ಭಾಷಣ ಅಂದ್ರೆ ಬೋರ್..

ಭಾಷಣ ಅಂದ್ರೆ ಬೋರ್..
ಸಮಯ ಇಲ್ಲದಿದ್ದರೂ ಜನರು ಪುರುಸೊತ್ತು ಮಾಡಿಕೊಂಡು ಕ್ರಕೆಟ್ ನೋಡಿ ಖುಷಿ ಪಡ್ತಾರೆ. ಮನೆ ಕೆಲಸ ಬೇಗ ಮುಗಿಸಿಕೊಂಡು ತಮಗೆ ಬೇಕಾದ ಟೀವಿ ಸೀರಿಯಲ್ ನೋಡುವುದಕ್ಕೆ ಮಹಿಳೆಯರು ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಆದರೆ ದುಡ್ಡು ಕೊಡ್ತೀವಿ, ಊಟ ಕೊಡ್ತೀವಿ..ಬಂದು ನಮ್ಮ ಭಾಷಣ ಸ್ವಲ್ಪ ಕೇಳಿ ಎಂದು ಗೋಗರೆದರೂ ಜನ ಬರಲ್ಲ.
ಇದು ರಾಜಕೀಯ ಸಭೆ ಸಮಾರಂಭದ ಸಮಸ್ಯೆ ಅಷ್ಟೇ ಅಲ್ಲ. ಸಾಮಾನ್ಯ ಕಾರ್ಯಕ್ರಮಗಳಲ್ಲಿಯೂ ಭಾಷಣ ಶುರುವಾಯಿತು ಎಂದರೆ ಜನ ಎದ್ದು ಹೊರಡುತ್ತಾರೆ. ಭಾಷಣಕಾರರಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಬಾಕಿ ಉಳಿದ ನೂರೆಂಟು ಕೆಲಸಗಳ ನೆಪ ಹೇಳಿ ಜಾಗ ಖಾಲಿ ಮಾಡುತ್ತಾರೆ. ಏನಿದರ ಮರ್ಮ ? ಜನರಿಗೆ ಭಾಷಣ ಅಂದರೆ ಯಾಕಿಷ್ಟು ಬೇಸರ ? ಭಾಷಣಕಾರರ ಬಗ್ಗೆ ಯಾಕಿಷ್ಟು ಅಲರ್ಜಿ ?
ಇದು ಕೇವಲ ಕನ್ನಡ, ಕರ್ನಾಟಕ ಎಂದಲ್ಲ, ಹೊರತಾಗಿ ಇದೂ ಒಂದು ಜಾಗತಿಕ ಸಮಸ್ಯೆ.
ಹಿಂದೆ ಭಾಷಣ ಕೇಳುವುದಕ್ಕಾಗಿ ಜನರು ಟಿಕೆಟ್ ಶುಲ್ಕ ಕೊಟ್ಟು ಹೋಗುವುದಿತ್ತಂತೆ. ಕವಿ ಬೇಂದ್ರೆಯವರ ಭಾಷಣ ಕೇಳಲು ಜನ ಎಲ್ಲೆಲ್ಲಿಂದೆಲ್ಲ ಬರುತ್ತಿದ್ದರಂತೆ. ಮರಾಠಿ ಸಾಹಿತಿ ಪು.ಲ.ದೇಶಪಾಂಡೆ ಅವರ ಭಾಷಣಕ್ಕೆ ಜನ ಟಿಕೆಟ್ ಖರೀದಿಸಿ ಹೋಗುತ್ತಿದ್ದರು ಎಂಬುದೇ ಅವರ ಭಾಷಣದ ಜನಪ್ರಿಯತೆ ಹೇಳುತ್ತದೆ. ಹೊಂ ರೂಲ್ ಲೀಗ್ ಸ್ಥಾಪಿಸಿದ್ದ ಅನಿ ಬೆಸೆಂಟ್ ಯೂರೋಪ್ ನಲ್ಲಿ ತಮ್ಮ ಭಾಷಣದಿಂದ ಗಳಿಸಿದ ಹಣವನ್ನು ಭಾರತದಲ್ಲಿ ಸಮಾಜ ಕಾರ್ಯಕ್ಕೆ ಬಳಸುತ್ತಿದ್ದರು ಎಂದು ದಾಖಲೆಗಳು ಹೇಳುತ್ತಿವೆ. ಆದರೆ ಇದೀಗ ಎಲ್ಲ ಉಲ್ಟಾ.
ತಮ್ಮದೂ ಏನೋ ಕೆಲಸ ಆಗಬೇಕು ಎಂಬ ಕಾರಣಕ್ಕೆ, ಸಂಘಟಕರ ಮುಲಾಜಿಗೆ ಬಿದ್ದು ಎಲ್ಲೊ ಒಂದಿಷ್ಟು ಭಾಷಣ ಕೇಳುಗರು ಸಿಗುತ್ತಾರೆ ಬಿಟ್ಟರೆ ಸಾವಱಜನಿಕ ಕಾರ್ಯಕ್ರಮಗಳಲ್ಲಿ ಭಾಷಣಕ್ಕೆ ಇದೀಗ ಬೆಲೆಯೇ ಇಲ್ಲ.
