ಚೌಕಿಮನೆಯಲ್ಲಿ  ತೀರ್ಥಳ್ಳಿ

ಯಕ್ಷ ಅಭಿಮನ್ಯು ಎಂಬ ಬಿರುದು ಹೊಂದಿರುವ  ಇವರಿಗೆ ಯಕ್ಷಗಾನ ಕಲೆ ಜನರನ್ನು ಖುಷಿಪಡಿಸುವುದಕ್ಕಾಗಿಯೇ  ಇರುವುದೆಂಬ ಪ್ರಾಮಾಣಿಕ ನಂಬಿಕೆ. ಹಾಗಾಗಿ ಸಾಮಾಜಿಕ ಕತೆ ಅಥವಾ ಜನಪ್ರಿಯ ಸಿನಿಮಾ ಆಧರಿತ ಯಕ್ಷಗಾನಗಳು ಕಲೆಯನ್ನು ಕುಲಗೆಡಿಸುತ್ತಿದೆ ಎಂಬ ಗೊಣಗಾಟವೇ  ಇಲ್ಲ.  ಯಕ್ಷಗಾನದಲ್ಲಿ  ಕೌಟಿಂಬಿಕ ಹಿನ್ನೆಲೆ  ಇಲ್ಲದ  ತನಗೆ, ಹೆಚ್ಚಿನ ಓದು  ಸಾಧ್ಯವಾಗದಿದ್ದರೂ ತನ್ನ  ಕೆಲಸ ನೋಡಿ  ಜನ ಗುರುತಿಸಿದರು ಎಂಬ ಧನ್ಯತಾ ಭಾವ.  ‘ತಿರುಗಾಟದ ಸಮಸ್ಯೆಯನ್ನು ರಂಗದಲ್ಲಿ ಮರೆತುಬಿಡುವುದು’ ಎಂಬ ತತ್ವದಿಂದಾಗಿ ಮೇಳದ ಬದುಕಿನ ಅವ್ಯವಸ್ಥೆಗಳು, ಯಾವ್ಯಾವುದೋ ಊರಿಗೆ ಹೋದಾಗ ಅಲ್ಲಿನ ಗ್ರಾಮ ಚಾವಡಿಯಲ್ಲೇ ಮಲಗಿ ನಿದ್ರಿಸಬೇಕಾದ ಕಷ್ಟಗಳ ಬಗ್ಗೆ  ಕಂಪ್ಲೇಂಟ್‌ಗಳೇ ಇಲ್ಲ. ತನ್ನ ಕೆಲಸ ಏನಿತ್ತೂ ರಂಗಸ್ಥಳದಲ್ಲಿ ಎಂದು ನಂಬಿ ತಿರುಗಾಟ ನಡೆಸಿದ್ದರಿಂದ, ರಂಗಸ್ಥಳದಿಂದ ಇಳಿದ ಮೇಲೆ ಯಕ್ಷಗಾನದ ಬಗ್ಗೆ ಹೇಳುವುದಕ್ಕೆ ಹೆಚ್ಚೇನೂ ಇಲ್ಲ.
ನಿಜ. ಇಷ್ಟು ವಿವರಣೆ ಮತ್ಯಾರ ಬಗ್ಗೆಯೂ ಅಲ್ಲ-ಬಡಗು ತಿಟ್ಟಿನ ಪ್ರಖ್ಯಾತ ಕಲಾವಿದ ತೀರ್ಥಳ್ಳಿ ಗೋಪಾಲ ಆಚಾರ್(57)ಬಗ್ಗೆ. ಪೌರಾಣಿಕ ಇರಲಿ, ಸಾಮಾಜಿಕ ಇರಲಿ ಯಾವ ಯಕ್ಷಗಾನಕ್ಕೂ ಸೈ ಎನಿಸಿ, ಮಾಲೀಕರ ಮೆಚ್ಚುಗೆ ಗಳಿಸಿದವರು ಇವರು. 42 ವರ್ಷದ ತಿರುಗಾಟದ ಅನುಭವದಲ್ಲಿ  24 ವರ್ಷ ಪೆರ್ಡೂರು ಮೇಳದಲ್ಲಿಯೇ  ಸೇವೆ ಮಾಡಿದ್ದು, ಅಲ್ಲಿ ಇದೀಗ ಪ್ರಧಾನ ವೇಷಧಾರಿ. ಮೂಲ  ತೀರ್ಥಳ್ಳಿಯವರಾದರೂ  ಹೆಚ್ಚಿನವರಂತೆ  ಕುಂದಾಪುರ ಸಮೀಪವೇ ಮನೆ ಮಾಡಿದ್ದು, ಪತ್ನಿ ಮಂಜುಳ ಹಾಗೂ  ಎಂಜಿನೀಯರಿಂಗ್ ಓದುವ ಮಗ ನಿಧೀಶನಿಂದಿಗೆ ಸೆಟಲ್ ಆಗಿದ್ದಾರೆ. ಇನ್ನೇನು ಅವಕಾಶ ಇರುವಷ್ಟು ದಿನ ಯಕ್ಷಗಾನದಲ್ಲಿ ದುಡಿಯುವ ಆಸೆ ಇವರಿಗೆ. ತಮ್ಮ ವೃತ್ತಿಯ ಬಗ್ಗೆ ಸಂಪೂರ್ಣ ತೃಪ್ತಿ.
ಇತ್ತೀಚೆಗೆ ಆಟ ನಡೆಯುತ್ತಿದ್ದಾಗ, ದೃಶ್ಯದ ಬಿಡುವಿನಲ್ಲಿ  ಚೌಕಿಯಲ್ಲಿ  ನಡೆಸಿದ ಮಾತುಕತೆ ಇಲ್ಲಿದೆ . ಉಂಡೆ ಬಲ್ಬುಗಳ ಅಕ್ಕ ಪಕ್ಕ ಮಂದಲೆ, ಕಿರೀಟಗಳನ್ನು ತೂಗಿ ಬಿಟ್ಟ  ಇದೇ ಚೌಕಿಯಲ್ಲಿ  ಥಂಡೀಮನೆ, ಕ್ಯಾದಗಿ, ಗಾಣಿಗ ಸೇರಿದಂತೆ ಹಲವು ಸಹೋದ್ಯೋಗಿಗಳು ತಮ್ಮ ವೇಷ ಬರೆದುಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು.
*ತುಂಬ ಮೆಚ್ಚುಗೆಯಾದ ಪಾತ್ರ ?
ಬಳಸಿದರೆ ಎಲ್ಲ  ರಸಾಭಿವ್ಯಕ್ತಿಯೂ ಸಾಧ್ಯವಾದ ಅಭಿಮನ್ಯು ಪಾತ್ರ ನಿರ್ವಹಣೆಯಲ್ಲಿ  ಜೀವನದ ಉತ್ಕೃಷ್ಟ  ಖುಷಿ ಪಡೆದಿದ್ದೇನೆ. ನನಗೂ ವಯಸ್ಸಾಯಿತು. ಅಭಿಮನ್ಯು ಪಾತ್ರಕ್ಕೆ ವಿದಾಯ ಹೇಳಿ ಎರಡು ವರ್ಷ ಆಯಿತು.
*ಮೆಚ್ಚಿದ ಕಲಾವಿದ ?
ಬಹಳ ಜನ ಇದ್ದಾರೆ. ಆರಂಭದಲ್ಲಿ ನಗರ ಜಗನ್ನಾಥ ಶೆಟ್ಟರನ್ನು ತುಂಬ ಮೆಚ್ಚಿಕೊಂಡಿದ್ದೆ.
