ಕಡತದಲ್ಲಿ ಕಂಡ ಶತಮಾನದ ಹಿನ್ನೋಟ

ಕಡತದಲ್ಲಿ ಕಂಡ ಶತಮಾನದ ಹಿನ್ನೋಟ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟಗಿ, ಹೊನ್ನೆಗಟಗಿ 
ಶತಮಾನೋತ್ಸವ ಆಚರಿಸುತ್ತಿರುವ ಹೊನ್ನೆಗಟಗಿ ಶಾಲೆ ತನ್ನ ಒಡಲಲ್ಲಿ, 20ನೇ ಶತಮಾನದ ಭಾರತದ ಹಳ್ಳಿಯೊಂದರ ಇತಿಹಾಸವನ್ನೇ ಬಚ್ಚಿಟ್ಟುಕೊಂಡಿದೆ. ಬ್ರಿಟೀಷ್ ಆಡಳಿತ ಹಾಗೂ ಸ್ವತಂತ್ರ ಭಾರತದ ಶೈಕ್ಷಣಿಕ ಬೆಳವಣಿಗೆಗೆ ಇಲ್ಲಿರುವ ಕಡತಗಳು ಸಾಕ್ಷಿ. ಸುತ್ತಲಿನ ಊರುಗಳು ಶತಮಾನದ ಅವಧಿಯಲ್ಲಿ ಅನಕ್ಷರ ಪ್ರಪಂಚದಿಂದ ಸಾಕ್ಷರತೆಯ ಕಡೆಗೆ ಹೆಜ್ಜೆ ಹಾಕಲು ಇದೊಂದು ಪ್ರಮುಖ ಸೋಪಾನ. ಮಾತ್ರವಲ್ಲ ಸಾಮಾಜಿಕ, ಆರ್ಥಿಕ ಮತ್ತು ವಿಶೇಷವಾಗಿ ನೈತಿಕವಾಗಿ ನಮ್ಮ ಸಮಾಜ ಪ್ರಗತಿಯಾಗುತ್ತಿರುವುದಕ್ಕೆ ಶಾಲೆಯಲ್ಲಿ ಲಿಖಿತ ದಾಖಲೆ ಇದೆ.
ಇಟಗಿಯ ರಾಮೇಶ್ವರ ದೇವಸ್ಥಾನ
ಇದರ ಇತಿಹಾಸವನ್ನು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಎಂದು ಎರಡು ಭಾಗವಾಗಿ ಬಣ್ಣಿಸಬಹದು.
20ನೇ ಶತಮಾನದ ಆರಂಭದಲ್ಲಿ ಅಂದರೆ ಈ ಶಾಲೆ ಸ್ಥಾಪನೆಯಾಯಿತು. ಆ ಹೊತ್ತಿಗೆ ನಮ್ಮನ್ನಾಳುತ್ತಿದ್ದವರು ಬ್ರಿಟೀಷರು. ಆಗಲೇ ದೇಶದಲ್ಲಿ ಸ್ವಾತಂತ್ರ್ಯದ ಕೂಗು ಕೇಳುತ್ತಿದ್ದ ಕಾರಣ, ತಮ್ಮ ಆಡಳಿತದಲ್ಲಿ ಅಭಿವೃದ್ಧಿಯ ರುಚಿ ಹುಟ್ಟಿಸಿ ಜನರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದರು. ಪಾಶ್ಚಾತ್ಯ ದೇಶದಲ್ಲಿ ಆಗಲೇ ಪ್ರಗತಿಯ ಗಾಳಿ ಬೀಸುತ್ತಿತ್ತು. ಅಲ್ಲಿನ ಶಿಕ್ಷಣ ನೀತಿಯನ್ನು ಅವರು ಭಾರತದಲ್ಲಿ ಆರಂಭಿಸಿದ್ದರು. ಅದರ ಸಣ್ಣ ಬೆಳಕೊಂದು, ನಮ್ಮ ಪುಟ್ಟ ಊರಿನ ಮೇಲೂ ಬಿದ್ದು, ಇದೀಗ ಶತಮಾನ ಆಚರಿಸುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟಗಿ, ಹೊನ್ನೆಗಟಗಿ ಶಾಲೆ ಹುಟ್ಟಿತು.
ಗುಡ್ಡೆಕೊಪ್ಪದ ನಾರಾಯಣ ಭಟ್ಟರಿಗೆ ಇಟಗಿಯ ರಾಮೇಶ್ವರ ದೇವಸ್ಥಾನದ ಚಂದ್ರಶಾಲೆಯಲ್ಲಿ ಗಾವ್ಟಿ ಶಾಲೆ ಆರಂಭಿಸಲು 1913ರಲ್ಲಿ  ಬ್ರಿಟೀಷ್ ಸರಕಾರ ಅನುಮತಿ ನೀಡಿತು. ಈ ಭಾಗವು ಮುಂಬಯಿ ಪ್ರಾಂತ್ಯದದಲ್ಲಿ ಇತ್ತೆಂಬುದರ ಕುರುಹನ್ನು ಗಾಂವ್ಟಿ ಎಂಬ ಶಬ್ಧದಲ್ಲಿ ಗುರುತಿಸಬಹದು. ಗಾಂವ್ಟಿ ಇದೀಗ ಕನ್ನಡ ಶಬ್ಧವಾಗಿದ್ದರೂ, ಹಳ್ಳಿ ಎಂದು ಗುರುತಿಸುವ ಈ ಶಬ್ಧ ಮೂಲ ಮರಾಠಿ ಅಥವಾ ಹಿಂದಿ ಭಾಷೆ. ಸ್ವಾತಂತ್ರ್ಯ ಹೋರಾಟ ಸೇರಿದಂತೆ ಸಾರ್ವಜನಿಕವಾಗಿ ಕಾಣುವ ಗುಡ್ಡೆಕೊಪ್ಪ ಭಟ್ಟರ ಕುಟುಂಬದ ಕುರುಹು ಇಲ್ಲಿಂದಲೇ ಗೋಚರಿಸುತ್ತದೆ.
ಹಿಂದಿನ ಕಾಲದಲ್ಲಿ ಶಾಲೆಗೆ ಮಠ ಎಂಬ ಹೆಸರೂ ಇತ್ತು. ಮಠಗಳು, ದೇವಸ್ಥಾನದ ಆವರಣದಲ್ಲಿ ಶಾಲೆಗಳನ್ನು ನಡೆಸಲಾಗುತ್ತಿತ್ತು. ಇಟಗಿಯಲ್ಲಿದ್ದ ಗಾವ್ಟಿ ಶಾಲೆಯೂ ಹೆಚ್ಚಿನ ಸಂದರ್ಭ ದೇವಸ್ಥಾನದ ಕಟ್ಟಡದಲ್ಲೇ ನಡೆದಿದೆ. ಜೀರ್ಣಾವಸ್ಥೆಯ ಕಟ್ಟಡದಲ್ಲಿ ನಡೆಯುತ್ತಿದ್ದ ಬಗ್ಗೆ ಆ ಕಾಲದಲ್ಲಿ ಶಾಲೆಗೆ ಹೋಗುತ್ತಿದ್ದ ಹಿರಿಯರು ಸ್ಮರಿಸುತ್ತಾರೆ. ಮಳೆಗಾಲದಲ್ಲಿ ಕಂಬಳಿಯನ್ನು ಸೂಡಿಕೊಂಡು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಕೂಡ ಇತ್ತು.
ಸ್ವಾತಂತ್ರ್ಯ ಪೂರ್ವದಲ್ಲಿ ಶಾಲೆಯ ಆಡಳಿತದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಲಭ್ಯವಿರುವ ಹಳೆಯದಾದ ಕೆಲವು ಜನರಲ್ ರಿಜಿಸ್ಟರ್ ನಮೂನೆಯಲ್ಲಿ ಶಾಲೆಯಲ್ಲಿ ಓದಿದವರ ಹೆಸರನ್ನು ನಮೂದಿಸಲಾಗಿದೆ. ಇದು ಆರಂಭದಿಂದ ಇದ್ದ ರಿಜಿಸ್ಟರ್ ಆಗಿರಲಿಕ್ಕಿಲ್ಲ. ಜೀರ್ಣಾವಸ್ಥೆಯಲ್ಲಿದ್ದ ಮಾಹಿತಿಯನ್ನು ಹೊಸದೊಂದು ಪುಸ್ತಕದಲ್ಲಿ (ಸ್ವಾತಂತ್ರ್ಯಾನಂತರ)ಬರೆದಿಡಲಾಗಿದ್ದೆಂದು ತೋರುತ್ತದೆ. 1953ರಲ್ಲಿ ತಾಲೂಕು ಸ್ಕೂಲ್ ಮಾಸ್ಟರ್ ಎಂಬ ಹುದ್ದೆಯಲ್ಲಿದ್ದ ರಾ.ಪು.ಶಾನಭಾಗ್ ಎಂಬವರು ಶರಾ ಬರೆದು ಕೊಟ್ಟ ರಿಜಿಸ್ಟರ್‌ನಲ್ಲಿ ಅದಕ್ಕಿಂತ ಹಿಂದಿನ ಕೆಲವು ವರ್ಷಗಳ ಮಾಹಿತಿಯನ್ನೂ ನಮೂದಿಸಿರುವುದು ಇದಕ್ಕೊಂದು ಸಾಕ್ಷಿ. ಅಲ್ಲದೆ ಜನ್ಮ ದಿನಾಂಕ ಬರೆಯುವಾಗ ಖಚಿತವಾಗಿ ಬರೆಯಬೇಕು ಎಂದು ಹಿರಿಯ ಅಧಿಕಾರಿಗಳು ಶರಾ ಬರೆದಿರುವುದು ಕೆಲವು ಕಡೆ ಕಾಣಿಸಿದೆ. ಯಾವುದೇ ರಿಜಿಸ್ಟರ್‌ನಲ್ಲೂ ನಮೂದಿಸಿದವರ ಸಹಿಯಾಗಲಿ, ದಿನಾಂಕವಾಗಲಿ ಇಲ್ಲ. ಅದಕ್ಕಾಗಿ ಶಾಲಾ ಶಿಕ್ಷರು ಯಾರು ಎಂಬ ಬಗ್ಗೆ ದಾಖಲೆಯಲ್ಲಿ ತಿಳಿಯುವುದಿಲ್ಲ. ಆ ಕಾಲದಲ್ಲಿ ಶಾಲೆಗೆ ಹೋದ ಹೆಚ್ಚಿನವರ ಹೆಸರು ಸರಿಯಾಗಿ ಇದೆ. ಹೆಚ್ಚಿನ ಬಾಲಕಿಯರ ಹೆಸರಿನ ಮುಂದೆ "ಮನೆಗೆಲಸಕ್ಕಾಗಿ ಬಹಳ ದಿನ ಶಾಲೆಗೆ ಬರದಿರುವ ಕಾರಣ" ಎಂದು ಶಾಲೆ ಬಿಟ್ಟ ಕಾರಣವನ್ನು ನಮೂದಿಸಲಾಗಿದೆ. ಆಗ ಹೆಣ್ಣುಮಕ್ಕಳ ಸ್ಥಿತಿಗತಿಗೆ ಇದೆಲ್ಲ ಸಾಕ್ಷಿ. ರಿಜಿಸ್ಟರ್‌ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪಿಂಚಣಿ ಕಡತ ಸಿದ್ಧಪಡಿಸುವ ನಿಮಿತ್ತ ಶಾಲೆಯ ಅತ್ಯಂತ ಹಳೆಯ ಜನ್ಮ ದಾಖಲಾತಿಯನ್ನು ಕೋರಿ ಸಲ್ಲಿಸಿದ ಅರ್ಜಿಗಳು ಸಿಗುತ್ತವೆ. ಶಾಯಿ ಪೆನ್ನಿನಲ್ಲಿ ಹಾಗೂ ಸೀಸದಲ್ಲಿ ಬರೆಯಲಾದ ಬಳ್ಳಿಯ ಬಳ್ಳಿಯಾದ ಕೈಬರಹ ಅಕ್ಷರಗಳು ಗಮನ ಸೆಳೆಯುತ್ತವೆ. ಶಾಯಿ ಪೆನ್ನಿನ ಅಕ್ಷರಗಳು ಹಲವು ಕಡೆ ಹಿಂದಿನ ಪುಟದಲ್ಲೂ ಅಚ್ಚಾಗಿ ಗೊಂದಲ ಹುಟ್ಟಿಸಿವೆ. ಇಲ್ಲಿನ ಅಕ್ಷರಗಳು ಹಳೆಯ ಮೋಡಿಯೂ ಅಲ್ಲದ, ಹೊಚ್ಚ ಹೊಸ ಮಾದರಿಯವೂ ಅಲ್ಲ. ಸಾವಧಾನ ಕ್ರಮದಲ್ಲಿ ನಡೆಯುವ ಬರವಣಿಗೆ ಪ್ರಕ್ರಿಯೆ ಒತ್ತಕ್ಷರಗಳು ಬಂದಾಗ ವೇಗೋತ್ಕರ್ಷಗೊಳ್ಳುವ ಚಿತ್ರವನ್ನು ಕಲ್ಪಿಸಿಕೊಳ್ಳಿ. ಕೆಲವು ಒತ್ತಕ್ಷರಗಳು ಇಡೀ ಸಾಲಿನಲ್ಲಿ ಎದ್ದು ಕಾಣುವಂತೆ, ಸುಬ್ರಾಯ ಹೆಸರಿನಲ್ಲಿ ಬಾ ಅಕ್ಷರಕ್ಕೆ ಅರ್ಧಚಂದ್ರಾಕೃತಿಯ ಒತ್ತಕ್ಷರವು ಇಡೀ ಶಬ್ಧಕ್ಕೆ ಪ್ರಭಾವಳಿಯ ರೀತಿಯಲ್ಲಿ ವಿಸ್ತರಿಸಿ, ಮೇಲೆ-ಕೆಳಗಿನ ಗೆರೆಗಳನ್ನೂ ಮೀರಿ ಬೆಳೆದು ತಮಾಷೆಯಾಗಿ ಕಾಣುತ್ತವೆ. ಇದೀಗ ಆ ಬಗೆಯ ಕೈ ಬರಹಗಳು ಕಾಣಲು ಸಿಗುವುದಿಲ್ಲ.
ಸ್ವಾತಂತ್ರ್ಯಾನಂತರ ಶಾಲೆಗೆ ಭವ್ಯ ಕಟ್ಟಡವೊಂದು ಸಿಕ್ಕ ಕಾರಣ ಶಾಲೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಸಾಧ್ಯವಾಗಿದ್ದು ಗಮನಕ್ಕೆ ಬರುತ್ತದೆ. ದೇವಸ್ಥಾನದ ಆಶ್ರಯದಲ್ಲಿದ್ದ ಶಾಲೆ ಹತ್ತು ಹಲವರ ಪ್ರಯತ್ನದಿಂದ, ಒಂದು ಸ್ವತಂತ್ರ ದೇಗುಲವಾಗಿ ಎದ್ದು ನಿಂತ ಪ್ರಕ್ರಿಯೆ ಕುತೂಹಲಕರ. 1959ರಲ್ಲಿ ಹೊನ್ನೆಗಟಗಿಯಂಥ ನಾಲ್ಕಾರು ಊರುಗಳು ಸೇರುವ ಎತ್ತರ ಹಾಗೂ ಪ್ರಶಾಂತ ಸ್ಥಳದಲ್ಲಿ ಶಾಲೆಯ ಹೊಸ ಇಮಾರತು ನಿರ್ಮಾಣಗೊಂಡಿತು. ಒಂದರ್ಥದಲ್ಲಿ ಅದು ಶಾಲೆಯ ಸುವರ್ಣ ಮಹೋತ್ಸವದ ಮೈಲಿಗಲ್ಲು. ಯಾಕೆಂದರೆ 1950-60ರ ದಶಕವು ಶಾಲೆ ಸ್ಥಾಪನೆಗೊಂಡು ಸುಮಾರು ಅರ್ಧ ಶತಮಾನ ಪೂರೈಸಿದ ಸಂದರ್ಭ. ಆಗ ಮೈಸೂರು ಸರಕಾರದಲ್ಲಿ ಈ ಭಾಗದ ಶಾಸಕರಾಗಿದ್ದ ದೊಡ್ಮನೆ ರಾಮಕೃಷ್ಣ ಹೆಗಡೆ ಅಧ್ಯಕ್ಷತೆಯಲ್ಲಿ ಅಂದಿನ ಶಿಕ್ಷಣ ಮಂತ್ರಿ ಅಣ್ಣಾರಾವ್ ಗಣಮುಖಿ ಹೊಸ ಇಮಾರತ್ತನ್ನು ಉದ್ಘಾಟಿಸಿದರು. ಸರಕಾರದ ಅನುದಾನದಲ್ಲಿ ನಿರ್ಮಾಣವಾದ ಶಾಲಾ ಕಟ್ಟಡ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದ ಸ್ಥಳೀಯರಲ್ಲಿ ಹರಗಿ ಸೀತಾರಾಮ ಹೆಗಡೆ ಒಬ್ಬರು. ಉದ್ಘಾಟನೆ ಸಮಾರಂಭದ ಆಮಂತ್ರಣಪತ್ರ ಕೂಡ ಅವರ ಮನೆಯಲ್ಲಿಯೇ ದೊರೆತಿದೆ. ಒಂದರಿಂದ ನಾಲ್ಕನೆ ತರಗತಿಯ ತನಕ ಮಾತ್ರ ಇದ್ದ ಈ ಶಾಲೆಯನ್ನು 7ರ ತನಕ ವಿಸ್ತರಿಸುವ ನಿಟ್ಟಿನಲ್ಲಿ ಆಗ ಶಿಕ್ಷಕರಾಗಿದ್ದ ಸ.ನಾ. ಹೆಗಡೆ ಶ್ರಮಿಸಿದ್ದು ಗಮನಕ್ಕೆ ಬರುತ್ತದೆ. ಸ.ನಾ.ಹೆಗಡೆಯವರ ವಿಶೇಷ ಎಂದರೆ ಅವರ ಪತ್ನಿ ಕೂಡ ಶಿಕ್ಷಕರಾಗಿದ್ದರಂತೆ. ಮೊದಲು ಕ್ಯಾದಗಿಯಲ್ಲಿ ಶಿಕ್ಷಕರಾಗಿದ್ದ ಇವರು ನಂತರ ಹೊನ್ನೆಗಟಗಿಗೆ ಬಂದು ತಮ್ಮ ಸಾರ್ವಜನಿಕ ಸಂಪರ್ಕದಿಂದ ಓಡಾಡಿ ಶಾಲೆಗೆ ಬೇಕಾಗಿದ್ದ ಸರಕಾರಿ ಅನುಕೂಲತೆಯನ್ನು ಒದಗಿಸಿಕೊಟ್ಟರು.
ಆ ನಂತರ ಶಾಲೆಯು ಮಾದರಿಯ ಹಿರಿಯ ಪ್ರಾಥಮಿಕ ಶಾಲೆ/ ಈ ಭಾಗದ ಕೇಂದ್ರ ಶಾಲೆ ಎಂದು ಮಾನ್ಯತೆ ಪಡೆದು ಶಿಕ್ಷಕರ ಮಾಸಿಕ ಮೀಟಿಂಗ್‌ಗಳೂ ಇಲ್ಲಿಯೇ ನಡೆಯುತ್ತಿದ್ದವು. ಶಿಕ್ಷಕರು ಎಂದರೆ ಮೊದಲಿನಿಂದಲೂ ಗೌರವ ಎಂಬ ವಿಚಾರದಲ್ಲಿ ಎರಡು ಮಾತಿಲ್ಲ. ಶಿಕ್ಷಕಿಯರು(ಅಕ್ಕೋರುಗಳು) ಸ್ಥಳೀಯವಾಗಿ ಅನುಕೂಲ ಇರುವ ಮನೆಯಲ್ಲಿ ಉಳಿದು, ಅಥವಾ ಬಾಡಿಗೆ ಉಳಿದು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ತಾವು ಕಲಿಸುತ್ತಿದ್ದ ಸಾಲೆಗೆ ತಮ್ಮ ಮಕ್ಕಳನ್ನೂ ಕರೆದುಕೊಂಡು ಬರುತ್ತಿದ್ದರು. ಹೆಚ್ಚಿನ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳೆಂದರೆ ಈ ಶಿಕ್ಷಕರ ಮಕ್ಕಳೇ ಆಗಿರುತ್ತಿದ್ದುದು ಅಚ್ಚರಿಯ ವಿಷಯವೇನೂ ಅಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ತಮ್ಮ ಮಕ್ಕಳನ್ನು "ಉತ್ತಮ ಶಾಲೆ"ಯಲ್ಲಿ ಓದಿಸುವುದಕ್ಕಾಗಿ ತಾಲೂಕು ಪ್ರದೇಶದಲ್ಲಿ ಶಿಕ್ಷಕರು ಮನೆ ಮಾಡುತ್ತಿದ್ದಾರೆ. ಹಾಗಾಗಿ ಶಿಕ್ಷಕರ ಪ್ರತಿಭಾವಂತ ಮಕ್ಕಳ ಒಡನಾಟ ಉಳಿದ ವಿದ್ಯಾರ್ಥಿಗಳಿಗೆ ತಪ್ಪಿಹೋಗುತ್ತಿದೆ.
1960ರ ದಶಕದ ದಾಖಲೆಗಳು ನಮ್ಮ ಸಾಮಾಜಿಕ ಬೆಳವಣಿಗೆಯ ಹಲವು ಆಯಾಮಗಳಿಗೆ ಸಾಕ್ಷಿಯಾಗಿ ಕಾಣುತ್ತಿವೆ. ಮೊದಲಬಾರಿಗೆ ಹರಿಜನರು ಶಾಲೆಗೆ ಬರತೊಡಗಿದ್ದು, ಸೇರಿದಂತೆ ಸಮಾಜದ ಅಂಚಿನಲ್ಲಿದ್ದ ಹಲವು ಜಾತಿ ಜನಾಂಗಗಳ ವರ್ಣಮಯ ವಿದ್ಯಾರ್ಥಿ ಸಮುದಾಯದ ಕಾಣುತ್ತದೆ. ಹೆಣ್ಣುಮಕ್ಕಳು ಏಳನೇ ತರಗತಿಯಲ್ಲಿ ಉತ್ತೀರ್ಣರಾಗಿ ಪ್ರೌಢಶಾಲೆಗೆಂದು ಟಿಸಿ ಪಡೆದು ಹೋಗತೊಡಗಿದ ದಾಖಲೆ ನಮೂದಾಗಿದೆ. ಬ್ರಟೀಷ್ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು, ಏಳನೆ ತರಗತಿಯಲ್ಲಿ ಟಿ.ಸಿ.ಪಡೆದು ಹೋಗುವಾಗ ಮೊಟ್ಟ ಮೊದಲಿಗೆ ಇಂಗ್ಲೀಷಿನಲ್ಲಿ ಸಹಿ ಹಾಕಿದ್ದಾರೆ. ಭಾಷಾವಾರು ಪ್ರಾಂತ್ಯ ರಚನೆ ನಂತರ ಬಹುತೇಕ ಸಹಿಗಳು ಇಂಗ್ಲೀಷಿನಲ್ಲಿ ಇರುವುದು ನಮ್ಮ ಆಕರ್ಷಣೆಗೆ ಸಾಕ್ಷಿ.