ವ್ಯಕ್ತಿಯೊಬ್ಬ ತನ್ನ ಅಭಿಪ್ರಾಯವನ್ನು ಗುಂಪಿಗೆ ತಿಳಿಸುವ ಪ್ರಾತಿನಿಧಿಕ ಕಾರ್ಯವು ಯಾಕೆ ಮಹತ್ವ ಕಳೆದುಕೊಳ್ಳುತ್ತಿದೆ. ಜನರಿಗೆ ವಿಷಯ ತಿಳಿದುಕೊಳ್ಳಲು ಅನುಕೂಲಕರ ಇತರ ಮಾರ್ಗ ಹೆಚ್ಚಿರುವುದು ಕಾರಣವೇ ? ಹೆಚ್ಚಿನ ಭಾಷಣಗಳಲ್ಲಿ ತಿಳಿದುಕೊಳ್ಳುವಂಥದ್ದು ಏನೂ ಇಲ್ಲದಿರುವುದು ಕಾರಣವೇ ? 
ಭಾಷಣ ಎಂದರೆ ಮೂಗು ಮುರಿಯುವ ಪರಿಸ್ಥಿತಿ ಬಂದಿದ್ದಾದರೂ ಯಾಕಿರಬಹುದು ? ಹೆಚ್ಚುತ್ತಿರುವ ಭಾಷಣಕಾರರು ಕಾರಣ ಇರಬಹುದೇ ? ನಿಜ. ಜನರಿಗೆ ಏನೋ ಬೇಕು ಎಂಬ ಸದುದ್ದೇಶಕ್ಕಿಂತ, ತಮ್ಮ ವಸ್ತುಗಳನ್ನು ಮಾರುವ ಮಾರಾಟಪ್ರತಿನಿಧಿಗಳು, ತಮ್ಮ ಬಗ್ಗೆ ಪ್ರಚಾರ ಮಾಡಿ ಬೋರ್ ಹುಟ್ಟಿಸುವವರು ಭಾಷಣಕಾರರಾಗಿ ಬರುತ್ತಿರುವುದು ಸಮಸ್ಯೆಯ ಒಂದು ಮೂಲ. ತನ್ನ ಭಾಷಣಕ್ಕೆ ಹೆಚ್ಚು ಜನರನ್ನು ಕರೆಸಿಕೊಂಡು ವಿರೋಧಿಗಳೆದುರು ಬಲ ಪ್ರದರ್ಶನವೂ ರಾಜಕೀಯ ಪಕ್ಷಗಳ ಒಂದು ದಾಳ. ಇನ್ನು  ತಮ್ಮ ಮನಸ್ಸಿನ ಭಾರ ಇಳಿಸಿಕೊಳ್ಳಲು, ಯಾರದ್ದೋ ವಿರುದ್ಧ ದ್ವೇಷ ತೀರಿಸಿಕೊಳ್ಳಲು, ತಮ್ಮ ಮನಸ್ಸಿನ ವಿರೂಪಕ್ಕೆ ಭಾಷಣದಲ್ಲಿ ಅಭಿವ್ಯಕ್ತಿ ಕಂಡುಕೊಳ್ಳುವವರು ಸಮಸ್ಯೆಯ ಮೂಲ.
ಇಂಥ 'ಸ್ವ-ಅರ್ಥ'ದ  ಭಾಷಣಕಾರರು ಕಾರ್ಯಕ್ರಮ ಸಂಘಟಕರಿಗೆ ದುಡ್ಡುಕೊಡುವುದಕ್ಕೂ ಸಿದ್ಧ. ಪ್ರಚಾರ ಪ್ರಿಯರು ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಷಕರೂ ಆಗಿದ್ದಾರೆ.
ಹಲವರಿಗೆ ಆರ್ಥಿಕ ಉದ್ದೇಶ ಇರುವುದಿಲ್ಲ. ಹೊರತಾಗಿ ಸಾಮಾಜಿಕವಾಗಿ ತಾನೂ ಒಬ್ಬ ಜನ (ಸೋಷಿಯಲ್ ಗ್ರೇಟಿಫಿಕೇಶನ್), ಜನರು ತನ್ನ ಬಗ್ಗೆ ನಾಲ್ಕು ಒಳ್ಳೆಯ ಮಾತು ಆಡಬೇಕು ಎಂಬುದಕ್ಕೆ ಭಾಷಣ ಮಾಡುವುದೇ, ಮುಖ್ಯ ಅತಿಥಿಗಳಾಗುವುದೇ ಏಕೈಕ ಮಾರ್ಗ ಎಂದು ತಪ್ಪು ತಿಳಿದುಕೊಂಡಿರುವುದು ಕಾರಣ. ಈ ಮಟ್ಟಿಗೆ ಭಾಷಣ ಎಂದರೆ ಓಡಿ ಹೋಗುವ ಜನರಲ್ಲಿ ಯಾವ ತಪ್ಪೂ ಇಲ್ಲ.