* ಬಡಗಿನ ಪ್ರಸಿದ್ಧ ನರ್ತಕರಲ್ಲಿ ನೀವೂ ಒಬ್ಬರು. ಎದುರು ಪಾತ್ರಧಾರಿಗೆ/ ಭಾಗವತರಿಗೆ ರಂಗದ ನಿಮ್ಮ ನಡೆಯ ಬಗ್ಗೆ  ಸಿಗ್ನಲ್‌ಗಳ ರವಾನೆ ಹೇಗೆ ?
ಎಷ್ಟು ನರ್ತಿಸಬೇಕು ಎಂಬ ಬಗ್ಗೆ  ಹೆಚ್ಚಾಗಿ ಮೊದಲೇ ನಿರ್ಧಾರ ಆಗಿರುತ್ತದೆ. ಸಮಯ ಹಾಗೂ ಹಮ್ಮಸ್ಸು ನೋಡಿ ಬೆಳಸಬೇಕೋ ಅಥವಾ ಮೊಟಕುಗೊಳಿಸಬೇಕೊ ಎಂದು ತೀರ್ಮಾನಿಸುತ್ತೇವೆ. ನಮ್ಮ ಹುರುಪು ನೋಡಿ ಭಾಗವತರೂ ರಂಗದಲ್ಲೇ ತೀರ್ಮಾನ ಕೈಗೊಳ್ಳುತ್ತಾರೆ.
*ಕಥೆಯ ಚೌಕಟ್ಟು ಮೀರೋ  ಮಾತುಗಾರರನ್ನು ಹೇಗೆ ನಿಯಂತ್ರಿಸುತ್ತೀರಿ?
ಸಾಮಾನ್ಯವಾಗಿ ಎಲ್ಲ ಪಾತ್ರಧಾರಿಗಳಿಗೂ ಅವರ ಜವಾಬ್ದಾರಿ ಇದ್ದೇ ಇರುತ್ತದೆ. ತೀರಾ ಆಭಾಸ ಆದಾಗ ಸಂಭಾಷಣೆ ತುಂಡು ಮಾಡುವುದು. ಪ್ರಸ್ತುತವಾದ ವಿಷಯವನ್ನು ನಾವೇ ಮುಂದುವರಿಸುವುದು.
* ಸಿನಿಮಾದಲ್ಲಿ  ನಾಲ್ಕು ಹಾಡು-ನಾಲ್ಕು ಫೈಟ್ ಯಶಸ್ಸಿನ  ಸೂತ್ರ ಎಂದು ತಿಳಿಯಲಾಗುವಂತೆ ಯಕ್ಷಗಾನದಲ್ಲಿ  ಅಂಥ ಯಶಸಿನ ಗುಟ್ಟು ಯಾವುದಾದರೂ ಇದೆಯಾ ?
ಒಂದು ಆಟದಲ್ಲಿ ಎಲ್ಲ ಬಗೆಯ ರಸಾಭಿವ್ಯಕ್ತಿ  ಇರಬೇಕು. ಹಾಗೆಂದು ಕಾಲಕಾಲಕ್ಕೆ ಜನರ ಬೇಡಿಕೆ ಬದಲಾಗುತ್ತಿರುತ್ತದೆ. ಒಂದು ಕಾಲದಲ್ಲಿ ನೃತ್ಯವನ್ನು ತುಂಬ ಇಷ್ಟಪಡುವ ಜನತೆ ಮುಂದೆ ಹಾಸ್ಯವನ್ನು ಮೆಚ್ಚಬಹದು. ಈಗ ಕೆಲವು ಆಟಗಳು ಯುದ್ಧವೇ ಇಲ್ಲದ ಹಾಗೂ ಶೃಂಗಾರವೇ ಇಲ್ಲದಿದ್ದರೂ  ಜನಪ್ರಿಯತೆ ಪಡೆಯುತ್ತಿವೆ.
-ಸದಾನಂದ ಹೆಗಡೆ ಹರಗಿ

Read More