ಲಿಂದು ಶುರುವಾಯಿತು ?
ಹುಟ್ಟಿದ್ದು ಗೋಕಾಕ ತಾಲೂಕು ಮಮ್ದಾಪುರದಲ್ಲಿ, ನಮ್ಮದು ಉಡುಪಿ ಮೂಲ. ನಮ್ಮಜ್ಜ ಭಾಗವತರು, ಮನೆಯಲ್ಲಿ  ಹಾಡುವ ಅಭ್ಯಾಸ ಆಗಿಂದಲೂ ಇತ್ತು. ತಂದೆಗೆ ಪರಂಪರೆ ಮುಂದುವರಿಕೆ ಸಾಧ್ಯವಾಗಿರಲ್ಲಿ. ಕುಟುಂಬ ದಾವಣಗೆರೆಗೆ ಬಂದಾಗ ನನಗೆ ಆರನೆ ವರ್ಷ, ಇಲ್ಲಿನ ಲಕ್ಷ್ಮೀದೇವಿ ಕುಲಕರ್ಣಿ ಅವರಲ್ಲಿ  ಸಂಗೀತ ಬಾಲಪಾಠ, ನಂತರ ಚಿತ್ರದುರ್ಗದಲ್ಲಿ ಎಚ್ ವೆಂಕಟರಾಮ್, ಶೃಂಗೇರಿ ಎಚ್.ಎಸ್. ನಾಗರಾಜ್ ಅವರಲ್ಲಿ  ಹೆಚ್ಚಿನ ಅಭ್ಯಾಸ ಮಾಡಿದೆ. ಜತೆಗೆ ಇಲ್ಲಿ  ರಾಮಕೃಷ್ಣ ಭಟ್ ಹಾಗೂ ಸಾಗರದ ಜನಾರ್ದನ ಭಟ್ ಅವರಲ್ಲಿ  ಭರತನಾಟ್ಯ ಅಭ್ಯಾಸ ಮಾಡಿದೆ ಹೀಗೆ.. ನನಗೆ ಇಬ್ಬರು ಅಕ್ಕಂದಿರು, ಅವರು ಉತ್ತರಾದಿ ಕಲಿತರೆ, ನಾನು ದಕ್ಷಿ ಣಾದಿಯಲ್ಲಿ  ಸಂಗೀತದಲ್ಲಿ  ಮುಂದುವರಿದು ವಿದ್ವತ್ ಮಾಡಿದೆ.
* ವಿದುಷಿ ಪೂರ್ಣಿಮಾ ಪರಿಚಯ ಹೇಗೆ ?
ನನ್ನ ಮದುವೆಯಲ್ಲೆ  ಪೂರ್ಣಿಮಾ ಪರಿಚಯ. ಆಗಿನ್ನೂ  ಅವರು ವಿದ್ವತ್ ಮಾಡಿರಲಿಲ್ಲ. ನನಗೆ ಮದುವೆ ವಿಚಾರ ಬಂದಾಗ ಮೊದಲ ಪ್ರಪೋಸಲ್ ಬಂದದ್ದು ಪೂರ್ಣಿಮಾ ಅವರದ್ದು. ಭರತನಾಟ್ಯ ಕಲಾವಿದೆ ಎಂಬ ಕಾರಣಕ್ಕೆ ಒಪ್ಪಿಗೆ ಆಯಿತು. ಅವರ ತಂದೆ ಚೆಳ್ಳಕೆರೆಯಲ್ಲಿ  ಸೆಟಲ್ ಆಗಿದ್ದರೂ, ತೀರ್ಥಳ್ಳಿ ಮೂಲದವರು. ಚಳ್ಳಕೆರೆಯಲ್ಲಿ  ಆರಂಭಿಕ ನೃತ್ಯಾಭ್ಯಾಸ, ನಂತರ ಕಲಾಶ್ರೀ ಸುಧಾಮೂರ್ತಿ ಅವರಲ್ಲಿ . ಆ ನಡುವೆ ಸ್ವಲ್ಪ ಗ್ಯಾಪ್ ಆಗಿ ಮದುವೆ ನಂತರ ನೃತ್ಯ ಮುಂದುವಯಿತು. ನನಗೆ ನೃತ್ಯ ಹೇಳಿಕೊಟ್ಟ ಜನಾರ್ಧನ ಅವರಲ್ಲಿ , ಬೆಂಗಳೂರಿನ ವಸಂತ ಲಕ್ಷ್ಮೀ ಅವರಲ್ಲಿ ಅಭ್ಯಾಸ ಮಾಡಿ ವಿದ್ವತ್ ಮಾಡಿಕೊಂಡರು. ಕ್ರಮೇಣ ನಾನು ನೃತ್ಯವನ್ನು ಅಲ್ಲಿಯೇ ಬಿಟ್ಟು ಸಂಗೀದಲ್ಲಿ  ತೊಡಗಿಸಿಕೊಂಡೆ. ಮದುವೆಗೆ ಮೊದಲು 1990ರಲ್ಲಿ   ಶಾರದಾ ಸಂಗೀತ ಶಾಲೆಯ ಆರಂಭವಾಗಿ ಮದುವೆ ನಂತರ 95ರಿಂದ ನೃತ್ಯ ಶಿಕ್ಷಣವನ್ನೂ  ಆರಂಭಿಸಿದೆವು.