ಬಾಕ್ಸ್
ಬೋರಾಗಲು ಕಾರಣ
* ಒಂದು ತಾಸು ಕೇಳಿದರೂ ಒಂದು ಆಕರ್ಷಕ ಅಂಶ ಇರುವುದಿಲ್ಲ.
* ಕೇಳುಗರ ಬೇಡಿಕೆ ತಿಳಿಯದೆ ಉದ್ದಕ್ಕೆ ಹೇಳುತ್ತ ಹೋಗುವುದು.
* ಸಮಸ್ಯೆ ತರುವ ಮೈಕ್ ವ್ಯವಸ್ಥೆ.ಕಿರಿಕಿರಿಯಾಗುವ ಸ್ವರ.
* ಭಾಷಣಕಾರರ ಅಸಭ್ಯ ಹಾವಭಾವ. ಮಾತುಗಳು.
* ಭಾಷೆಯ ಅಸ್ಪಷ್ಟತೆ, ಲಾಲಿತ್ಯದ ಕೊರತೆ.
* ಬೋರಾಗುವಷ್ಟು ಉದ್ದದ ಭಾಷಣ. ಅತಿಯಾದ ಆತ್ಮಪ್ರಶಂಸೆ.
* ತಯಾರಿ ಇಲ್ಲದೆ ಭಾಷಣ ಮಾಡುವುದು.
* ಹತ್ತು ವರ್ಷದಿಂದ ಒಂದೇ ಭಾಷಣ ಹೋದಲ್ಲೆಲ್ಲ ಪುನರಾರ್ವತನೆ.


ಪರಿಹಾರ ಏನು ?
*ನಾವು ಭಾಷಣ ಯಾರಿಗೆ ಮಾಡುತ್ತೇವೆ ಎಂಬ ಎಚ್ಚರ.
*ಸೂಕ್ತ ಪೂರ್ವ ತಯಾರಿ. ಚಿಕ್ಕದಾಗಿ ಹೇಳುವುದನ್ನು ಕಲಿಯುವುದು.
* ಮೈಕ್ ಚಪಲದ ಹಿಂದಿನ ಕೊಳಕನ್ನು ಅರ್ಥಮಾಡಿಕೊಳ್ಳುವುದು.
* ಮಾತಿಗಿಂತ ಕೃತಿ ಮುಖ್ಯ ಎಂಬುದನ್ನು ಅರಿಯುವುದು.
*ಉತ್ತಮ ಭಾಷಣದ ತರಬೇತಿ ಪಡೆಯುವುದು.
*ಜನರನ್ನು ರಂಜಿಸುವ ಉದ್ದೇಶದ ಭಾಷಣ ಕಲೆ ಕರತಗ ಮಾಡಿಕೊಳ್ಳುವುದು ( ಗಂಗಾವತಿ ಪ್ರಾಣೇಶ ನೆನಪಿಸಿಕೊಳ್ಳಿ.)
* ನಮ್ಮ ಎದುರು ಇರುವವರು ದಡ್ಡರಲ್ಲ ಎಂಬ ಎಚ್ಚರ.