ಶಾಲಾ ದಾಖಲಾತಿಯಲ್ಲಿ ಆರಂಭದಿಂದ ಇಲ್ಲಿಯ ವರೆಗೆ ಒಂದು ನೈತಿಕ ಸಂದೇಶ ಕಾಣುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆಯೂ ಆತ/ಆಕೆಯ ನಡತೆಯ ಬಗ್ಗೆ ಉಲ್ಲೇಖ ಇದ್ದು, ಉತ್ತಮ, ಸಭ್ಯ,ಚಲೋದು, ನೆಟ್ಟಗೆ ಎಂಬುದಾಗಿ ಹೆಚ್ಚಿನವರ ಹೆಸರಿನ ಎದುರಿಗೆ ಇದೆ. ಅಪರೂಪಕ್ಕೊಮ್ಮೆ ಸಾಧಾರಣ ಎಂದು ಬರೆಯಲಾಗಿದ್ದು, ಇವರು ಸ್ವಲ್ಪ ಕಿಲಾಡಿ ವಿದ್ಯಾರ್ಥಿಗಳಿದ್ದರಬೇಕು. ಆದರೆ ಯಾವ ಹೆಸರಿನ ಎದುರಿಗೂ ನಡತೆ ಕೆಟ್ಟದಾಗಿ ಇತ್ತು ಎಂದು ಬರೆದಿಲ್ಲ. ನೈತಿಕ ಶಿಕ್ಷಣದ ಬಗ್ಗೆ ಆಗೀಗ ಚರ್ಚೆಗಳು ಬರುವ ಇಂದಿನ ದಿನದಲ್ಲಿ ಇದೊಂದು ಕುತೂಹಲದ ಸಂಗತಿಯೇ ಸರಿ. ಕಳೆದ 25 ವರ್ಷ ಹಿರತುಪಡಿಸಿದರೆ, ಆರಂಭದಿಂದಲೂ ಕಡತದಲ್ಲಿ ಕೆಲವರ ಹೆಸರಿನ ಎದುರು ಕೆಂಪು ಸಾಯಿಯಲ್ಲಿ ಬರೆಯಲಾದ ಗಮನ ಸೆಳೆಯುವ ಒಂದು ಅಂಶ ಎಂದರೆ ಶುಲ್ಕದ ವಿಚಾರ. ಮೊದಲ ನಾಲ್ಕು ದಶಕದಲ್ಲಿ ಶಾಲೆಗೆ ಸೇರುವ ವಿದ್ಯಾರ್ಥಿ ಶುಲ್ಕ ಕಟ್ಟಲು ಸಮರ್ಥನೆ ಅಥವಾ ಮಾಪಿ ಬಯಸುತ್ತಾನೆಯೇ ಎಂಬುದನ್ನು ನಮೂದಿಸಲಾಗಿದೆ. ಕೆಲವರ ಹೆಸರಿನ ಎದುರು 2,3 ಅಥವಾ 4 ರೂಪಾಯಿ ತನಕ ಶುಲ್ಕ ಬಾಕಿ ಇಟ್ಟ ಬಗ್ಗೆ ಬರೆಯಲಾಗಿದೆ. ಅವರಲ್ಲಿ ಕೆಲವು ವಿದ್ಯಾರ್ಥಿಗಳು ವರ್ಷದ ನಂತರ ಬಂದು ಶುಲ್ಕ ಕಟ್ಟಿದ್ದನ್ನೂ ನಮೂದಿಸಲಾಗಿದೆ. ಆ ಕಾಲದಲ್ಲಿ ಒಂದೆರಡು ಆಣೆ ಶಾಲಾ ಶುಲ್ಕವನ್ನು ಕಟ್ಟುವುದು ನಮ್ಮ ಹಿಂದಿನ ತಲೆಮಾರಿನ ಜನರಿಗೆ ಕಷ್ಟವಾಗಿತ್ತು ಎಂಬುದೇ ಇದರ ಅರ್ಥವೆಂದು ತಿಳಿದುಕೊಳ್ಳಬೇಕು. ಇನ್ನೊಂದೆಡೆ, ಶಿಕ್ಷಕರ ಹೊಡೆತಕ್ಕೆ  ಹೆದರಿ ಶಾಲೆಯನ್ನು ಅರ್ಧವರ್ಷದಲ್ಲಿಯೇ ಬಿಡುವ ಅದೆಷ್ಟೋ ವಿದ್ಯಾರ್ಥಿಗಳು ಕೊನೆಗೆ ಟ.ಸಿ.ಪಡೆಯುವುದಕ್ಕೂ ಬರುತ್ತಿರಲಿಲ್ಲ. ಕಡತವನ್ನು ನಿರ್ವಹಿಸಬೇಕಾಗಿದ್ದ ಶಿಕ್ಷಕರು ಬಾರದ ಶುಲ್ಕದ ಬಗ್ಗೆ ಬೇಸತ್ತು ಕೊನೆಗೆ ಅವರ ಹೆಸರಿನ ಎದುರು ಬರದು ಹೀಗೊಂದು ಐತಿಹಾಸಿಕ ದಾಖಲೆಗೆ ಕಾರಣಕರ್ತರಾದರು! ಶಾಲೆಯಲ್ಲಿ ಲಭ್ಯ ಇರುವ ವಿದ್ಯಾರ್ಥಿಗಳ ದಾಖಲಾತಿ ಪಟ್ಟಿಯಲ್ಲಿ ಎಲ್ಲಿಯೂ ಕಾಟು ಹೊಡೆದಿಲ್ಲ ಎಂಬುದು ನಮ್ಮ ಶಿಕ್ಷಕರ ಶಿಸ್ತಿಗೊಂದು ನಿದರ್ಶನ. 80ರ ದಶಕದ ರಿಜಿಸ್ಟರ್‌ನಲ್ಲಿ ಸಿಕ್ಕ ಕೆಲವು ಪತ್ರದಲ್ಲಿ ಪಾಸ್‌ಪೋರ್ಟ್ ಪಡೆಯುವ ಸಲುವಾಗ ಕೆಲವರು ಏಳನೆ ತರಗತಿಯ ಕಲಿಕೆ ಪ್ರಮಾಣ ಪತ್ರಕ್ಕಾಗಿ ಶಾಲೆಗೆ ಅರ್ಜಿಸಲ್ಲಿಸಿರುವುದು. ನಮ್ಮ ದಾಖಲೆಗಳು ಎಷ್ಟೊಂದು ಮಹತ್ವದ್ದಾಗಿದ್ದು, ಇದನ್ನು ಸುಂದರವಾಗಿ ಕಾಪಿಡುವುದು ಅತ್ಯಂತ ಅವಶ್ಯವಾಗಿದೆ.
ಶಾಲಾಭಿವೃದ್ಧಿ ಸಮಿತಿಗಳು ಅಸ್ತಿತ್ವಕ್ಕೆ ಬಂದಿದ್ದು ಎರಡು ದಶಕದ ಈಚೆಗೆ. ಅಲ್ಲಿಯ ತನಕ ಸಾಲೆಗಳಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ವಾರ್ಷಿಕೋತ್ಸವ ಸಂದರ್ಭದಲ್ಲಿ ಪಂಚಾಯ್ತಿ ಚೇರ‌್ಮನ್ ಅತಿಥಿಯಾಗಿ ಬರುವುದು ಬಿಟ್ಟರೆ ಸ್ಥಳೀಯ ಜನಪ್ರತಿನಿಧಿಗಳು ಶಾಲಾ ಆಡಳಿತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಇರುವ ಹಳೆಯ ಕಟ್ಟಡದ ಹಿಂಭಾಗದಲ್ಲಿ 50 ವರ್ಷ ಬಳಿಕ ಅಂದರೆ ಕಳೆದ ದಶಕದ ಕೊನೆಯಲ್ಲಿ ಹೊಸ ಕಟ್ಟಡವೊಂದು ಸರಕಾರಿ ಅನುದಾನದ ಮೂಲಕ ಕಟ್ಟಿಸಲಾಗಿದ್ದು, ಆ ಸಂದರ್ಭ ತಮ್ಮ ತಂದೆಯಂತೆ ಕಟ್ಟಡದ ಉಸ್ತುವಾರಿ ವಹಿಸಿದವರು ನಾರಾಯಣ ಮೂರ್ತಿ ಹೆಗಡೆ. ಅವರು ಆಗ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿದ್ದರು.
ಕಳೆದ ದಶಕದ ಕೊನೆಯಲ್ಲಿ ಹೊಸ ಕಟ್ಟಡ
ಶಾಲಾ ದಾಖಲೆಗಳು ಕ್ರಮವಾಗಿ ಮತ್ತು ನಿರಂತರವಾಗಿ ಸಿಗುವುದಿಲ್ಲವಾದರೂ ಒಂದು ಶತಮಾನದ ಅವಧಿಯಲ್ಲಿ ಸರಿ ಸುಮಾರು 4 ಸಾವಿರ ಮಕ್ಕಳು ಇಲ್ಲಿ ಶಿಕ್ಷಣ ಪಡೆದಿರಬಹುದು. ಇಲ್ಲಿಗೆ ಬರುತ್ತಿದ್ದ ಶಿಕ್ಷಕರು ಹಾಗೂ ಸಮೀಪದಲ್ಲೇ ಇರುವ ಫಾರೆಸ್ಟ್ ನಾಕೆಯ ಕಾರಣ ಹೊರ ಜಿಲ್ಲೆಗಳ ಸಿಬ್ಬಂದಿಗಳ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಈ ಅವಧಿಯಲ್ಲಿ ಶಾಲೆಯು ಸಣ್ಣ ಪುಟ್ಟ ಏಳು ಬೀಳನ್ನೂ ಅನುಭವಿಸಿದೆ. ಜನರ ಅನುಕೂಲಕ್ಕಾಗಿ ಸುತ್ತಲಿನ ಊರುಗಳಲ್ಲಿ ಶಾಲೆಗಳು ತಲೆ ಎತ್ತಿದ್ದರಿಂದ ಆಗಿನಷ್ಟು ವಿದ್ಯಾರ್ಥಿಗಳು ಇದೀಗ ಉಳಿದಿಲ್ಲ. ಇದು ಹೊನ್ನೆಗಟಗಿ ಶಾಲೆಯೊಂದರ ಸಮಸ್ಯೆ ಅಲ್ಲ. ಆದರೆ ಹೆಚ್ಚಿನ ಯಾವ ಶಾಲೆಗೂ ಸಾಧ್ಯವಾಗದ ಔನ್ನತ್ಯವನ್ನು ಪಡೆದಿದೆ. ಇತ್ತೀಚೆಗೆ 90ರ ದಶಕದಲ್ಲಿ ಮತ್ತೆ ಉಚ್ರಾಯ ಸ್ಥಿತಿಯಲ್ಲಿ ಬಂದ ಶಾಲೆ ಆ ಹಂತದಲ್ಲಿ ಕೈ ಬರಹ ಪತ್ರಿಕೆಯನ್ನೂ ತಂದು ಗಮನ ಸೆಳೆದಿದೆ. ಇಂಥ ಒಂದು ಶಾಲೆಯ ಹಳೆಯ ವಿದ್ಯಾರ್ಥಿ ನಾನು ಎಂಬುದು ನನಗೆ ಹೆಮ್ಮೆಯ ವಿಷಯ.
(ಶಾಲೆಯಲ್ಲಿ ಲಭ್ಯವಿದ್ದ ಹಳೆಯ ದಾಖಲೆಗಳ ಪ್ರಕಾರ ಸಿದ್ಧಪಡಿಸಲಾದ ಬರಹ ಇದು. ದಾಖಲೆ ಸಹಿತ ನೀಡಿದರೆ ಇನ್ನಷ್ಟು ಮಾಹಿತಿಯನ್ನು ಸೇರಿಸುವ ಅವಕಾಶವಿದೆ.-ಸಂ)