* ನಿಮ್ಮ ಮಕ್ಕಳಲ್ಲಿ  ಪರಂಪರೆ ಹೇಗೆ ಮುಂದುವರಿದಿದೆ ?
ಒಬ್ಬ ಮಗ ವಿಶ್ವಂಭರ. ಆತ ಸಂಗೀತ ಮತ್ತು ನೃತ್ಯ ಎರಡರಲ್ಲೂ ಮುಂದುವರಿದಿದ್ದಾನೆ. ಎರಡರಲ್ಲೂ  ಸೀನಿಯರ್ ಗ್ರೇಡ್ ಮುಗಿಸಿದ್ದು, ಸಿದ್ಧಗಂಗಾದಲ್ಲಿ  ಪಿಯು ಓದುತ್ತಿದ್ದಾನೆ. ವಿದ್ವತ್ ಅಭ್ಯಾಸ ಮಾಡುತ್ತಿದ್ದಾನೆ.
* ನೃತ್ಯ, ಸಂಗೀತ, ಕಲಿಕೆಯೂ ಮಹತ್ವದ್ದು  ಎಂದು ಮನವರಿಕೆಗೆ ಪ್ರಯತ್ನ ಏನಾದರೂ ಮಾಡಿದ್ದೀರಾ ?
ನಮ್ಮಲ್ಲಿ ಕಲಿಯುವ ಮಕ್ಕಳನ್ನು ಸೇರಿಸಿ ಅವರಿಗೆ ನೃತ್ಯದ ಮಹತ್ವ ತಿಳಿಸಿದ್ದೇವೆ. ಮಕ್ಕಳ ಶಾರೀರಿಕ ಬೆಳವಣಿಗೆಯಲ್ಲಿ, ಹಾಗೆಯೇ ಮಾನಸಿಕ ಬೆಳವಣಿಗೆಯಲ್ಲಿ  ಹಾಡು ನೃತ್ಯದ ಮಹತ್ವದ ಬಗ್ಗೆ  ಪಾಠ ಕ್ರಮದಲ್ಲೇ ಹೇಳುವುದಿದೆ. ವಾರ್ಷಿಕೋತ್ಸವ ಸಂದರ್ಭ ಸಾಧಕ ಕಲಾವಿದರನ್ನು ಕರೆಸಿ ಅವರಿಂದ ಮಾರ್ಗದರ್ಶನ, ಹಾಗೆಯೇ ನಮ್ಮ ಗುರು ಜನಾರ್ದನ್ ಮೂಲಕ ಇಲ್ಲಿನ ಕೆಲವು ಶಾಲೆಯಲ್ಲಿ ನೃತ್ಯ ಸಂವೇದನೆಯ ಪಾಠ ಮಾಡಿಸಿದ್ದಿದೆ. ಮುಂದಿನ ದಿನದಲ್ಲಿ  ಚಿಕ್ಕ ಚಿಕ್ಕದಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ.