-ಸದಾನಂದ ಹೆಗಡೆ ಹರಗಿ
Read More

"ಮದ್ರಾಸಿ ಲೋಗ್‌'ಆಗುವ ಕನ್ನಡಿಗರು

"ಮದ್ರಾಸಿ ಲೋಗ್‌'ಆಗುವ ಕನ್ನಡಿಗರು


ಇತ್ತೀಚೆಗೆ ಕಲರ್ಸ್‌ ಹಿಂದಿ ವಾಹಿನಿಯಲ್ಲಿ  ನಡೆದ "ಇಂಡಿಯಾಸ್‌ ಗಾಟ್‌ ಟ್ಯಾಲೆಂಟ್‌' ಸ್ಪರ್ಧೆಯಲ್ಲಿ ಕರ್ನಾಟಕದ ಇಬ್ಬರು ಕಲಾವಿದರು ಅಂತಿಮ ಹಂತದ ತನಕ ಬಂದಿದ್ದರು. ಜಾನಪದ ಹಾಗೂ  ಯಕ್ಷಗಾನ ರಂಗಭೂಮಿ ಸೊಗಡಿನೊಂದಿಗೆ ಜಾದೂ ಕಾರ್ಯಕ್ರಮ ನೀಡುವ ಮೂಲಕ ಖ್ಯಾತಿ ಪಡೆದಿರುವ ಮಂಗಳೂರು ಮೂಲದ ಕುದ್ರೊಳಿ ಗಣೇಶ್‌  ಅವರಲ್ಲಿ  ಒಬ್ಬರು. ತಮ್ಮ ಅಪರೂಪದ ಪ್ರದರ್ಶನದಿಂದ ಗಣೇಶ್‌ ಸ್ಫರ್ಧೆಯ ಜಜ್‌ಗಳು ಹಾಗೂ ಅಖಿಲ ಭಾರತ ಮಟ್ಟದ ಪ್ರೇಕ್ಷಕರನ್ನು ಗಮನಸೆಳೆಯುವುದರಲ್ಲಿ ಯಶಸ್ವಿ ಆಗಿರುವುದು ನಿಜ. ಆದರೆ ಕರ್ನಾಟಕದ ಹೊರಗಿನ ಪ್ರೇಕ್ಷಕರಿಗೆ ಇವರೊಬ್ಬ  "ಮದ್ರಾಸಿ' ಎಂಬ ರೀತಿಯಲ್ಲಿ  ಪರಿಚಯಿಸಲ್ಪಟ್ಟಿದ್ದು ಮಾತ್ರ ದುರದೃಷ್ಟಕರ.