*****
Read More

ಬಸವತತ್ವದ ವಿಶಾಲ ತಳಹದಿ ನನ್ನ ಆಕರ್ಷಿಸಿತು :ರಂಜಾನ್ ದರ್ಗಾ

ಬಸವತತ್ವದ ವಿಶಾಲ ತಳಹದಿ ನನ್ನ ಆಕರ್ಷಿಸಿತು :ರಂಜಾನ್ ದರ್ಗಾ

ಸದಾನಂದ ಹೆಗಡೆ, ದಾವಣಗೆರೆ
ವಿಜಾಪುರ ಮೂಲದ ರಂಜಾನ್ ದರ್ಗಾ  ಸದ್ಯ ಗುಲ್ಬರ್ಗದ ಸರ್ವಜ್ಞ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿದ್ದಾರೆ. ಭಾಷಾ ವಿಜ್ಞಾನ ಮತ್ತು ಮಾರುಕಟ್ಟೆ ನಿರ್ವಹಣೆಯಲ್ಲಿ  ಸ್ನಾತಕೋತ್ತರ ಪದವಿಧರರು. ಪತ್ರಕರ್ತರಾಗಿ 33 ವರ್ಷ ಸೇವೆ ಸಲ್ಲಿಸಿ ರಾಜ್ಯದ ನಾನಾ ಕಡೆ ಕೆಲಸ ಮಾಡಿ 2009ರಲ್ಲಿ  ನಿವೃತ್ತರಾಗಿದ್ದಾರೆ. ಒಬ್ಬ ಕವಿ, ಲೇಖಕ, ಹೋರಾಟಗಾರರಾಗಿ ಗುರುತಿಸಿಕೊಂಡಿರುವ ದರ್ಗಾ  ವಿಶೇಷ ಎಂದರೆ ಶರಣ ಸಾಹಿತ್ಯದಲ್ಲಿ ಅವರಿಗಿರುವ ಪರಿಶ್ರಮ. ವಿಭಿನ್ನ ಆಯಾಮಗಳ 25ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದಾರೆ.  ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 32ಕ್ಕೂ ಹೆಚ್ಚು ಪ್ರಶಸ್ತಿ ಲಭಿಸಿವೆ. ದಾವಣಗೆರೆಯ ಆರೂಢ ದಾಸೋಹಿ ಮಾಗನೂರು ಬಸಪ್ಪ ಅವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಗೆ  ಆಯ್ಕೆಯಾಗಿದ್ದು ಈ ಸಂದರ್ಭ ವಿಕ ಜತೆ ಸಂದರ್ಶನದಲ್ಲಿ  ಕೆಲ ಹೊಳಹು ನೀಡಿದ್ದಾರೆ.
* ನೀವೊಬ್ಬ ಮುಸ್ಲಿಂ  ಹಿನ್ನೆಲೆಯವರಾಗಿ ಬಸವಣ್ಣನವರ ನೋಡುವ ಕ್ರಮ ಹೇಗೆ ?
ನನ್ನ ಹಿನ್ನೆಲ್ಲೆ  ಅಂತಲ್ಲ. ಬಸವಣ್ಣ ಜಗತ್ತನ್ನು ನೋಡುವ ಕ್ರಮ ನನಗೆ ಹಿಡಿಸಿತು. ‘ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲ ಸಂಗನ ಶರಣರೆ ಶರಣರು’ ಎಂಬ ವಚನವನ್ನೇ ನೋಡಿ. ಶರಣ ತತ್ವ ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವ ವಿಶಾಲ ತಳಹದಿ ಹೊಂದಿದೆ. ಇದು ನನ್ನನ್ನು ಆಕರ್ಷಿಸಿತು. 
* ಪತ್ರಕರ್ತನಾಗಿದ್ದುಕೊಂಡು ಸಾಹಿತ್ಯ, ಚಳವಳಿಯ ಭಾಗವಾಗುವುದು ಹೇಗೆ ಸಾಧ್ಯವಾಯತು?
ಇದರಲ್ಲೂ  ಒಂದು ರೀತಿ ಬಸವ ಫಿಲಾಸಫಿ ಇದೆ. ಮೊದಲಿನಿಂದಲೂ ನನಗೆ ಕವನ ಬರೆಯುವ  ಖಯಾಲಿ. ಚಳವಳಿ ಎಂಬುದು ನಾವು ಸಾಮಾಜಿಕರಾದಾಗ ನಮ್ಮ ಆಯ್ಕೆಗಳಲ್ಲೊಂದಾಗಿರುತ್ತದೆ. ನನ್ನ ಪತ್ರಿಕೋದ್ಯಮ ವೃತ್ತಿ ಇದೆಲ್ಲದಕ್ಕೂ ಸಾಕಷ್ಟು ವಸ್ತುಗಳನ್ನು ಒದಗಿಸಿತು. ಪತ್ರಕರ್ತರಾದವರಿಗೆ ದೇಶದ ಪ್ರಧಾನ ಮಂತ್ರಿ ಕಚೇರಿಗೆ ಪ್ರವೇಶ ಅವಕಾಶ ಇರುವಂತೆ, ಮಾರನೆ ದಿನ ಸ್ಲಮ್ ವಾಸಿಗಳ ಸಮಸ್ಯೆಯನ್ನೂ ಅನಾವರಣ ಮಾಡಬಹದು. ಎಲ್ಲ ಧರ್ಮ, ಜಾತಿ ಸೇರಿ ಯಾವುದನ್ನೂ, ಏನೊಂದನ್ನೂ ವೃತ್ತಿ ನಿರತ ಪತ್ರಕರ್ತ ನಿರಾಕರಿಸಲಾಗುವುದಿಲ್ಲ. ಇಂಥ ಬಹು ಸಾಧ್ಯತೆಯ ಪತ್ರಿಕೋದ್ಯಮ ನನಗೆ ಅತ್ಯಂತ ಖುಷಿ ಕೊಟ್ಟ ವೃತ್ತಿ. ಉಳಿದ ಎರಡು ಇದಕ್ಕೆ ಪೂರಕವಾದವು. ಪತ್ರಿಕೋದ್ಯಮ ಎಂದರೆ ಒಂದು ಸಮುದ್ರ, ಸಾಹಿತ್ಯ, ಚಳವಳಿ ಸೇರಿದಂತೆ ಏನೆಲ್ಲ ನದಿಗಳು ಇದರೊಂದಿಗೆ ಸೇರುತ್ತವೆ.
*ದಾವಣಗೆರೆಯ ಮಾಗನೂರು ಬಸಪ್ಪ ಪ್ರಶಸ್ತಿ ಸಂದ ಬಗೆ ಏನನ್ನಿಸುತ್ತದೆ?
ಲಿಂ. ಮಾಗನೂರು ಬಸಪ್ಪ ಕಷ್ಟದಲ್ಲಿ , ನಿರಂತರ ಕಾಯಕದಲ್ಲಿ ಬೆಳೆದು ಉದ್ಯಮಿಯಾದವರು. ದಲಿತರು ಸೇರಿದಂತೆ ಎಲ್ಲರ ಬಗ್ಗೆ ಕೂಡ ಕಾಳಜಿ ಇಟ್ಟುಕೊಂಡವರಾಗಿದ್ದರು. ಅದೆಲ್ಲಕ್ಕಿಂತ ಹೆಚ್ಚಾಗಿ ಅವರ ಗುರುಗಳಾಗಿದ್ದ ಸಿರಿಗೆರೆ ಲಿಂ. ಶಿವಕುಮಾರ ಸ್ವಾಮೀಜಿ ವಿಚಾರ ಇವರಲ್ಲಿದೆ. ಆ ಕಾಲದಲ್ಲಿ ಶಿವಕುಮಾರಶ್ರೀ ಮಾಗನೂರು ಬಸಪ್ಪ ಅಂಥವರನ್ನು ಮುನ್ನಡೆಸಿದರು. ಅವರ ಮೇಲಿನ ಗೌರವಕ್ಕೂ ನಾನು ಪ್ರಶಸ್ತಿ ಪ್ರೀತಿಯಿಂದ ಒಪ್ಪಿದೆ.
*ನಿಮ್ಮ ದೃಷ್ಟಿಯಲ್ಲಿ  ಸಮಕಾಲೀನ ಬಿಕ್ಕಟ್ಟು ಯಾವುದು ?
ಮನುಷ್ಯ-ಮನುಷ್ಯರ ನಡುವಿನ ನಂಬಿಕೆ ಕಳೆಯುತ್ತಿರುವುದು ನಮ್ಮ ನಡುವಿನ ಅತಿದೊಡ್ಡ ಸವಾಲು ಅಥವಾ ಬಿಕ್ಕಟ್ಟು ಅಂತ ನನಗೆ ಅನ್ನಿಸುತ್ತದೆ. ಉಗ್ರವಾದ, ಕೋಮುವಾದ, ಜಾತಿವಾದಗಳು ಮನುಷ್ಯರ ನಡುವೆ ದೊಡ್ಡ ಕಂದಕ ಏರ್ಪಡಿಸುತ್ತಿವೆ.
 ನನ್ನ ಬಾಲ್ಯದ ದಿನಗಳನ್ನೇ ನೆನೆದರೆ, ನಾವೆಲ್ಲ ಎಷ್ಟೊಂದು ಸೌಹಾರ್ದವಾಗಿ ಬದುಕಿದ್ದೆವು. ನಮ್ಮ ಧಾರ್ಮಿಕ ಭಿನ್ನ ಆಚರಣೆ  ಇಟ್ಟುಕೊಂಡೇ ಪರಸ್ಪರರನ್ನು ತಲುಪಲು ಮಾರ್ಗಗಳನ್ನು ಕಂಡುಕೊಂಡಿದ್ದೆವು. ಉದಾಹರಣೆಗೆ ಹಿಂದೂಗಳ ಹಬ್ಬದಲ್ಲಿ ನಾವೆಲ್ಲ ಪ್ಗೊಳ್ಳುತ್ತಿದ್ದೆವು. ನಮ್ಮ  ಹಬ್ಬದಲ್ಲಿ  ನಮ್ಮ ಸುತ್ತಲೂ ಇರುವ ವೀರಶೈವ ಕುಟುಂಬಗಳಿಗೆ ನನ್ನ ತಾಯಿ ‘ಸೀದಾ’ ಕೊಟ್ಟು  ಬರುತ್ತಿದ್ದರು. ಸೀದಾ ಅಂದರೆ, ಗೋದಿ, ಬೆಲ್ಲ, ಬೇಳೆ ಹೀಗೆ ದಿನಸಿ ಪದಾರ್ಥಗಳು. ಅದನ್ನು ಅವರು ಪ್ರೀತಿಯಿಂದಲೇ ಸ್ವೀಕರಿಸಿ ನಮ್ಮ ಹಬ್ಬದ ಸಂಭ್ರಮವನ್ನು ತಮ್ಮಲ್ಲೂ ವಿಸ್ತರಿಸಿಕೊಳ್ಳುತ್ತಿದ್ದರು. ಹೀಗೆ ನಾವೆಲ್ಲ ಒಂದು ಎಂದು ಕಂಡುಕೊಳ್ಳಲು ನಮ್ಮ ಭಿನ್ನ ಆಹಾರ, ಆಚರಣೆಗಳ ನಡುವೆಯೂ ಮಾರ್ಗವಿತ್ತು. ಅಂಥ ಸಾಧ್ಯತೆಗಳು ಈಗ ಯಾಕೋ ನಮಗೆ ಕಾಣುತ್ತಿಲ್ಲ.
*ಪತ್ರಿಕೋದ್ಯೋಗಿಯಾಗಿ ನಿಮ್ಮ ಅಪರೂಪದ ನೆನಪೊಂದನ್ನು ಹೇಳಬಹುದಾ ?
ನಾನು ಕಾರವಾರದಲ್ಲಿ  ವರದಿಗಾರನಾಗಿದ್ದಾಗ ಅಲ್ಲಿನ ಗಾಬಿತವಾಡಾದ ಮೀನುಗಾರ ಹಳ್ಳಿಯ ಒಂದು ಘಟನೆಯ ವರದಿ ಹಾಗೂ ಪರಿಣಾಮ ಅತ್ಯಂತ ಸಾರ್ಥಕ್ಯ ಕೊಟ್ಟಿದೆ. ಒಂದು ಪಂಚತಾರಾ ಹೋಟೆಲಿನ ಹಿತಕ್ಕಾಗಿ ಬಡ ಮೀನುಗಾರರ ಜೋಪಡಿಗಳನ್ನು ಬುಡಮೇಲು ಮಾಡಲಾಗುತ್ತಿತ್ತು. ಪಂಚತಾರಾ ಹೋಟೇಲಿನ ಮಾಲೀಕನೊಂದಿಗೆ ಕೈ ಜೋಡಿಸಿದ್ದ  ಕಸ್ಟಮ್ಸ್ ಅಧಿಕಾರಿಯೊಬ್ಬ , ಆಗ ಪ್ರಚಲಿತ ಇದ್ದ  ’ಎಲ್‌ಟಿಟಿಇ ಚಟುವಟಿಕೆ ಗುಮ’್ಮವನ್ನು ಜೋಪಡಿಗೆ ಆರೋಪಿಸಿದ್ದರು.  ಇದೊಂದು ಎಲ್‌ಟಿಟಿಟಿಯ ಅಡಗುದಾಣ, ಅದಕ್ಕಾಗಿ ಅವುಗಳನ್ನು ತೆರವು ಮಾಡಬೇಕು ಎಂದು ಪ್ರಮಾಣಪತ್ರ ನೀಡಿದ ಅಧಿಕಾರಿಯ ದುರುದ್ದೇಶ ಸೇರಿ ನಾನು ವರದಿ ಮಾಡಿದೆ. ಮೀನುಗಾರರು ಹಿಂದೂ ಕಾರ್ಯಕರ್ತರು, ಅವರನ್ನು ಬೆಂಬಲಿಸಬೇಡಿ ಎಂದು ಕೆಲವರು ನನಗೆ ಹೇಳಿದರು. ವರದಿಗಾರನಿಗೆ ಬಡವನಾದವ ಹಿಂದೂ ಇರಬಹದು, ಇನ್ನಾರೇ ಇರಬಹದು. ಅವರ ಧರ್ಮ ಮಹತ್ವದ್ದಲ್ಲ ಎಂಬುದು ನನ್ನ ನಿಲುವು. ವರದಿ ಮಾಡಿದ್ದು, ಮಾತ್ರವಲ್ಲ, ಬಡವರ ಜೋಪಡಿ ರಕ್ಷಣೆಗೆ ಜಿಲ್ಲಾಧಿಕಾರಿಗೂ ಒತ್ತಾಯ ಹಾಕಿದೆ. ವರದಿ ಪರಿಣಾಮ ಕಾರ್ಯಾಚರಣೆ ನಿಂತಿತು, ಅಷ್ಟೇ ಅಲ್ಲ ಸುಳ್ಳು ಕಾರಣ ನೀಡಿದ ಐಎಎಫ್‌ಎಸ್ ಅಧಿಕಾರಿಯೊಬ್ಬ ಎರಡು ದಿನ ಕಂಬಿ ಎಣಿಸುವಂತೆ ಆಯಿತು. ತಪ್ಪೆಸಗಿದ ಐಎಫ್‌ಎಸ್ ಅಧಿಕಾರಿಯೊಬ್ಬ ಕಂಬಿ ಎಣಿಸಿದ ಘಟನೆ ದೇಶದಲ್ಲೇ ಮೊದಲು ಎಂದು ನಂತರ ನನಗೆ ತಿಳಿಯಿತು. ಇದು ಪೆನ್ನಿಗೆ ಇರುವ ಶಕ್ತಿ ಎಂದು ಈಗಲೂ ನನಗೆ ಅನ್ನಿಸುತ್ತದೆ.
Read More