* ಶಾರದಾ ನೃತ್ಯ ಮತ್ತು ಸಂಗೀತ ಶಾಲೆಯ ಬೆಳವಣಿಗೆ ಹೇಗಿದೆ...?
ಭಾಗವತ್ ದಂಪತಿಯ ನಟುವಾಂಗಕ್ಕೆ ವಿದ್ಯಾರ್ಥಿಗಳ ನೃತ್ಯ -photo vivek

ಕಳೆದ ಎರಡುವರೆ ದಶಕದ ಅವಯಲ್ಲಿ  ನಾವೂ ಕಲಿಯುತ್ತ, ಮಕ್ಕಳಿಗೂ ಕಲಿಸುತ್ತ  ಇಲ್ಲಿಯವರೆಗೆ ಬಂದಿದ್ದೇವೆ.  ಜತೆಗೆ ನಮ್ಮದೇ ಕಾರ್ಯಕ್ರಮ, ನಾವು ಕಲಿಸಿದ ಮಕ್ಕಳಿಗೆ ರಂಗದಲ್ಲಿ ಅವಕಾಶ, ಅವರನ್ನು ಉನ್ನತ ಶಿಕ್ಷಣಕ್ಕೆ ತಲುಪಿಸುತ್ತ ಬಂದಿದ್ದೇವೆ. ಈ ನಡುವೆ ನಮ್ಮ ಶಾಲೆಯಲ್ಲಿ  ಶಾಸ್ತ್ರೀಯ ಸಂಗೀತಕ್ಕಿಂತ ನೃತ್ಯವೇ ಹೆಚ್ಚಾಗಿ ಬೆಳೆದಿದೆ. ಕಾರಣ , ಶಾಸ್ತ್ರೀಯ ಸಂಗೀತದಲ್ಲಿ  ಜನರಿಗೆ ಒಲವು ಮೂಡಿಸುವುದು, ಆರ್ಥಿಕ ಪೋಷಕರನ್ನು  ಹುಡುಕುವುದು ಇಲ್ಲಿ  ಕಷ್ಟ. ನೃತ್ಯದಲ್ಲಿ ನಮ್ಮ ಕಲಾಶಾಲೆಯಿಂದ ನಂದನ ಪಿಬಿ. ಉನ್ನತ ಅಧ್ಯನ ಮಾಡಿ ಬೆಂಗಳೂರಿನಲ್ಲಿ  ಭರತನಾಟ್ಯ ಶಾಲೆಯನ್ನೂ ನಡೆಸುತ್ತಿದ್ದಾರೆ. ಹಾಗೇ ನಯನಾ ಪಿಬಿ.,  ಎಂ.ಜಿ., ಡಾ. ಸಂಸ್ಕೃತಿ ರಂಗಪ್ರವೇಶ ಮಾಡಿದ್ದಾರೆ. ಸಂಗೀತದಲ್ಲಿ ಅಶೋಕ್ ಅವರು ಇಲ್ಲಿಯೇ ಸಂಗೀತ ಶಿಕ್ಷಕರಾಗಿದ್ದಾರೆ.
* ಇಂದಿನ ದಿನದಲ್ಲಿ  ನೃತ್ಯ, ಸಂಗೀತದಲ್ಲಿ  ನಿರ್ದಿಷ್ಟ  ಪ್ರಕಾರವಲ್ಲದೆ, ಮಿಶ್ರ ಪ್ರಕಾರದ ಬೇಡಿಕೆ  ಹೆಚ್ಚಾಗಿದೆಯೇ ?