ಪಂಜಾಬಿ ತಂದೆ ಹಾಗೂ ತಮಿಳು ತಾಯಿಯನ್ನು ಹೊಂದಿರುವ  ಚಿತ್ರನಟಿ ಇಶಾ ಡಿಯೋಲ್‌ ಗಣೇಶ್‌ ಅವರ ಪ್ರದರ್ಶನ ಚೆನ್ನಾಗಿದೆ ಎಂಬುದನ್ನು ತಮಿಳಿನಲ್ಲಿ  ಪ್ರಶಂಸಿಸಿ ತಮಿಳು ಹಾಗೂ  ತುಳು ಒಂದೆ ಎಂದು ತಮ್ಮ ಶಿಕ್ಷಣದ ಮಿತಿಯನ್ನು ತೋರಿದರು. ಹಾಗೇ ತನ್ನ ರಾ.ವನ್‌ ಚಿತ್ರದ ಪ್ರಚಾರದ ಉದ್ದೇಶದೊಂದಿಗೆ  ಕೊನೆಯ ದಿನ ಇದೇ ಕಾರ್ಯಕ್ರಮಕ್ಕೆ ಬಂದಿದ್ದ ಶಾರೂಖ್‌ ಖಾನ್‌  ಕೂಡ ಗಣೇಶ್‌ ಅವರನ್ನು ಚೆನ್ನೈ ಮೂಲದ ವ್ಯಕ್ತಿ ಎಂಬಂತೆ ಬಿಂಬಿಸಿದರು. ಇವೆರಡೂ ಸಂದರ್ಭದಲ್ಲಿ  ಚಿತ್ರ ನಟರು ತಮ್ಮ ಬೌದ್ಧಿಕ ಮಿತಿಯನ್ನು ಪ್ರದರ್ಶಿಸಿದರು ಎಂಬುದು ಒಂದು ವಿರಣೆಯಾದರೆ ಗಣೇಶ್‌ ಕೂಡ ಈ ಬಗ್ಗೆ ಸ್ಪಷ್ಟನೆ ಕೊಡದೆ ನಕ್ಕು ಸುಮ್ಮನಾಗಿದ್ದು  ಗಮನಿಸಬೇಕಾದ ಅಂಶ. ಹಿಂದಿ ಪ್ರೇಕ್ಷರೇ ಹೆಚ್ಚಿರುವ ಕಲರ್ಸ್‌ ವಾಹಿನಿಯಲ್ಲಿ  ತನ್ನ ಮೂಲದ ಬಗ್ಗೆ  ಹೇಳುವುದಕ್ಕೆ ಎಲ್ಲೊ ಆಳದಲ್ಲಿ  ಅನವಶ್ಯಕ ಅಳುಕು ಕುದ್ರೋಳಿ ಗಣೇಶ್‌ ಅವರಲ್ಲಿ ಇದ್ದಂತೆ ತೋರುತ್ತಿದೆ. ಪಂಚ ದ್ರಾವಿಡ ಭಾಷೆಗಳಲ್ಲೊಂದಾಗಿರುವ ತುಳು ಕರ್ನಾಟಕ ಮೂಲದ್ದು ಎಂಬುದಾಗಿ ಸ್ಪಷ್ಟನೆ ಕೊಡುವ ಗೋಜಿಗೆ ಗಣೇಶ್‌ ಮುಂದಾಗಿಲ್ಲ.  ಸ್ಪಷ್ಟನೆ ಕೊಡುವುದಕ್ಕೆ ಗಣೇಶ್‌ಗೆ ಅವಕಾಶವೂ ಆಗಲಿಲ್ಲ  ಎಂಬ ವಾದವಿದ್ದರೂ ಬಹುಸಂಸ್ಕೃತಿಯ ನಮ್ಮ ದೇಶದಲ್ಲಿ  ಬಹಳಷ್ಟು  ಪ್ರೇಕ್ಷಕರಿರುವ ರಾಷ್ಟ್ರೀಯ ಮಟ್ಟದ ಟೀವಿ ವಾಹಿನಿಯಲ್ಲಿ  ಆದ ಅಚಾತುರ್ಯ, ಸಣ್ಣ ಪುಟ್ಟ ಸಂಸ್ಕೃತಿಗೆ ಆಗಿರುವ ಅನ್ಯಾಯ ಇದು ಎಂಬುದು ನಿಜ.

ಇದೇ ರೀತಿ ಘಟನೆ ಮೈಸೂರು ದಸರಾ ಕಾರ್ಯಕ್ರಮದಲ್ಲೂ ಆಗಿದೆ. ಮೈಸೂರು ದಸರಾ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ವರದಿ ಮಾಡಿದ ಹೆಚ್ಚಿನ ಕನ್ನಡ ಟೀವಿ ವಾಹಿನಿಗಳು ಸ್ಯಾಕ್ಸೊಫೋನ್‌ ಕಾರ್ಯಕ್ರಮ ನೀಡಿದ ಎಂ. ಎಸ್‌. ಲಾವಣ್ಯ ಹಾಗೂ ಸುಬ್ಬಲಕ್ಷ್ಮೀ ಸಹೋದರಿಯರನ್ನು ಚೆನ್ನೈ ಮೂಲದವರು ಎಂದು ಪರಿಚಯಿಸಿವೆ. ವಾಸ್ತವ ಸಂಗತಿ ಎಂದರೆ ಇವರಿಬ್ಬರೂ ಮಂಗಳೂರು ಮೂಲದವರು. ಇಲ್ಲಿ  ಟೀವಿ ವಾಹಿನಿಯವರ ತಪ್ಪು ತಿಳಿವಳಿಕೆಯೋ ಅಥವಾ ಸ್ವತಃ ಕಲಾವಿದರೇ ಆ ರೀತಿಯ ವಿಳಾಸ ತಿಳಿಸುವುದಕ್ಕೆ ಅಪೇಕ್ಷಿಸಿದ್ದರೊ ಗೊತ್ತಿಲ್ಲ.