ANIKETANA: ಈ ಮನೆ ಮಾಲೀಕನದ್ದು ಸರಳ ಜೀವನ ವಿರಳ ಚಿಂತನಕ್ಕೊಂದು ನಿದರ್ಶ...

ANIKETANA: ಈ ಮನೆ ಮಾಲೀಕನದ್ದು ಸರಳ ಜೀವನ ವಿರಳ ಚಿಂತನಕ್ಕೊಂದು ನಿದರ್ಶ...
ANIKETANA: ಈ ಮನೆ ಮಾಲೀಕನದ್ದು ಸರಳ ಜೀವನ ವಿರಳ ಚಿಂತನಕ್ಕೊಂದು ನಿದರ್ಶ...: ಸದಾನಂದ ಹೆಗಡೆ ದಾವಣಗೆರೆ ಹೋಬಳಿ ಕೇಂದ್ರವಾದ ಮಾಯಕೊಂಡ ಉಪನಗರದಲ್ಲಿ  ಇವರನ್ನು ’ಕುಮಾರ ಶಾಸ್ತ್ರೀ’ ಎಂದೇ ಜನ ಗುರುತಿಸುತ್ತಾರೆ. ಬಸ್ ನಿಲ್ದಾಣದ ಎದುರು ಓಣಿಯಲ್ಲ...
Read More

ಈ ಮನೆ ಮಾಲೀಕನದ್ದು ಸರಳ ಜೀವನ ವಿರಳ ಚಿಂತನಕ್ಕೊಂದು ನಿದರ್ಶನ !

ಈ ಮನೆ ಮಾಲೀಕನದ್ದು ಸರಳ ಜೀವನ ವಿರಳ ಚಿಂತನಕ್ಕೊಂದು ನಿದರ್ಶನ  !

ಸದಾನಂದ ಹೆಗಡೆ ದಾವಣಗೆರೆ
ಹೋಬಳಿ ಕೇಂದ್ರವಾದ ಮಾಯಕೊಂಡ ಉಪನಗರದಲ್ಲಿ  ಇವರನ್ನು ’ಕುಮಾರ ಶಾಸ್ತ್ರೀ’ ಎಂದೇ ಜನ ಗುರುತಿಸುತ್ತಾರೆ. ಬಸ್ ನಿಲ್ದಾಣದ ಎದುರು ಓಣಿಯಲ್ಲಿ  ಸುತ್ತಿ ಬಳಸಿ ಹೋದರೆ 110 ವರ್ಷ ಹಳೆಯದಾದ ಊರ ಹೆಂಚಿನ ಚಾಳವೊಂದಿದ್ದು, ಅದರಲ್ಲಿ ಎರಡು ರೂಮಿನ ಬಿಡಾರ ಶಾಸ್ತ್ರಿಗಳ ಮನೆ. ವರ್ಷದ ಹಿಂದೆ ಪತ್ನಿ  ರಾಜಲಕ್ಷ್ಮೀ ಶಾಸ್ತ್ರೀ ವಯೋ ಸಹಜ ಸಮಸ್ಯೆಯಿಂದ ಮೃತ್ಯುವಶವಾದರು. ಆಮೇಲೆ ಎಂಎಸ್‌ಕೆ ಶಾಸ್ತ್ರೀ ಏಕಾಂಗಿ.
ಪಕ್ಕದಲ್ಲಿ  ಇವರ ತಮ್ಮನ ಕುಟುಂಬ ಇದ್ದು, ಅವರನ್ನೂ ಅವಲಂಬಿಸದೆ ಸ್ವಯಂ ಪಾಕಿಯಾಗಿ ಬದುಕುತ್ತಿದ್ದಾರೆ. ಇವರ ಪ್ರತಿ ದಿನದ ಊಟದ ಮೆನು ಅನ್ನ, ಮೊಸರು, ಉಪ್ಪಿನಕಾಯಿ ಅಷ್ಟೆ.
ಪಕ್ಕದಲ್ಲಿ  ಅಜ್ಜನ ಕಾಲದಲ್ಲಿ ಸ್ಥಾಪಿತವಾದ ಮನೆ ದೇವರ ಗುಡಿ ಇದೆ, ಕಾಶಿಯಿಂದಲೇ ತಂದು ಸ್ಥಾಪಿಸಿದ ವಿಶ್ವನಾಥ ಗುಡಿ. ಬೆಳಗ್ಗೆ ದೇವರ ಪೂಜೆ ಮುಗಿಸಿ, ಊಟವನ್ನೂ ಮಾಡಿ ಹತ್ತು ಗಂಟೆಗೆ ರೈಲಿನ ಮೂಲಕ ದಾವಣಗೆರೆಗೆ ಹೊರಟರೆ, ವಾಪಾಸ್ ಮನೆ ಸೇರುವುದು ರಾತ್ರಿ ಹತ್ತಕ್ಕೇ.
ಹುಟ್ಟು  ಹೋರಾಟಗಾರ ಶಾಸ್ತ್ರೀಗಳಿಗೆ ಈಗ 75ರ ಹರೆಯ. ಇಬ್ಬರು ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪೂರೈಸಿ ಬೆಂಗಳೂರಲ್ಲಿ  ವೃತ್ತಿ ನಿರತರಾಗಿದ್ದು, ಮೂರನೆಯ ಮಗ ಎಂಜಿನಿಯರಿಂಗ್ ಮುಗಿಸಿ, ನೌಕರಿ ತಲಾಶೆಯಲ್ಲಿ ಬೆಂಗಳೂರಲ್ಲಿ ಸಹೋದರಿಯರೊಂದಿಗೆ ಇದ್ದಾನೆ.
ಮಾಯಕೊಂಡದಲ್ಲಿ  ಶಾಸ್ತ್ರೀಗಳ ಮನೆ.