ಟೀವಿ ಮಾಧ್ಯಮ, ಮಕ್ಕಳ ರಿಯಾಲಿಟಿ ಶೋದಲ್ಲಿ  ಹಾಗೆ ತೋರಿಸಲಾಗುತ್ತಿದೆ. ಆದರೆ ವಾಸ್ತವ ಹಾಗಿಲ್ಲ. ಶಾಸ್ತ್ರೀಯ ಪರಂಪರೆ ಎಂಬುದು ಈ ದೇಶದ ಅಂತಃಸತ್ವ. ಮಿಶ್ರ ಪ್ರಕಾರ ಏನೇ ಇರಲಿಯಾವುದಾದರೂ ಒಂದು ಪ್ರಕಾರದಲ್ಲಿ, ನಾವು ಶಿಕ್ಷಣ ಮುಂದುವರಿಸಿದರೆ ಮಾತ್ರ ದೃಶ್ಯಕಲೆಯಲ್ಲಿ  ಏನಾದರೂ ಒಂದು ಸಾಧನೆ ಸಾಧ್ಯ. ಶಾಸ್ತ್ರೀಯ ಗುರುಗಳು ಸದಾ ಆಳವಾದ ಜಿಜ್ಞಾಸಿ ಆಗಿರಬೇಕು. ತಾವೂ ನಿರಂತರ ಅಧ್ಯಯನ, ಪ್ರಾಕ್ಟೀಸ್ ಮಾಡುತ್ತಲೇ ಇರಬೇಕು. ನಮ್ಮ ಪ್ರಮುಖ ಕಲಾವಿದರಿಗೆ ಯಾವತ್ತೂ ಅವಕಾಶ ಕಡಿಮೆ ಆಗಿಲ್ಲ. ದೇಶ ವಿದೇಶದಲ್ಲಿ  ನಿರಂತರವಾಗಿ  ಅವರು ಕಾರ್ಯಕ್ರಮ ಕೊಡುತ್ತಿದ್ದಾರೆ.
* ಮಿಶ್ರ ನೃತ್ಯ ಪ್ರಕಾರ ಹೊರತಾಗಿ ನಿರ್ದಿಷ್ಟವಾಗಿ ಭರತನಾಟ್ಯವೇ ಬೇಕೆಂದು ವಿದ್ಯಾರ್ಥಿಗಳು ನಿಮ್ಮಲ್ಲಿ ಕೇಳುವುದಿದೆಯೇ ?
ಸಾಮಾನ್ಯವಾಗಿ ಮಕ್ಕಳನ್ನು ಕಳುಹಿಸುವಾಗ ವಿಭಿನ್ನ  ಅಂದಾಜು ಇರುತ್ತದೆ. ಕೆಲವರು ಬರುತ್ತಲೇ ಯಾವಾಗ ಪರೀಕ್ಷೆ ಕಟ್ಟಿಸುತ್ತೀರಿ, ಯಾವಾಗ ಕಲಿತು ಮುಗಿಯುತ್ತದೆ ಎಂದು ಕೇಳುತ್ತಾರೆ. ನಮ್ಮಲ್ಲಿ ಸೇರಿದ ಮೇಲೆ ನೃತ್ಯವನ್ನು, ಸಂಗೀತವನ್ನು ಹೇಗೆ ಖುಷಿಯಾಗಿ ಸ್ವೀಕರಿಸಬಹದು ಎಂಬುದನ್ನು ನಾವು ತಿಳಿಸುತ್ತ ಹೋಗುತ್ತೇವೆ. ಇತ್ತೀಚೆಗೆ ನಮ್ಮ ಬಗ್ಗೆ ಒಂದು ಸ್ಪಷ್ಟತೆ ಇರುವುದಕ್ಕಾಗಿ ಫಿಲ್ಮ್ ಸಾಂಗ್, ಫಿಲ್ಮ್ ಸಾಂಗ್ ಅಥವಾ ಎಲ್ಲೋ ನಡೆಯುವ ಸ್ಪರ್ಧೆಗೆ ತಯಾರು ಮಾಡಿ ಅಂತ ನಮ್ಮಲ್ಲಿಗೆ ಬರುವುದಿಲ್ಲ. ನಮ್ಮ ಮನೆಯವರ ಟೀಚಿಂಗ್ ಮಾದರಿ ಮಕ್ಕಳಿಗೆ ಅಪ್ಯಾಯಮಾನವಾಗಿದೆ. ಹಾಗಾಗಿ ಕ್ರಮೇಣ ಈ ಪ್ರಕಾರದಲ್ಲಿ  ಜನರಿಗೂ ಗೌರವ ಉಂಟಾಗುತ್ತಿದೆ.