ಇತ್ತೀಚೆಗೆ ನಾಲ್ಕಾರು ವರ್ಷದಿಂದ ಚೆನ್ನೈನಲ್ಲಿ ಹೆಚ್ಚಿನ ಶಿಕ್ಷಣ ಕಲಿಯುತ್ತಿದ್ದು, ಅಲ್ಲಿ ನೆಲೆಸಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ  ದಶಕ ಅವಧಿಯಲ್ಲಿ  ಮೃದಂಗ ಕಲಾವಿದರಾದ ಎಂ. ಆರ್‌. ಸಾಯಿನಾಥ್‌ ಈ ಸಹೋದರಿಯರ ತಂದೆ. ಸಾಯಿನಾಥ್‌ ಕೂಡ  ಇದೇ ಕಾರ್ಯಕ್ರಮದಲ್ಲಿ  ಇದ್ದರು. ಮಂಗಳೂರಿನಲ್ಲೇ ಹುಟ್ಟಿದ ಸಹೋದರಿಯರು ಆರಂಭಿಕ ಕಾರ್ಯಕ್ರಮಗಳನ್ನು ಮಂಗಳೂರು ಹಾಗೂ ಮೈಸೂರಿನಲ್ಲೇ  ನೀಡಿದರೂ  ಇದೀಗ ಚೆನ್ನೈನವರಾಗಿದ್ದಾರೆ !

ವೃತ್ತಿಪರವಾಗಿ ಮಹತ್ವಾಕಾಂಕ್ಷೆ ಹೊಂದಿರುವ  ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರೆಲ್ಲ  ತಾವು ಕನ್ನಡಿಗರು ಅಥವಾ ಕರ್ನಾಟಕದವರು ಎಂದುಕೊಳ್ಳುವುದಕ್ಕಿಂತ ತಮಗೆ ತಮಿಳು ಬರುತ್ತದೆ, ತಾವು ಚೆನ್ನೈನವರು ಎಂದೇ ಹೇಳಿಕೊಳ್ಳುವುದಕ್ಕೆ ಇಷ್ಟಪಡುವುದು ಹೊಸ ಸಂಗತಿಯಲ್ಲ. ಆಗಲೆ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಕನ್ನಡ ಮೂಲದ ಕರ್ನಾಟಕ ಶಾಸ್ತ್ರೀಯ ಸಂಗೀತ  ಕೆಲವು ಕಲಾವಿದರು ತಮ್ಮ ಹೆಸರಿನ ಮುಂದೆ "ಚೆನ್ನೈ' ಎಂದು ಹಾಕಿಕೊಳ್ಳುತ್ತಾರೆ. ಕರ್ನಾಟಕ ಸಂಗೀತದ ಪಿತಾಮಹ ಪುರಂದರ ದಾಸರು ಎಂದು ಹೇಳಲಾಗುತ್ತದೆಯಾದರೂ, ಕರ್ನಾಟಕದ  ಸಂಗೀತಗಾರರಿಗೆ ತಾವು ಕರ್ನಾಟಕದವರು ಎಂದು ಹೇಳಿಕೊಳ್ಳುವುದಕ್ಕೆ ಕೀಳರಿಮೆ.