ಹದಿನೈದು ದಿನಕ್ಕೊಮ್ಮೆ ಬೆಂಗಳೂರಿಗೆ ತಾವೇ ಹೋರಾಡಿ ಸಾಕಾರಗೊಳಿಸಿದ ರೈಲಿನಲ್ಲಿ ಬೆಂಗಳೂರಿಗೆ ಹೋಗಿ ಶನಿವಾರ-ಭಾನುವಾರ ಮಕ್ಕಳೊಂದಿಗೆ ಕಳೆದು ಬರುತ್ತಾರೆ. ಇನ್ನೇನು ಮಕ್ಕಳು ಊರಿಗೆ ಬರುವ ಸಾಧ್ಯತೆ ಕಡಿಮೆ ಎಂಬುದು ಈ ಹೊತ್ತಿನಲ್ಲಿ  ಶಾಸ್ತ್ರೀ ಅನಸಿಕೆ. ಸಹೋದರರೆಲ್ಲ ಒಪ್ಪಿದರೆ, ಪಕ್ಕದಲ್ಲಿ ಖಾಲಿ ಇರುವ ಜಾಗವನ್ನೂ ಸೇರಿಸಿ ಒಂದು ಕಲ್ಯಾಣಮಂಟಪ ಕಟ್ಟಿ ಮನೆತನದ ಗುಡಿ ನಿರ್ವಹಣೆಗೆ ಒಂದು ಸಣ್ಣ ಆದಾಯ ಮಾಡಬೇಕು. ಸದ್ಯ 500 ರೂ ಕೊಟ್ಟು  ಗುಡಿಯ ಒಳಕ್ಕೆ ಒಂದು ಟೋನರ್ ಹಾಕಿದ್ದು, ವಿದ್ಯುತ್ ಇರುವಷ್ಟು ಹೊತ್ತು ಅಲ್ಲಿ  ಎಂಎಸ್ ಸುಬ್ಬಲಕ್ಷ್ಮೀ ಹಾಡಿದ ದೇವರ ನಾಮ ಪುನರಾವರ್ತನೆ ಆಗುತ್ತದೆ.
ಹಸಿರು ಶಾಲಿನ ಬ್ರಾಂಡ್ ಶಾಸ್ತ್ರಿಗಳಿಗೆ ಅಪ್ಪನ ಪಾಲಿನ ಆಸ್ತಿಯಾಗಿ ಮಾಯಕೊಂಡ ಸಮೀಪ 2.20 ಎಕರೆ ಭೂಮಿ ಇದ್ದು, ಇಲ್ಲಿ ಈ ಬಾರಿ ಮೆಕ್ಕೆ ಜೋಳವನ್ನು ಕೃಷಿ ಮಾಡುತ್ತಿದ್ದಾರೆ.
ಊರಲ್ಲಿ ಇರುವಾಗ ಕೆಲವೊಮ್ಮೆ  ಹೊಲಕ್ಕೆ ಹೋಗುವುದು ಬಿಟ್ಟರೆ, ಅಲ್ಲಿ ಅವರು ಹೆಚ್ಚು ಗಮನ ಸೆಳೆಯವುದಿಲ್ಲ. ಆದರೆ ವಾರದಲ್ಲಿ ಪ್ರತಿ ದಿನವೂ ಇವರಿಗೆ ದಾವಣಗೆರೆಯಲ್ಲಿ ಕೆಲಸ ಇರುತ್ತದೆ. ದಾವಣಗೆರೆಯಲ್ಲಿ  ಸುತ್ತಾಡುವುದಕ್ಕೆ  ಇವರು ಒಂದು ಸೈಕಲ್ ಇಟ್ಟಿದ್ದು, ರಾತ್ರಿ ರೈಲು ಹತ್ತುವ ಮೊದಲು ಸರಕಾರಿ ನಿರೀಕ್ಷಣಾ ಗೃಹದಲ್ಲಿ ಇಟ್ಟು ಚಾವಿ ಹಾಕಿ ಹೋಗುತ್ತಾರೆ. ಈ ಮೊದಲು ರೈಲ್ವೆ ನಿಲ್ದಾಣದಲ್ಲಿ  ಇವರು ಸೈಕಲ್ ಇಡುತ್ತಿದ್ದರು, ಅಲ್ಲಿ  ಎರಡು ಸೈಕಲ್ ಕಳವು ಆಗಿದ್ದರಿಂದ ಅಲ್ಲಿ ಬಿಟ್ಟರು. ಪೊಲೀಸರೊಬ್ಬರ ಸಲಹೆಯ ಮೇರೆಗೆ ಇದೀಗ ಗೆಸ್ಟ್‌ಹೌಸ್‌ನಲ್ಲಿಟ್ಟು ಚಾವಿ ಹಾಕಿ, ತಮ್ಮ  ಆ ದಿನದ ಕಾಯಕ ಮುಗಿಸಿ ಹೊರಡುತ್ತಾರೆ.
ಮಾಯಕೊಂಡ- ದಾವಣಗೆರೆ ಓಡಾಟಕ್ಕೆ ತಿಂಗಳಿಗೆ 160 ರೂ. ಕೊಟ್ಟು ಸೀಸನಲ್ ರೈಲ್ವೆ ಪಾಸ್ ಪಡೆದುಕೊಂಡಿದ್ದಾರೆ. ಪತ್ರಿಕಾ ಪ್ರಕಟಣೆ ಸಿದ್ಧತೆ, ಜರಾಕ್ಸ್ ಮತ್ತಿತರ ಕಾರ್ಯಕ್ಕೆ ತಿಂಗಳಿಗೆ 15,000 ರೂ.ಗಳಷ್ಟು ಖರ್ಚು ಇರುತ್ತದೆ. ಅಲ್ಲದೆ ಮನೆಯಲ್ಲಿ  ದಿನವೂ ಅರ್ದ ಲೀಟರ್ ಹಾಲು ಪಡೆಯುವ ಜತೆಗೆ, ದಾವಣಗೆರೆಯಿಂದ ಹೋಗುವಾಗ ಅರ್ದ ಲೀಟರ್ ಮೊಸರು ಕೊಂಡು ಹೋಗುತ್ತಾರೆ.
ತಾವು ಕಾಯಿಸಿದ ಹಾಲಿನಲ್ಲಿ ಪಕ್ಕದಲ್ಲೇ ಇರುವ ತನಗಿಂತ ವಯಸ್ಸಾದ ಹಿರಿಯ ಮಹಿಳೆಗೆ ಅದರಲ್ಲಿ ಅರ್ಧ ಕೊಡುವುದು ಇವರ ರೂಢಿ. ತಮ್ಮನೊಂದಿಗೆ ಅಷ್ಟೇನೂ ಇವರಿಗೆ ಮಾತಿಲ್ಲ. ತಿಂಗಳಿಗೆ 2500 ರೂ. ತನಕ ಖರ್ಚು ಇವರಿಗಿದೆ.
ಆ ವರ್ಷದ ಆದಾಯದಲ್ಲಿ  ತಮ್ಮ ಖರ್ಚಿಗೆ ಏನಾದರೂ ಕೊರತೆ ಆದರೆ ಮಕ್ಕಳು ಸ್ವಲ್ಪ ಕೊಡುತ್ತಾರೆ. ಇಬ್ಬರು ಹೆಣ್ಣು ಮಕ್ಕಳು ಉತ್ತಮ ಕೆಲಸದಲ್ಲಿ ಇದ್ದು, ಅವರು ಕೊಡುತ್ತಾರೆ. ಸುಮಾರು 40 ವರ್ಷಗಳ ಇವರ ಸಾರ್ವಜನಿಕ ಜೀವನಕ್ಕೆ ಇವರು ಯಾವುದೇ ಸಂಬಳ, ಗಿಂಬಳ ಪಡೆದಿಲ್ಲ ಎಂಬುದಕ್ಕೆ ಮನೆಯೇ ಇವರ ನಿದರ್ಶನ.
ಮೂರು ಕೊಠಡಿಗಳ ಇವರ ಮನೆಯ ತುಂಬ ಎಲ್ಲವೂ ಅಸ್ತವ್ಯಸ್ತ ! ಅಲ್ಲಲ್ಲಿ ಚೆಲ್ಲಾಪಿಲ್ಲಿಯಾದ  ದಿನಪತ್ರಿಕೆಗಳು, ಗೋಡೆ ಮೇಲೆ 150ಕ್ಕೂ ಮಿಗಿಲಾದ ಸಾರ್ವಜನಿಕ ವ್ಯಕ್ತಿಗಳ ದೂರವಾಣಿ ನಂಬರ್. ಚಾಕ್‌ನಲ್ಲಿ ಬರೆದುಕೊಂಡಿರುವ ದೂರವಾಣಿ ಸಂಖ್ಯೆಯಲ್ಲಿ ಹೆಚ್ಚಿನ ಯಾವುದಕ್ಕೂ ಹೆಸರಿಲ್ಲದ ಕಾರಣ, ಶಾಸ್ತ್ರೀ ಮಾತ್ರ ಅದನ್ನು ಗುರುತಿಸಬಲ್ಲರು.
 ಹೆಣ್ಣಿಲ್ಲದ ಮನೆಯನ್ನು ಪ್ರತಿ ದಿನ ಸ್ವಚ್ಛ ಮಾಡುವುದು ಇವರಿಗೆ ಸಾಧ್ಯವಾಗುತ್ತಿಲ್ಲ. ಇಲ್ಯಾಕೆ ಇರುತ್ತೀರಿ , ಬನ್ನಿ ಬೆಂಗಳೂರಿಗೆ ಎಂದು ಮಕ್ಕಳು ಕರೆದರೆ, ದಾವಣಗೆರೆಯಲ್ಲಿ ಇನ್ನೂ ಅದೆಷ್ಟೋ ಕೆಲಸ ಇದ್ದು, ಅದು ಮುಗಿದ ಮೇಲೆ ಬರೋಣ ಎಂದು ಮುಂದೂಡುತ್ತಾರೆ. ಇವರಿಗೆ ಬೆಂಗಳೂರಿಗೆ ಹೋಗಿ ಇರಲು ಮನಸ್ಸಿಲ್ಲ !

ಶಾಸ್ತ್ರೀ ಹೋರಾಟ:

ಈ ದೇಶದ ರೈತರು ಶೋಷಿತರಾಗಿದ್ದಾರೆ. ಅವರ ಪರವಾಗಿ ಒಂದಿಷ್ಟು ಸುಶಿಕ್ಷಿತ ರೈತರು ಹೋರಾಡಬೇಕು ಎಂದು ಗಾಂೀಜಿ ಮಾತಿನಿಂದ ಪ್ರಭಾವಿತರಾಗಿ ಎಂಎಸ್‌ಕೆ ಶಾಸ್ತ್ರೀ ರೈತ ನಾಯಕರಾದರು.
ಹೊನ್ನಾಳಿಯ ರೈತ ನಾಯಕ ದಿ.ಎಚ್.ಎಸ್. ರುದ್ರಪ್ಪ ಇವರಿಗೆ ಹಸಿರು ಶಾಲಿನ ದೀಕ್ಷೆ ಕೊಟ್ಟರು. ಅಲ್ಲಿಂದಲೂ ರೈತರಿಗಾಗಿ ಹೋರಾಡುತ್ತ ಬಂದಿದ್ದಾರೆ.
ಅಪ್ಪನ ಕಾಲದ ಹಳೆಯ ಮನೆಯನ್ನೇ ಸಹೋದರರೊಂದಿಗೆ ಹಂಚಿಕೊಂಡು ಚೂರು ಪಾರು ರಿಪೇರಿ ಮಾಡಿಸಿ ಜೀವನ ಸವೆಸುತ್ತಿದ್ದಾರೆ. ಆದರೆ ದಾವಣಗೆರೆ ಪ್ರತ್ಯೇಕ ಜಿಲ್ಲೆ, ಇಲ್ಲಿನ ವಿಶ್ವ ವಿದ್ಯಾಲಯ, ಬೆಂಗಳೂರು-ದಾವಣಗೆರೆ ಇಂಟರ್ ಸಿಟಿ ರೈಲು ಹೋರಾಟದಲ್ಲಿ  ಶಾಸ್ತ್ರಿಯದ್ದು  ಪ್ರಧಾನ ಪಾತ್ರ.
1993ರಲ್ಲಿ  14 ದಿನ ಇಲ್ಲಿನ ಹೆದ್ದಾರಿ ಬಂದ್ ಮಾಡಿ, ಆಗಿನ ಪ್ರಧಾನಿ ಪಿವಿಎನ್ ಅವರನ್ನು ಭೇಟಿಯಾಗಿ ರಸಗೊಬ್ಬರ ಸಬ್ಸಿಡಿ ತಂದರು. ಹಸಿರು ಶಾಲನ್ನು ಎಂದಿಗೂ ಅಪವಿತ್ರಗೊಳಿಸಿಲ್ಲ. ಹೋರಾಟ ಇವರ ವ್ಯಸನ. ಸಾರ್ವಜನಿಕ ಹಣ ಹೋಗಲಿ, ತಮ್ಮದೇ ಆದಾಯ ಹೊಂದಿಸಿಯೂ ಒಂದು ಮನೆ ಕಟ್ಟಿಕೊಳ್ಳುವುದು ಸಾಧ್ಯವಾಗಿಲ್ಲ. ಸರಳತೆಯ ಇವರಲ್ಲಿರುವಂಥ ಹಟವೂ ವಿರಳ.
Read More