*ರಾಜ್ಯದಲ್ಲಿ  ಇಷ್ಟೇ ಜನಸಂಖ್ಯೆ ಇರುವ ನಗರಗಳಿಗೆ ಹೋಲಿಸಿದರೆ ದಾವಣಗೆರೆಯಲ್ಲಿ  ಭರತನಾಟ್ಯ ಮಾನ್ಯತೆ ಪಡೆದಿಲ್ಲ ಅನ್ನಿಸುತ್ತದೆ.
ಖಂಡಿತ ಹೌದು. ಪ್ರತ್ಯೇಕ ಜಿಲ್ಲೆಯಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಾಖೆ ಬರುವ ವರೆಗೂ, ಭರತ ನಾಟ್ಯ


ಅಥವಾ ಶಾಸ್ತ್ರೀಯ ಸಂಗೀತಕ್ಕೆ ಬೆಂಬಲ ಸಿಕ್ಕಿದ್ದು ತೀರಾ ಕಡಿಮೆ. ಬೇರೆ ಕಲಾಪ್ರಕಾರಕ್ಕೆ ಸಿಗುತ್ತಿದ್ದ ಮಾನ್ಯತೆ ಶಾಸ್ತ್ರೀಯ ಪ್ರಕಾರಕ್ಕೆ ಸಿಕ್ಕಿರಲಿಲ್ಲ. ಹೊರಗಿನಿಂದ ಶಾಸ್ತ್ರೀಯ ನೃತ್ಯ ಕಲಾವಿದರನ್ನು ಕರೆಸಿದಾಗ ಆರ್ಥಿಕ ಸಹಾಯ ಕಷ್ಟ. ಕಷ್ಟಪಟ್ಟು ನಾವೇ ಹಣ ಹೊಂದಿಸಿ ಕಾರ್ಯಕ್ರಮ ಸಂಘಟಿಸಿದರೂ ಬಂದು ಕುಳಿತು ನೋಡಿ ಖುಷಿಪಡುವವರ ಸಂಖ್ಯೆಯೂ ಕಡಿಮೆ ಇತ್ತು. ಇತ್ತೀಚಿನ ದಿನಗಳಲ್ಲಂತೂ ಶಿಕ್ಷಣ ನಗರಿಯಾಗಿ ಬೆಳೆಯುತ್ತಿದ್ದು, ಅಂಕ ಆಧಾರಿತ ಶಿಕ್ಷಣದ ಧಾವಂತದಲ್ಲಿ  ಮಕ್ಕಳು ಬೆಳಗ್ಗೆ  ಎಂಟಕ್ಕೆ ಶಾಲೆಗೆ ಹೋದರೆ ರಾತ್ರಿ ಎಂಟರ ತನಕವೂ ಶಾಲೆಯಲ್ಲಿಯೇ ಇಟ್ಟುಕೊಳ್ಳುವುದಿದೆ. ಮಕ್ಕಳಿಗೆ ಪಠ್ಯೇತರ  ಚಟುವಟಿಕೆಗೆ ಅವಕಾಶವೇ ಇಲ್ಲದ ಪರಿಸ್ಥಿತಿ ಇದೆ.  ಶಾಸ್ತ್ರೀಯ ಕಲಿಕೆ ಎಂದರೆ ಇಲ್ಲಿಯೂ ಕೂಡ ಅಷ್ಟೇ ಕಷ್ಟ ಹಾಗೂ ಸಮಯವನ್ನು ಮೀಸಲಿಡಬೇಕಾಗುತ್ತದೆ.
***

 ಮಹಾನ್ ಚೇತನ ರುಕ್ಮಿಣಿದೇವಿ ಅರುಂಡೇಲ್ ಸಂಸ್ಮರಣೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ  ಜ.14 ರ ಸಂಜೆ  ನೃತ್ಯ ಸಮರ್ಪಣಾ 2018 ಭರತನಾಟ್ಯ ಕಾರ್ಯಕ್ರಮ.
photo:  ಭಾಗವತ್ ದಂಪತಿಯ ನಟುವಾಂಗಕ್ಕೆ ವಿದ್ಯಾರ್ಥಿಗಳ ನೃತ್ಯ -photo vivek

-ಸದಾನಂದ ಹೆಗಡೆ










Read More