ಇದೇ ರೀತಿ ಹಲವು ನಿದರ್ಶನ ನೀಡಬಹುದು. ೨೦೦೮ರಲ್ಲಿ ಬೂಕರ್‌ ಪ್ರಶಸ್ತಿ ಪಡೆದ  ಇಂಗ್ಲೀಷ್‌ ಲೇಖಕ ಅರವಿಂದ ಅಡಿಗ ಮಂಗಳೂರಿನವರು, ಕನ್ನಡಿಗರು ಎಂದು ನಾವು ಗುರುತಿಸುತ್ತೇವೆ. ಅರವಿಂದರ ಅಜ್ಜ  ಕೆ.ಎಸ್‌. ಅಡಿಗ ಪ್ರತಿಷ್ಟಿತ ಕರ್ಣಾಟಕ ಬ್ಯಾಂಕ್‌ನ  ಸಂಸ್ಥಾಪಕರಲ್ಲಿ, ಅರವಿಂದರ ತಾಯಿ ಚೆನ್ನೈವರಾಗಿದ್ದರೂ, ಈತ ಬಾಲ್ಯದಲ್ಲಿ  ಓದಿದ್ದು ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ  ಎಂಬುದು ಕರ್ನಾಟಕದವರು ಹೆಮ್ಮೆ. ಆದರೆ ಬೂಕರ್‌ ಪ್ರಶಸ್ತಿ ಪಡೆದ "ವೈಟ್‌ ಟೈಗರ್‌' ಕಾದಂಬರಿಯ ಮೊದಲ ಪುಟದಲ್ಲಿ  ಅರವಿಂದ ಅಡಿಗ ಚೆನ್ನೈನವರು ಎಂಬುದಾಗಿ ಪರಿಚಯಿಸಲಾಗಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಹಾರ್ಪರ್‌ ಕೊಲಿನ್‌ ಮುದ್ರಣಾಲಯ ಅರವಿಂದ ಅಡಿಗರನ್ನು  ಪರಿಚಯಿಸುವಾಗ ಅವರ ಕರ್ನಾಟಕದ ಮೂಲವನ್ನೇ ಉಲ್ಲೇಖಿಸಿಲ್ಲ, ಆ ಬಗ್ಗೆ  ಅಡಿಗರೂ  ಪ್ರಕಾಶಕರಿಗೆ ತಿಳಿಸಿದಂತಿಲ್ಲ. ಯಾಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಕನ್ನಡಕ್ಕಿಂತ ತಮಿಳಿಗಿರುವ ಮಾರುಕಟ್ಟೆ  ದೊಡ್ಡದು  ಎಂಬ ಉದ್ದೇಶ ಇದ್ದಂತೆ ತೋರುತ್ತದೆ.

ಇಲ್ಲಿ  ಟೀವಿ ವಾಹಿನಿಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಬೆಳದರೂ ಕರ್ನಾಟಕದವರು ಎಂದು ಹೇಳಿಕೊಳ್ಳುವುದಕ್ಕೆ ಇಷ್ಟಪಡದ ಕನ್ನಡಿಗರನ್ನಷ್ಟೇ ದೂರಿದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. .

ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವ ಕನ್ನಡಿಗರಿಗೆ ಪ್ರಾದೇಶಿಕತೆ ಕೆಲವೊಮ್ಮೆ ತೊಡಕಾಗುತ್ತದೆ ಎಂಬುದು ನಿಜ. ಕರ್ನಾಟಕದ ಪಾರಂಪರಿಕ ಶಕ್ತಿಯನ್ನು ಹೀರಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಕನ್ನಡಿಗರಲ್ಲಿ  ನಾಡು ನುಡಿಯ ಬಗೆಗಿನ ಕೀಳರಿಮೆ ತೊಡೆದು, ಸ್ವಾಭಿಮಾನ ಬೆಳೆಸುವ ನಿಟ್ಟಿನಲ್ಲೂ  ಪ್ರಯತ್ನ ನಡೆಯಬೇಕಾದ ತುರ್ತು ಕಾಣುತ್ತಿದೆ. ಕರ್ನಾಟಕವನ್ನು ಮೀರಿ ಬೆಳೆಯುವ ವ್ಯಕ್ತಿಗಳಿಗೆ ನಾವು ಪ್ರೋತ್ಸಾಹಿಸುತ್ತಲೇ ಅವರಲ್ಲಿನ ಕೀಳರಿಮೆಯನ್ನು ತೊಡೆದುಹಾಕುವ ವಿದಾಯಕ ಕೆಲಸ ಆಗಬೇಕಿದೆ. ಆ ಮೂಲಕ ನಾಡು ನುಡಿಯನ್ನು ಬೆಳೆಸಬೇಕಾಗಿದೆ.

-ಸದಾನಂದ ಹೆಗಡೆ ಹರಗಿ
Read More