ಕಾರ್ಪೋರೇಟ್ ನಿರ್ವಹಣೆ ಕೂಡ ವಿಶಿಷ್ಟ ರೀತಿ ಅಷ್ಟಾವಧಾನ

ಕಾರ್ಪೋರೇಟ್ ನಿರ್ವಹಣೆ ಕೂಡ ವಿಶಿಷ್ಟ ರೀತಿ ಅಷ್ಟಾವಧಾನ


ಸದಾನಂದ ಹೆಗಡೆ ದಾವಣಗೆರೆ
ಕಬ್ಬಿನಾಲೆ ವಸಂತ ಭಾರದ್ವಾಜ್ ಸಾಹಿತಿ, ವಿದ್ವಾಂಸರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರು. ಯಕ್ಷಗಾನ ಅರ್ಥದಾರಿಯಾಗಿ, ಅಕಾಡೆಮಿ ಸದಸ್ಯರಾಗಿಯೂ ನಿರ್ವಹಿಸಿದ ಭಾರದ್ವಾಜ್ ಅಷ್ಟಾವಧಾನಿಯಾಗಿ ಹೆಸರು ಮಾಡಿದ್ದಾರೆ. ಬ್ಯಾಂಕ್ ನೌಕರಿಯಿಂದ ವಿಆರ್‌ಸ್ ಪಡೆದು ಮೈಸೂರಲ್ಲಿ  ವಾಸಿಸುತ್ತಾರೆ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಕಲಾಕುಂಚ ಕನ್ನಡ ಕುವರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಭಾಗವಹಿಸಿದ ನಂತರ, ವಿಕ ಕಚೇರಿಗೆ ಭೇಟಿ ನೀಡದ್ದರು. ಈ ಸಂದರ್ಭ ಅವಧಾನಕಲೆ ಹಾಗೂ ಇತ್ತೀಚೆಗೆ ಚರ್ಚೆಯಲ್ಲಿರುವ ಕಾರ್ಪೋರೇಟ್ ನಿರ್ವಹಣಾ ಕಲೆಯ ನಡುವಿನ ಅಂತರ್ ಸಂಬಂಧ ಕುರಿತು ಮಾತನಾಡಿದ್ದಾರೆ.
* ಅವಧಾನವನ್ನು ಸಮಕಾಲೀನ ಮ್ಯಾನೇಜರ್‌ಗಳು ತಮ್ಮ  ಮಲ್ಟಿಟಾಸ್ಕಿಂಗ್ ಸವಾಲುಗಳಿಗೆ ಹೇಗೆ ಅನ್ವಯಿಸಿಕೊಳ್ಳಬಹುದು ?
ನಾನೂ ಓರ್ವ ಮ್ಯಾನೇಜರ್ ಆಗಿದ್ದವ. ಆದರೆ ಅವಧಾನವನ್ನು ಮಾತ್ರ ಪ್ರತ್ಯೇಕ ಕಲೆ ಎಂದೇ ಗ್ರಹಿಸಿಕೊಂಡು ಮಾಡುತ್ತ ಬಂದೆ. ನಿಜ, ಅವಧಾನ ಕಲೆಯನ್ನು ಮ್ಯಾನೇಜರ್‌ಗಳು ತಮ್ಮ ನಿರ್ವಹಣಾ ಸವಾಲುಗಳಿಗೆ ಅಳವಡಿಸಿಕೊಳ್ಳುವ ಅವಕಾಶ ಇದೆ. ಹಾಗೆ ನೋಡಿದರೆ, ನಮ್ಮಲ್ಲಿ  ಗೃಹಿಣಿಯರು ವಾಸ್ತವ ಬದುಕಿನಲ್ಲಿ  ಅವಧಾನಿಗಳಾಗಿದ್ದಾರೆ. ಅಡುಗೆ ಮಾಡುತ್ತಲೇ ರೇಡಿಯೋ ಕೇಳುತ್ತಾರೆ,ಟೀವಿ ನೋಡುತ್ತಾರೆ. ಮಧ್ಯೆ ಮಕ್ಕಳ ತಂಟೆ, ಯಜಮಾನನ ಪ್ರಶ್ನೆಗಳನ್ನು ಸಹನಶೀಲರಾಗಿ ನಿರ್ವಹಿಸುತ್ತಿರುತ್ತಾರೆ. ಮಹಿಳೆಯರಲ್ಲಿ  ಏಕಕಾಲದಲ್ಲಿ ಕೆಲವು ಕೆಲಸವನ್ನು ನಿರ್ವಹಿಸುವ ಕಲೆ ರಕ್ತಗತವಾಗಿ ಬಂದಿದೆ.  ಆದರೆ ನಾನು ಮಾಡುವ ಅಷ್ಟಾವಧಾನವು ಸಾಹಿತ್ಯ, ಸಾರಸ್ವತ ಲೋಕವನ್ನು  ಜಾಣ್ಮೆಯಿಂದ ರಂಜಿಸುವುದಕ್ಕೆ  ಸೀಮಿತವಾಗಿರುತ್ತದೆ.
* ಅಷ್ಟಾವಧಾನ ಸಂದರ್ಭ ನಿಮ್ಮ ಮನಸ್ಥಿತಿ ಹಗಿರುತ್ತದೆ ?
ನಾಟಕದಲ್ಲಿ, ಯಕ್ಷಗಾನದಲ್ಲಿ  ನಾವು ಪಾತ್ರನಿರ್ವಹಿಸುವ ರೀತಿಯಲ್ಲಿಯೇ ಅವಧಾನಿಯಾಗಿಯೂ ನಾನು ಓರ್ವ ಪಾತ್ರಿಯಾಗಿರುತ್ತೇನೆ. ಓದಿದ ಎಲ್ಲವನ್ನೂ ನೆನಪಿಸಿಕೊಂಡು ಪ್ರಶ್ನೆ ಕೇಳುವವರನ್ನು, ಆ ಕ್ಷಣದ ಸನ್ನಿವೇಶವನ್ನು ಸಮರ್ಥವಾಗಿ ನಿರ್ವಹಿಸಲು ನಾನು ಮಾನಸಿಕವಾಗಿ ಸಿದ್ಧವಾಗಿರುತ್ತೇನೆ. ನನ್ನ ಓದಿನ ಅನುಭವದ ಜತೆ ಆತ್ಮವಿಶ್ವಾಸದ ಪಾರಾಕಾಷ್ಟೆಯನ್ನೂ ಆ ವೇದಿಕೆಯಲ್ಲಿ  ತಂದುಕೊಂಡಿರುತ್ತೇನೆ. ಅಷ್ಟಾವಧಾನದ ಪಾತ್ರಿಯಾಗಿ ನನ್ನ ಮೆದುಳಿಗೆ ದುಪ್ಪಟ್ಟು  ರಕ್ತ ಸಂಚಾರ ಆಗುತ್ತಿರುತ್ತದೆ. ನನ್ನೆದುರಿಗೆ ಇರುವವವರು ಯಾರೇ ಇದ್ದರೂ, ಅವರ ಪ್ರಶ್ನೆಗೆ ಪರಮಾವಧಿ ಜಾಣ್ಮೆಯಲ್ಲಿ ಉತ್ತರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡಿರುತ್ತೇನೆ. ಆ ಮಟ್ಟಿಗೆ ಅದೊಂದು ಆವೇಶ. ಇಂಥ ಮನಸ್ಥಿತಿ  ಅವಧಾನಿಗೆ ಎಷ್ಟೊಂದು ಶಕ್ತಿ ಕೊಡುತ್ತದೆ ಎಂದರೆ  ಎಂಥ ಕನ್ನಡ ಪಂಡಿತರನ್ನೂ ತಲೆಕೆಳಗು ಮಾಡುತ್ತೇವೆ. ಜಾಗಟೆಯ ಗದ್ದಲದ ನಡುವೆಯೂ ಕೊಟ್ಟ ವಿಷಯದ ಮೇಲೆ ನಿರ್ದಿಷ್ಟ  ಮಾತ್ರೆಯ ಕವನ ಹೊಸೆಯುತ್ತಲೇ, ಅಪ್ರಸ್ತುತ ಪ್ರಸಂಗಿಯ ಪ್ರಶ್ನೆಗೆ ಸುಂದರವಾಗಿ ಉತ್ತರಿಸಿ ಪ್ರೇಕ್ಷಕರ ಮನ ಗೆಲ್ಲುವುದು ಸಾಧ್ಯವಾಗುತ್ತದೆ.
* ಅವಧಾನದ ಈ ಆವೇಶ ಅಥವಾ ಮನೋಭಾವ ಬಿಡಿಯಾಗಿ ಚಿತ್ರಿಸಲು ಸಾಧ್ಯವೇ ?
ಮನೋಭಾವದ ಹಿಂದೆ ಎಎಸ್‌ಕೆ ಎಂಬ ಮೂರು ಇಂಗ್ಲೀಷ್ ಅಕ್ಷರದ ತತ್ವ ಇರುವುದನ್ನು  ನಾನು ಇಲ್ಲಿ  ವಿವರಿಸಬಲ್ಲೆ. ಎ ಅಂದರೆ ಎ್ಯಟ್ಟಿಟ್ಯೂಡ್ ಅಂದರೆ ಧೋರಣೆ. ಎಸ್ ಎಂದರೆ ಸ್ಕಿಲ್ ಅಂದರೆ ಜಾಣ್ಮೆ ಹಾಗೂ ಮೂರನೆಯ ಅಕ್ಷರ ಕೆ ಎಂದರೆ ನಾಲೇಜ್ ಅಂದರೆ ಜ್ಞಾನ. ಅವಧಾನ ಮಾಡುವರು ಸಾಹಿತ್ಯದ ತೀವ್ರ ಓದುಗರಾಗಿರಲೇಬೇಕು. ಜ್ಞಾನದ ಭಂಡಾರವೇ ಅವರಲ್ಲಿ ಇರಬೇಕು. ಜ್ಞಾನ ಹಾಗೂ ಜೀವನಾನುಭವವನ್ನು ಜೋಡಿಸಿ ತಕ್ಷಣವೇ ಹೊಸೆಯುವ ಜಾಣ್ಮೆಯೂ ಬೇಕು. ಇದಕ್ಕೆಲ್ಲ ಪೂರಕವಾಗಿ ನಾನೊಬ್ಬ ಅವಧಾನಿ, ಉತ್ತರಿಸಲೇಬೇಕು ಎಂಬ  ಮಾಡು ಇಲ್ಲವೇ ಮಡಿ ಎಂಬ ಬಲವಾದ ಧೋರಣೆ ಇರಲೇಬೇಕು.* ಇದನ್ನು ಸಮಕಾಲೀನ ಮ್ಯಾನೇಜರ್‌ಗಳು ಹೇಗೆ ಅಳವಡಿಸಿಕೊಳ್ಳಬಹದು.
ಅವಧಾನ ವೇದಿಕೆಯಲ್ಲಿ  ಯಾವಾಗಲೂ ಇರುವುದು ದೊಡ್ಡ ದಣಿವಿನ ಕೆಲಸ. ಅವಧಾನದ ಯಥಾವತ್ತನ್ನು  ಮ್ಯಾನೇಜರ್ ಒಬ್ಬ  ದಿನದ ಎಲ್ಲ  ಹೊತ್ತಲ್ಲೂ  ತನ್ನಲ್ಲಿ ಆಹ್ವಾನಿಸಿಕೊಂಡು ತನ್ನೆದುರಿಗೆ ಬರುವ ಸವಾಲನ್ನು ಎದುರಿಸುವುದು ಪ್ರಾಯೋಗಿಕವಾಗಿ ಸರಿ ಅನ್ನಿಸುವುದಿಲ್ಲ. ಅವಶ್ಯವೂ ಇಲ್ಲ. ಅದರ ಬದಲು ಅವಧಾನದಲ್ಲಿ ಸಮಸ್ಯಾ ಪೂರಣ ಎಂಬ ಒಂದು ವಿಭಾಗ ಇದೆ. ಅದನ್ನು ಅನುಸರಿಸಿದರೆ  ಏಕಕಾಲಕ್ಕೆ ಬರುವ ಎಲ್ಲ  ಸಮಸ್ಯೆಯನ್ನೂ ನಾವು ನಿರ್ವಹಿಸುವುದು ಸಾಧ್ಯ. ಹಾಗೆ ನೋಡಿದರೆ ಮ್ಯಾನೇಜಿಂಗ್ ಕೂಡ ಒಂದು ಅವಧಾನವೇ.
* ಮ್ಯಾನೇಜರ್ ಅಥವಾ ನಿರ್ವಾಹಕರಿಗೆ   ನಿಮ್ಮ ಕಿವಿಮಾತೇನು ?
ನಿರ್ವಹಣೆ ಕೂಡ ಒಂದು ಕಲೆ. ಇಲ್ಲಿ ಕೇವಲ ಜ್ಞಾನ ಮಾತ್ರ ಸಾಲುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ಪರಿಪೂರ್ಣ ಜ್ಞಾನಿ ಆಗುರಿವುದು ಕಷ್ಟ. ಆದರೆ ಜ್ಞಾನಿಯಂತೆ ಕಾಣಿಸಿಕೊಳ್ಳುವುದು, ಜ್ಞಾನ ಆಗಮನಕ್ಕೆ  ಮುಕ್ತವಾಗಿರುವುದು ಅತ್ಯಂತ ಮುಖ್ಯವಾಗಿರುತ್ತದೆ. ಕ್ಷಣ ಕ್ಷಣಕ್ಕೆ ಸನ್ನಿವೇಶಗಳು ಬದಲಾದರೂ, ನಾವು ವಿಚಲಿತರಾಗದೆ ಎದುರಿಸಲು ಸಜ್ಜಾಗಿರಬೇಕು. ನಾವು ಜಾಗೃತರಾಗಿರಲು ಸವಾಲುಗಳೂ ನಮಗೆ ಅವಶ್ಯ ಎಂಬುದನ್ನು ನಾವು ನಂಬಿರಬೇಕು.    
ಅಷ್ಟಾವಧಾನಿ  ಕಬ್ಬಿನಾಲೆ ವಸಂತ ಭಾರದ್ವಾಜ್
Read More

ಉಂಚಳ್ಳಿ ಜಲಪಾತ ಸಮೀಪ ತಲೆ ಎತ್ತಿದೆ ಚಾರೆಯ ವಿರೂಪಾಕ್ಷ ದೇವಾಲಯ

 ಉಂಚಳ್ಳಿ ಜಲಪಾತ ಸಮೀಪ ತಲೆ ಎತ್ತಿದೆ ಚಾರೆಯ ವಿರೂಪಾಕ್ಷ ದೇವಾಲಯ
 ಚಾರೆಯ ವಿರೂಪಾಕ್ಷ ದೇವಾಲಯ
ಇದು 20 ವರ್ಷದ ಹಿಂದಿನ ಮಾತು. ’ನಮ್ಮೂರ ಮಂದಾರ ಹೂವೆ’ ಸಿನಿಮಾ ಬಳಿಕ ಉಂಚಳ್ಳಿ ಜಲಪಾತ ಒಮ್ಮೆಲೆ ರಾಜ್ಯದಲ್ಲಿ ಖ್ಯಾತಿ ಪಡೆಯಿತು. ಚಾರಣ, ಕಾಡಿನ ತೋರಣ ಎರಡಕ್ಕೂ ಸಲ್ಲುವ ಈ ಪ್ರದೇಶ ಪಡ್ಡೆ ಹುಡುಗರ ಕನಸಿನ ತಾಣ.  ಹಾಗೆ ನೋಡಿದರೆ ರಾಜ್ಯದ ಐಟಿ ಕ್ರಾಂತಿ, ಕಾಡು ಮೇಡು ಸುತ್ತವ ಪ್ರವಾಸಿಗರ ಸಂಖ್ಯೆಯನ್ನೂ ಹೆಚ್ಚಿಸಿದ್ದು, ಎಲ್ಲ ಕಾಲದಲ್ಲೂ ಇಲ್ಲಿಗೆ ಪ್ರವಾಸೀ ಗುಂಪುಗಳು ಲಗ್ಗೆ ಇಡುತ್ತವೆ. ಈ ಪ್ರದೇಶದ ಹೊಸ ಆಕರ್ಷಣೆ ಚಾರೆಯ ವಿರೂಪಾಕ್ಷ ದೇವಳ. ಉಂಚಳ್ಳಿ ಜಲಪಾತದ ನಾಲ್ಕಾರು ಕಿಮೀ ವ್ಯಾಪ್ತಿಯ್ಲಲಿ ವಿಜಯ ನಗರ ಶೈಲಿಯಲ್ಲಿ  ನಿರ್ಮಾಣವಾಗಿದೆ ಈ ಶಿಲಾಮಯ ದೇಗುಲ.
ಅಘನಾಶಿನಿಯ ಹಿನ್ನೀರು, ಸ್ಥಳೀಯವಾಗಿ ಮಾಣಿ ಹೊಳೆ ಎಂದು ಇಲ್ಲಿ  ಹೆಸರುವಾಸಿ. ಹರಿದ್ವರ್ಣದ ಕಾಡು, ಹೊಳೆ ಸಾಲಿನಲ್ಲಿ  200/300 ವರ್ಷದಿಂದ ಗಟ್ಟಿಯಾಗಿ ನಿಂತ ಮಿಡಿ ಅಪ್ಪೆ ,ಬನಾಟೆ, ದೇವದಾರು ಮರಗಳಲ್ಲದೆ ಇನ್ನೂ ಕೆಲವು ಆಕರ್ಷಣೆ ಇದೆ. ಮಳೆಯ ಕಾಲದಲ್ಲಿ  ಉಂಬಳ ಎಂಬ ವಿಚಿತ್ರ ಕಾಡು ಜಂತುವೂ ಇಲ್ಲಿನ ವಾಸ್ತವ.
ಈ ಪ್ರದೇಶ ಬರುವುದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೆಗ್ಗರಣೆ ಹೋಬಳಿಯಲ್ಲಿ. ಯಾವುದೇ ಒಂದು ನೈಸರ್ಗಿಕ ತಾಣವು ಹಿಂದುಗಳ ದೃಷ್ಟಿಯಲ್ಲಿ  ಪರಿಪೂರ್ಣ ಯಾತ್ರಾ ಸ್ಥಳ ಆಗುವುದು ಅಲ್ಲೊಂದು ದೇವಳವು ತಲೆ ಎತ್ತಿದಾಗ ಎಂಬ ಮಾತಿಗೆ ಚಾರೆಯ ವಿರೂಪಾಕ್ಷ  ದೇವಳ ಮರು ನಿರ್ಮಾಣ ಇದೀಗ ಸಾಕ್ಷಿಯಾಗಿದೆ.
ಈಶ್ವರನನ್ನು ವಿರೂಪಾಕ್ಷ ಎಂದು ಗುರುತಿಸಿ, ಗುಡಿ ನಿರ್ಮಿಸಿ ಪೂಜಿಸಿದ್ದು  ವಿಜಯ ನಗರದ ದೊರೆಗಳು. ಹಂಪಿಯ ವಿರೂಪಾಕ್ಷ ದೇವಳ ಈಗಲೂ ಕಾರಣಿಕ ಹಾಗು ಶಿಲ್ಪಕಲಾ ವೈಭವದ ಕಾರಣ ಅಪರೂಪದ್ದಾಗಿದೆ. ಚಾರೆಯಲ್ಲಿ  ಈ ಮೊದಲು ಇದ್ದ ಸಣ್ಣ ಗುಡಿಗೂ ಇಷ್ಟೇ ಇತಿಹಾಸ ಇತ್ತು.
ಇದೀಗ ದಿ. ಶಿವರಾಮ ಹೆಗಡೆ ಚಾರೆ ಆಶೆಯದಂತೆ ಮಂಗಳೂರಿನಲ್ಲಿ  ಉದ್ಯಮ ಹೊಂದಿರುವ ಉಮೇಶ್ ಹೆಗಡೆ ಚಾರೆ ಮತ್ತು ಊರವರು ವಿರೂಪಾಕ್ಷ ದೇವಳವನ್ನು ಸುಮಾರು ಐದು ವರ್ಷದ ನಿರಂತರ ಶ್ರಮದಿಂದ 4 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ನಿಸಿರ್ಗ ಸಹಜ ಪ್ರವಾಸಿ ಸ್ಥಳಕ್ಕೆ ಯಾತ್ರಾ ಸ್ಥಳದ ಆಯಾಮವನ್ನೂ ನೀಡಿದ್ದಾರೆ.
ಶಿಲಾಮಯವಾದ ದೇವಳದಲ್ಲಿ  ಗರ್ಭಗುಡಿ, ಪ್ರಸಾದ ಮಂಟಪಗಳು ಹಂಪಿ ಶೈಲಿಯಲ್ಲಿ ನಿರ್ಮಾಣ ಆಗಿದ್ದರೆ, ಸುತ್ತಲೂ ರಕ್ಷಣಾತ್ಮಕವಾದ ಚಂದ್ರಶಾಲೆಯ ದೇವಳಕ್ಕೆ ದೈನಂದಿನ ಪೂಜಾ ಅನುಕೂಲವನ್ನು ಕಲ್ಪಿಸಿದೆ. ದೇವಳದ ವಿಶೇಷ ಎಂದರೆ ಎಡದಲ್ಲಿ ಇರುವ ಅನ್ನಪೂರ್ಣೇಶ್ವರಿ ಹಾಗೂ ಬಲದಲ್ಲಿ ಇರುವ ಗಣಪತಿ ಗುಡಿಗಳು. ಊರ ಹೊರಗೆ ಇರುವ ದೇವಳಕ್ಕೆ ಹೋಗಲು ಮಣ್ಭಿನ ಕಣಿವೆಯೂ ಅನನ್ಯ.
ಇಲ್ಲಿಂದ ಎರಡು ಕಿಮೀ ದೂರದಲ್ಲಿದೆ ಪಶ್ಚಿಮ ಘಟ್ಟದ ಪ್ರಖ್ಯಾತ ಝರಿಗಳಲ್ಲೊಂದಾದ ಉಂಚಳ್ಳಿ ಜೋಗ. ಅಘನಾಶಿನಿ ನದಿ ಘಟ್ಟ ಪ್ರದೇಶದಿಂದ 400 ಅಡಿ ಆಳಕ್ಕೆ ಇಲ್ಲಿ ಧುಮುಕುವ ರುದ್ರ ರಮಣೀಯ ದೃಶ್ಯ ಇಲ್ಲಿದೆ. ಅದೇ ರೀತಿ ಬುರುಡೆ ಜೋಗವೂ ಚಾರೆ ಗುಡ್ಡದ ಆಚೆ ಇದ್ದು, ಚಾರಣ ತಾಣವಾಗಿಯೂ ಇದು ಖ್ಯಾತಿ ಪಡೆದಿದೆ.

ಮಾರ್ಗ :
ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆ ತಾಲೂಕು ಕೇಂದ್ರ ಸಿದಾಪುರ(350 ಕಿಮಿ). ಸಿದ್ದಾಪುರ ಬಿದ್ರಕಾನು,ಹಾರ್ಸಿಕಟ್ಟಾ, ಹೆಗ್ಗರಣೆ, ಚಾರೆ( ಉಂಚಳ್ಳಿ/ಬುರುಡೇ ಜೋಗ) (40 ಕಿಮಿ)


Read More